ಗಜೇಂದ್ರಗಡ: ಜಿಲ್ಲಾಡಳಿತದಿಂದ ಕೃತಕ ಮರಳು ಅಭಾವ ಸೃಷ್ಟಿ ನೀತಿ ವಿರೋಧಿಸಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ (ಸಿ.ಐ.ಟಿ.ಯು) ಹಾಗೂ ಸಿದ್ಧರಾಮೇಶ್ವರ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘಟನೆಗಳು ಬುಧವಾರದಿಂದ ಪುರಸಭೆಯ ಆವರಣದಲ್ಲಿ ಅನಿರ್ದಿಷ್ಠಾವಧಿ ಧರಣಿ ಆರಂಭವಿಸಿದವು.
ಬರಗಾಲದಿಂದ ತತ್ತರಿಸುತ್ತಿರುವ ಹೆಚ್ಚು ಜನ ಬದುಕು ಸಾಗಿಸಲು ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದಾರೆ. ಆದರೆ ಉಸುಕಿನ ಅಭಾವದಿಂದ ಅವರು ಬದುಕು ಸಾಗಿಸುವುದು ದುಸ್ತರವಾಗಿದೆ. ಇದನ್ನು ಪರಿಹರಿಸುವಂತೆ ಒತ್ತಾಯಿಸಿ ಕಾರ್ಮಿಕರು ವಿಶೇಷ ತಹಶೀಲ್ದಾರ್ ಎದುರು ಧರಣಿ ಆರಂಭಿಸಿದರು.
ಪುರಸಭೆ ಸದಸ್ಯ ಎಂ.ಎಸ್. ಹಡಪದ, ಕಲ್ಲು ಮತ್ತು ಮರಳಿನ ಮೇಲೆ ಜಿಲ್ಲಾಧಿಕಾರಿ ನಿರ್ಬಂಧ ಹೇರಿರುವ ಪರಿಣಾಮವಾಗಿ ಕಟ್ಟಡ ನಿರ್ಮಾಣ ಕೆಲಸಗಳು ಸಂಪೂರ್ಣವಾಗಿ ನಿಂತು ಹೋಗಿವೆ. ಇದರಿಂದ ರೋಣ ತಾಲ್ಲೂಕಿನ ಹತ್ತಾರು ಗ್ರಾಮಗಳಲ್ಲಿನ ಕಟ್ಟಡ ನಿರ್ಮಿಸುವವರು ಸೇರಿದಂತೆ ಸಾವಿರಾರು ಕಾರ್ಮಿಕರು ಕೆಲಸವಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಇವರೆಲ್ಲರಿಗೂ ದಿನದ ದುಡಿಮೆಯಿಂದಲೇ ತಮ್ಮ ಕುಟುಂಬ ನಡೆಯಬೇಕು. ಕೊಪ್ಪಳ ಜಿಲ್ಲೆಯ ಮಾದರಿಯಂತೆ ಮರಳು ಸಾಗಿಸುವವರಿಗೆ ದಿನದ ಪಾಸ್ ನೀಡಿ ಕಾರ್ಮಿಕರಿಗೆ ಅನುಕೂಲ ಮಾಡಿ ಕೊಡಬೇಕು ಎಂದರು.
ಕಾರ್ಮಿಕ ಮುಖಂಡ ಯಲ್ಲಪ್ಪ ಬಂಕದ ಮಾತನಾಡಿ, ಪ್ರಭಾವಿ ರಾಜಕಾರಣಿಗಳು ದೊಡ್ಡ ಗುತ್ತಿಗೆದಾರರಿಗೆ ಮರಳನ್ನು ಸಾಗಿಸಿ ಲಾಭ ಪಡೆಯುವಂತೆ ಮಾಡಲು ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಈಗಿರುವ ಮರಳು ನೀತಿಯಿಂದ ಇಂದು ಎಲ್ಲಾ ವಿಭಾಗದ ಕಾರ್ಮಿಕರು ಬೀದಿ ಪಾಲಾಗಿದ್ದಾರೆ ಎಂದರು.ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ(ಸಿ.ಐ.ಟಿ.ಯು) ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಚಿಟಗಿ ಮಾತನಾಡಿದರು. ಧರಣಿಯಲ್ಲಿ ಯಲ್ಲಪ್ಪ ಕಲ್ಗುಡಿ, ರೇಣಪ್ಪ ಇಂಗಲೆ, ಪರಶುರಾಮ ಕಲ್ಗುಡಿ, ಮುದಕಪ್ಪ ನಿಡಗುಂದಿ, ಯಲ್ಲಪ್ಪ ಕಲ್ಗುಡಿ, ಶಿವಾಜಿ ಕಲ್ಗುಡಿ, ರಫಿ ಯಲಬುಂಚಿ, ಕೆ.ಎಸ್. ಸಾಲಿಮಠ, ಫಕೀರಪ್ಪ ನಿಡಗುಂದಿ,ರಾಮಣ್ಣ ನಿಡಗುಂದಿ, ಮಾಸುಮ್ ಅಲಿ ಹವಲ್ದಾರ, ಲಕ್ಷ್ಮಣ ರಾಠೋಡ, ಈಶಪ್ಪ ಹಲಗಲಿ, ಲಕ್ಷ್ಮಣ ಮುಧೋಳ, ಲಕ್ಷ್ಮಣ ಗುರಿಕಾರ, ಶಂಕ್ರಪ್ಪ ರಾಠೋಡ, ಮುತ್ತಣ್ಣ ಕಡಬಲಕಟ್ಟ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.