ದಾವಣಗೆರೆ: ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಹಾಗೂ ಹೊಸಪೇಟೆ ತಾಲ್ಲೂಕಿನ ಕೆಂಚಟನಹಳ್ಳಿ ಗ್ರಾಮದಲ್ಲಿ ಮನೆಗಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದ್ದು, ₹ 2,59,680 ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ.ಭೀಮಾಶಂಕರ ಎಸ್.ಗುಳೇದ ತಿಳಿಸಿದರು.
ದೇವರಾಜ ಅರಸ್ ಬಡಾವಣೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಯಲ್ಲಿ ಮಂಗಳವಾರ ಮಾಧ್ಯಮ ಪ್ರತಿ ನಿಧಿಗಳ ಜತೆ ಮಾತನಾಡಿದ ಅವರು, ಆರೋಪಿ ಶಿವಕುಮಾರ್ ಹೂವಿನ ಹಡಗಲಿ ತಾಲ್ಲೂಕಿನ ಮಸಲವಾಡ ಗ್ರಾಮದ ನಿವಾಸಿ ಎಂದು ತಿಳಿಸಿದರು.
‘ಆರೋಪಿ ಹಿಂದೆಯೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಹಲವು ಬಾರಿ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಈಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ. ಈ ಬಾರಿ ಜಾಮೀನು ಸಿಗದಂತೆ ಕ್ರಮ ಜರುಗಿಸಲಾಗುವುದು’ ಎಂದು ಎಸ್ಪಿ ತಿಳಿಸಿದರು.
‘2 ಪ್ರಕರಣಗಳಿಗೆ ಸಂಬಂಧಿಸಿದಂತೆ 98.6 ಗ್ರಾಂ ಬಂಗಾರ, 314 ಗ್ರಾಂ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ. ಹರಪನಹಳ್ಳಿ ಸಿಪಿಐ ಡಿ.ದುರುಗಪ್ಪ ಅವರ ನೇತೃತ್ವದ ತಂಡದಲ್ಲಿ ಹಲವಾಗಲು ಠಾಣೆ ಪಿಎಸ್ಐ ಸಣ್ಣನಿಂಗಣ್ಣನವರ್, ಸಿಬ್ಬಂದಿ ಮಾರುತಿ, ಮಲ್ಲಿಕಾರ್ಜುನ, ನಾಗರಾಜ್ ಸುಣಗಾರ್, ರಮೇಶ್ ನಾಯ್ಕ, ಪ್ರಹ್ಲಾದ್ ನಾಯ್ಕ, ಜಗದೀಶ, ಮಲ್ಲೇಶನಾಯ್ಕ, ಹನುಮಂತಪ್ಪ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಬಹುಮಾನ ನೀಡುವುದಾಗಿ ತಿಳಿಸಿದರು.