ವ್ಯಾಖ್ಯಾನ, ವಿವರಣೆಗೆ ನಿಲುಕದಂತಹ ಭಾವನೆಗಳನ್ನು ಬಣ್ಣಗಳ ಮೂಲಕ ಕಟ್ಟಿಕೊಡುವ ಅಮೂರ್ತ ಶೈಲಿಯ ಚಿತ್ರಕಲೆಗಳು ನೋಡುಗರನ್ನು ಚಿಂತನೆಗೆ ಹಚ್ಚಬಲ್ಲವು.
ಆಕ್ರಿಲಿಕ್ ಮಾಧ್ಯಮದಲ್ಲಿ ರಚಿಸಲಾಗಿರುವ ಇಂತಹ ಅಮೂರ್ತ ಕಲಾಕೃತಿಗಳ ಜತೆಗೆ ಕೆಲವು ವಿಷಯಾಧಾರಿತ ಕಲಾಕೃತಿಗಳ ಪ್ರದರ್ಶನ ಚಿತ್ರಕಲಾ ಪರಿಷತ್ತಿನಲ್ಲಿ ನಡೆದಿದೆ.
ಕಲಾವಿದರಾದ, ಧಾರವಾಡದ ಅಜಿತ್ ಹುಲಮನಿ ಹಾಗೂ ಮುಧೋಳದ ಶ್ರೀಶೈಲ ಆನದಿನ್ನಿ ಅವರು ಚಿತ್ರಕಲೆಯನ್ನು ಅಕಾಡೆಮಿಕ್ ಆಗಿ ಅಭ್ಯಾಸ ಮಾಡಿದವರು. ಪ್ರದರ್ಶನದಲ್ಲಿರುವ ಪ್ರತಿ ಕಲಾಕೃತಿ ಅವರ ಕಲಾ ಪ್ರಾವೀಣ್ಯಕ್ಕೆ ಕೈಗನ್ನಡಿಯಂತಿದೆ.
ಹುಬ್ಬಳ್ಳಿಯ ಸುಜಾತಾ ಪವಾರ್ ಹಾಗೂ ತೆಲಂಗಾಣದ ಉಮಾ ತಿರುಮಲಸೆಟ್ಟಿ ಆಸಕ್ತಿಯಿಂದ ಗೀಚುತ್ತಾ ಗೀಚುತ್ತಾ ಚಿತ್ರಕಲೆಯಲ್ಲಿ ತೊಡಗಿಸಿಕೊಂಡವರು. ಆದರೆ ಕಲೆ ಅವರಿಗೆ ಒಲಿದಿದೆ ಎನ್ನುವುದಕ್ಕೆ ಅವರ ಕಲಾಕೃತಿಗಳು ಸಾಕ್ಷಿ.
‘ನನ್ನ ಕಲಾಕೃತಿಗಳು ಹೆಚ್ಚಾಗಿ ಅಮೂರ್ತ ಶೈಲಿಯಲ್ಲಿ ಇರುತ್ತವೆ. ಇಂತಹ ಅಮೂರ್ತ ಕೃತಿಗಳಿಗೆ ರೇಖೆ, ಬಣ್ಣಗಳ ಸಂಯೋಜನೆಯಿಂದ ನಿರ್ದಿಷ್ಟ ಅರ್ಥ ಹೊಮ್ಮಿಸುವ ಚೌಕಟ್ಟು ಇರುವುದಿಲ್ಲ’ ಎನ್ನುತ್ತಾರೆ ಕಲಾವಿದ ಅಜಿತ್.
.
ಹಲವು ವರ್ಷಗಳಿಂದ ಕುಂಚದ ಸಂಗದಲ್ಲಿರುವ ಈ ಕಲಾವಿದರು ಈಗಾಗಲೇ ಸಾಕಷ್ಟು ಗುಂಪು ಪ್ರದರ್ಶನ ಹಾಗೂ ಏಕವ್ಯಕ್ತಿ ಚಿತ್ರ ಪ್ರದರ್ಶನಗಳನ್ನು ನೀಡಿದ್ದಾರೆ.
ಪ್ರತಿ ವರ್ಷ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ 5 ದಿನಗಳ ಕಾಲ ಈ ಕಲಾವಿದರು ಪ್ರದರ್ಶನ ನಡೆಸುತ್ತಾರೆ. ಈ ವರ್ಷದ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವೀಕ್ಷಕರಿಂದ ದೊರಕಿದೆ. ಕೆಲವು ಕಲಾಕೃತಿಗಳೂ ಮಾರಾಟವಾಗಿವೆ.