ಯಾದಗಿರಿ: ತಾಲ್ಲೂಕಿನ ಯಡ್ಡಳ್ಳಿ ಗ್ರಾಮಕ್ಕೆ ಸೋಮವಾರ ಸಂಜೆ ಬಂದ ಬೌದ್ಧ ಸಂದೇಶ ಯಾತ್ರೆಗೆ ಜನ ಸಂಭ್ರಮದಿಂದ ಬರಮಾಡಿಕೊಂಡರು.
ಯಾತ್ರೆ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಕಳಸ ಹೊತ್ತ ಮುತೈದೆಯರು, ಯುವಕರು ಭಾಗವಹಿಸಿದ್ದರು.
ನಂತರ ನಡೆದ ಸಭೆಯಲ್ಲಿ ಛಲವಾದಿ ಮಹಾಸಭಾ (ನಾರಾಯಣ ಸ್ವಾಮಿ ಬಣ)ದ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ಯಡ್ಡಳ್ಳಿ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಜನರ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂದೇಶ ಯಾತ್ರೆ ನಡೆಯುತ್ತಿದೆ’ ಎಂದು ಹೇಳಿದರು.
‘ಪ್ರಸಕ್ತ ದಿನಗಳಲ್ಲಿ ಬಡ ಜನರು ಪ್ರತಿಷ್ಠೆಗೆ ಬಿದ್ದು, ಮಕ್ಕಳ ಮದುವೆಗೆ ಸಾಲ ಮಾಡಿ ದುಂದುವೆಚ್ಚ ಮಾಡುತ್ತಿದ್ದಾರೆ. ಇದರಿಂದಾಗಿ ಬಡವರು ಸಾಲಗಾರರಾಗುತ್ತಿದ್ದಾರೆ. ಸಾಮೂಹಿಕ ವಿವಾಹಗಳಲ್ಲಿ ಮದುವೆ ಮಾಡುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು’ ಎಂದರು.
ಬೌದ್ಧ ಗುರು ಮತಪಾಲ್ ಹಾಗೂ ಸಾರಿಪುತ್ರ ಆಶೀರ್ವಚನ ನೀಡಿ, ‘ಬೌದ್ಧ ಸಂದೇಶಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿಯ ಜೀವನ ಕಾಣಬಹುದು. ಅವುಗಳು ಮನುಕುಲಕ್ಕೆ ದಾರಿದೀಪವಾಗಿವೆ. ಜನರು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ, ಧಾರ್ಮಿಕ, ಆರ್ಥಿಕ ಬದಲಾವಣೆ ಕಂಡುಕೊಳ್ಳಬೇಕು’ ಎಂದು ಹೇಳಿದರು.
‘ಸಮಾಜದ ಆಸ್ತಿಯಾಗಿರುವ ಯುವಜನರು ದುಶ್ಚಟಗಳಿಂದ ದೂರವಾಗಿ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜಮುಖಿ ಕೆಲಸ ಕೈಗೊಳ್ಳಬೇಕು‘ ಎಂದು ಕಿವಿಮಾತು ಹೇಳಿದರು.
ನೀಲಕಂಠ ಬಡಿಗೇರಾ, ಮಲ್ಲಿಕಾರ್ಜುನ ಪೂಜಾರಿ, ಹೊನ್ನಪ್ಪ ನಾಟೇಕಾರ್, ಮಾರ್ತಾಂಡಪ್ಪ, ಚಂದ್ರಾಮಪ್ಪ ಬಂದಳ್ಳಿಕರ್, ಧರ್ಮಣ್ಣ ಗೀರಪ್ಪನೋರ್, ಮಹಾದೇವಪ್ಪ, ಅರ್ಜುನ, ಫಕೀರಪ್ಪ, ಸಣ್ಣ ಹಣಮಂತ, ತಿಮ್ಮಯ್ಯ ಇದ್ದರು.
***
ಶಹಾಪುರದ ಬೌದ್ಧ ಮಂದಿರದಲ್ಲಿ ಮೇ 10ರಂದು ಬುದ್ಧ ಪೂರ್ಣಿಮೆಯ ನಿಮಿತ್ತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಬಡವರು ಸದುಪಯೋಗ ಪಡೆಯಬೇಕು
ಮತಪಾಲ್, ಬೌದ್ಧ ಗುರು