ನವದೆಹಲಿ: ಬೆಳ್ಳಂದೂರು ಕೆರೆಯ ಸುತ್ತಮುತ್ತಲಿನ ಎಲ್ಲ ಕೈಗಾರಿಕೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ಜಿಟಿ) ನಿರ್ದೇಶಿಸಿದೆ.
ಕೆರೆಯ ಸುತ್ತಲಿನ ಪರಿಸರದಲ್ಲಿ ಯಾವುದೇ ರೀತಿಯ ತ್ಯಾಜ್ಯ ಸುರಿಯುವುದಕ್ಕೂ ನಿಷೇಧವಿದ್ದು, ಸೂಚನೆ ಮೀರಿದ್ದಲ್ಲಿ ₹5 ಲಕ್ಷ ದಂಡ ವಿಧಿಸುವಂತೆ ಎನ್ಜಿಟಿ ಮುಖ್ಯಸ್ಥ ನ್ಯಾ.ಸ್ವತಂತರ್ ಕುಮಾರ್ ಆದೇಶಿಸಿದ್ದಾರೆ.
ಪರಿಸರ ಹಾಗೂ ಕೆರೆಯ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಚಾಲ್ತಿಯಲ್ಲಿರುವ ನಿಯಮಗಳನ್ನು ಉಲ್ಲಂಘಿಸುವಂತಹ ಕೈಗಾರಿಕೆಗಳನ್ನು ಮುಚ್ಚಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಲಾಗಿದೆ.
ಕೆರೆಯಲ್ಲಿ ಕಲ್ಮಶ ಹೆಚ್ಚಿ ಬೆಂಕಿ ಹೊತ್ತಲು ಕಾರಣವಾಗಿರುವ ಅಂಶಗಳನ್ನು ಕೈಗಾರಿಕೆಗಳು ಹೊರ ಹಾಕುತ್ತಿರುವ ಕುರಿತು ಜಂಟಿ ಪರಿಶೀಲನಾ ಸಮಿತಿ ಪರೀಕ್ಷಿಸುವವರೆಗೂ ಸುತ್ತಲಿನ ಯಾವುದೇ ಕೈಗಾರಿಕೆಗೆ ಕಾರ್ಯನಿರ್ವಹಿಸಲು ಅವಕಾಶವಿಲ್ಲ ಎಂದು ನ್ಯಾ.ಆರ್.ಎಸ್.ರಾಥೋರ್ ಅವರನ್ನು ಒಳಗೊಂಡ ನ್ಯಾಯಪೀಠ ನಿರ್ದೇಶಿಸಿದೆ.
ಕೆರೆಯಲ್ಲಿ ತ್ಯಾಜ್ಯ ಹೆಚ್ಚಾಗಿ ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಅದರಿಂದ ಕೆರೆಯ ಸುತ್ತಮುತ್ತಲ ಪರಿಸರ ಹಾಗೂ ಮನುಷ್ಯನ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ಬೆಳ್ಳಂದೂರು ಕೆರೆಯ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.