ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಯೋಜನೆ ಮೇಲುಸ್ತುವಾರಿ ಸಮಿತಿಗೆ ದಕ್ಷ ಐಎಎಸ್ ಅಧಿಕಾರಿ ನೇಮಿಸಬೇಕು ಹಾಗೂ ಯೋಜನೆ ಕಾರ್ಯ ನಿರ್ವಹಣೆಗಾಗಿ ಪ್ರತ್ಯೇಕ ಸುಸಜ್ಜಿತ ಕಚೇರಿ ಆರಂಭಿಸಬೇಕು ಎಂದು ಒತ್ತಾಯಿಸಿ ನಗರ ಬಿಜೆಪಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ದೇಶದ ಆಯ್ದ ನಗರಗಳನ್ನು ಅಭಿವೃದ್ಧಿ ಪಡಿಸ ಲಾಗುತ್ತಿದೆ. ಇದರಲ್ಲಿ ಶಿವಮೊಗ್ಗವೂ ಒಂದಾಗಿದ್ದು, ಯೋಜನೆಯ ಅನುಷ್ಠಾನ ದಿಂದ ನಗರದ ಚಿತ್ರಣವೇ ಬದಲಾಗಲಿದೆ.
ಈಗಾಗಲೇ ಯೋಜನೆಯಡಿ ಕೇಂದ್ರ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿದೆ. ಆದರೆ, ನಗರದಲ್ಲಿ ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಪ್ರತ್ಯೇಕ ಸಮಿತಿ ರಚಿಸಿ, ಅಗತ್ಯ ಸಿಬ್ಬಂದಿ ನೇಮಕವಾಗಿಲ್ಲ. ಯೋಜನಾ ಕಚೇರಿಯನ್ನು ಆರಂಭಿಸಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯು ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕಿದೆ. ಇದನ್ನು ರಾಜ್ಯ ಸರ್ಕಾರ ಮನಗಂಡು, ಅಗತ್ಯ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಬೇಕು ಎಂದು ಆಗ್ರಹಿಸಿದರು.
ಎನ್.ಜಿ. ನಾಗರಾಜ್, ಅರ್ಚನಾ ಸಂತೋಷ್, ಮೋಹನ್ರೆಡ್ಡಿ, ಸಿ.ಎಸ್. ಮಾಲತೇಶ್, ಎಸ್.ಎಸ್. ಸತೀಶ್, ಸುರೇಖಾ ಮುರಳೀಧರ್, ವೆಂಕ್ಯಾನಾಯ್ಕ, ಎನ್.ಜೆ. ರಾಜಶೇಖರ್, ರಮೇಶ್, ಸುನೀತಾ ಅಣ್ಣಪ್ಪ, ರೂಪಾ ಲಕ್ಷ್ಮಣ್, ಎಸ್.ಎನ್. ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಹಿರಣ್ಣಯ್ಯ ಇದ್ದರು.