ಲಕ್ಷ್ಮೇಶ್ವರ: ಬರಗಾಲದಿಂದಾಗಿ ಕೆರೆ, ಹಳ್ಳಗಳು ಬತ್ತಿ ಹನಿ ನೀರಿಗಾಗಿ ಪಶು, ಪಕ್ಷಿ, ಪ್ರಾಣಿಗಳು ಪರದಾಡುತ್ತಿವೆ. ಇದನ್ನರಿತ ಪಟ್ಟಣದ ಹೆಲ್ಪಿಂಗ್ ಹ್ಯಾಂಡ್ ಫೌಂಡೇಷನ್ ಹಾಗೂ ಪರಿಸರ ಸಂರಕ್ಷಣಾ ವೇದಿಕೆ ಸದಸ್ಯರು ಪಕ್ಷಿಗಳಿಗೆ ಕುಡಿಯುವ ನೀರಿನ ಜೊತೆಗೆ ಆಹಾರ ನೀಡುತ್ತ ಮಾನವೀಯತೆ ಮೆರೆಯುತ್ತಿದ್ದಾರೆ.ಈಗಾಗಲೇ ಪಟ್ಟಣದ ವಿವಿಧ ಬಡವಾಣೆಗಳಲ್ಲಿ ಈ ಯುವಕರು ಸಾರ್ವಜನಿಕರ ಸಹಾಯದೊಂದಿಗೆ ಪಕ್ಷಿಗಳಿಗೆ ನೀರುಣಿಸಿ ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ.
ಅದರಂತೆ ಇಲ್ಲಿನ ಈಶ್ವರ ನಗರದಲ್ಲಿ ಯುವಕರ ತಂಡ ಇಲಿನ ನಿವಾಸಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಪಕ್ಷಿಗಳ ದಾಹ ಇಂಗಿಸುವ ಕಾರ್ಯಕ್ರಮ ಆಯೋಜಿಸಿದ್ದರು. ನಿವೃತ್ತ ಶಿಕ್ಷಕ ಎಸ್.ಎಸ್. ನಾಗಲೋಟಿ ಕಾರ್ಯಕ್ರಮ ಉದ್ಘಾಟಿಸಿ, ‘ಇಂದಿನ ಯುವಕರು ದುಶ್ಚಟಗಳ ದಾಸರಾಗಿ ಹಾಳಾಗುತ್ತಿದ್ದಾರೆ ಎಂಬುದು ಎಲ್ಲೆಡೆ ಕೇಳಿ ಬರುವ ಮಾತು. ಆದರೆ ಈ ಯುವಕರ ತಂಡ ಪಕ್ಷಿಗಳಿಗೆ ನೀರುಣಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಪಕ್ಷಿಗಳು ಪರೋಕ್ಷವಾಗಿ ನಮ್ಮ ಪರಿಸರವನ್ನು ಕಾಪಾಡುತ್ತವೆ. ಇಂಥ ಪಕ್ಷಿಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ’ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ರಾಜಣ್ಣ ಕುಂಬಿ, ನಾಮನಿರ್ದೇಶಿತ ಸದಸ್ಯರಾದ ಕುಮಾರ ವೀರೇಶಮಠ, ಅಮರೇಶ ತೆಂಬದಮನಿ, ಎಚ್.ಎಂ. ಮುಳಗುಂದ, ವಿ.ಎಂ. ಹೂಗಾರ, ಹಳೆಮನಿ, ಡಿ.ಬಿ. ಪಾಟೀಲ, ನಾಗಪ್ಪ ನಾಗಲೋಟಿ, ಜಗದೀಶ ಬಡಿಗೇರ, ಚೇತನ ಬೆಟಗೇರಿ ಮತ್ತಿತರರು ಭಾಗವಹಿಸಿದ್ದರು.