ರಟ್ಟೀಹಳ್ಳಿ: ಸಾವಯವ ಅಥವಾ ನೈಜ ಕೃಷಿಗೆ ಸಾಮಾನ್ಯವಾಗಿ ಭೂಮಿಯಲ್ಲಿ 21 ಪೋಷಕಾಂಶಗಳ ಅಗತ್ಯವಿದೆ ಎಂದು ಎಂದು ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ಕೃಷಿ ತಜ್ಞ ಅಶೋಕ ನುಡಿದರು.ಸಮೀಪದ ದೊಡ್ಡಗುಬ್ಬಿ ಗ್ರಾಮದಲ್ಲಿ ಮಂಗಳವಾರ ನಡೆ ಹಿರೇಕೆರೂರ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ದೊಡ್ಡಗುಬ್ಬಿ ಗ್ರಾಮದ ಕೃಷಿ ಸಾಧಕಿ ಜಯಮ್ಮ ಚನ್ನಗೌಡ್ರ ಮತ್ತು ಕಡೂರ ಗ್ರಾಮದ ಪ್ರಗತಿಪರ ಕೃಷಿಕ ಶಂಕರಗೌಡ ಶಿರಂಗಂಬಿ ಇವರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಇಂದು ಹೆಚ್ಚಿನ ಇಳುವರಿ ಪಡೆಯುವ ಸಲುವಾಗಿ ಭೂಮಿಗೆ ಅಗತ್ಯಕ್ಕಿಂತ ಹೆಚ್ಚಿನ ಪೋಷಕಾಂಶ ಸೇರಿಸುತ್ತಿದ್ದೇವೆ. ಹೀಗಾಗಿ ಭೂಮಿ ತನ್ನ ನೈಜತೆಯನ್ನು ಕಳೆದುಕೊಂಡಿದೆ. ಸಾವಯವ ಗೊಬ್ಬರ, ಜೀವಾಮೃತ ಬಳಸುವ ಮೂಲಕ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು. ರೈತರು ತಮ್ಮ ಜಮೀನಿನ ಮಣ್ಣಿನ ಪರೀಕ್ಷೆಯನ್ನು ಕಾಲಕಾಲಕ್ಕೆ ಮಾಡಿಸುತ್ತಿರಬೇಕು. ಇದರಿಂದ ಭೂಮಿಗೆ ಬೇಕಾಗುವ ಪೋಷಕಾಂಶಗಳ ಅಗತ್ಯತೆ ಅರಿಯಬಹುದಾಗಿದೆ. ಬೆಳೆಗಳ ಬದಲಾವಣೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದರು.
ದೊಡ್ಡಗುಬ್ಬಿ ಗ್ರಾಮದ ಕೃಷಿ ಸಾಧಕಿ ಜಯಮ್ಮ ಚನ್ನಗೌಡ್ರ ಪ್ರಶ್ತಿ ಸ್ವೀಕರಿಸಿ ಮಾತನಾಡಿ ‘ರೈತರು ಕೇವಲ ವಾಣಿಜ್ಯ ಬೆಳೆಗಳ ಬಗ್ಗೆ ಹೆಚ್ಚಿನ ಗಮನ ನೀಡದೆ ಸಿರಿಧಾನ್ಯಗಳ ಬಗ್ಗೆ ವಿಶೇಷ ಕಾಳಜಿವಹಿಸಿದರೆ ಲಾಭ ನಿರೀಕ್ಷಿಸಬಹುದು. ಸಾವಯವ ವಿಧಾನದಲ್ಲಿ ತಕ್ಷಣ ಲಾಭ ನಿರೀಕ್ಷೆ ಮಾಡಬಾರದು. ಮಾರುಕಟ್ಟೆಯಲ್ಲಿ ಸಾವಯವ ಬೆಳೆಗಳಿಗೆ ಹೆಚ್ಚಿನ ಬೆಲೆಯಿದೆ. ಇದಕ್ಕಾಗಿಯೇ ಗ್ರಾಹಕರಿದ್ದಾರೆ’ ಎಂದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಗಂಗಂಪ್ಪನವರ ಮಾತನಾಡಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಅಗ್ಗದ ಯೋಜನೆ ಹಮ್ಮಿಕೊಳ್ಳಬಾರದು. ರೈತರ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಬೆಲೆಯನ್ನು ನಿಗದಿ ಮಾಡಿ ಹೆಚ್ಚಿನ ಲಾಭ ದೊರೆಯುವಂತೆ ಮಾಡಬೇಕು ಎಂದು ಹೇಳಿದರು.
ಕಡೂರ ಗ್ರಾಮದ ಪ್ರಗತಿಪರ ಕೃಷಿಕ ಶಂಕರಗೌಡ ಶಿರಂಗಂಬಿ ಮಾತನಾಡಿದರು. ಗ್ರಾಮ ಪಂಚಾಯ್ತಿ ಸದಸ್ಯ ನರಸಿಂಹಪ್ಪ ನಡುವಿನಮನಿ, ರುದ್ರಗೌಡ ಸಾವುಕಾರ, ಮಲ್ಲೇಶಪ್ಪ ಶಿರಿಗೇರಿ, ನಾಗಪ್ಪ ಬಿದರಿ, ಮಾದೇಗೌಡ ಮಾಜಿಗೌಡ್ರ, ಪ್ರಭು ಯತ್ತಿನಹಳ್ಳಿ, ಗಣೇಶಪ್ಪ ಮಾಜಿಗೌಡ್ರ, ಕೃಷಿ ಇಲಾಖೆಯ ಶಿಲ್ಪಾ ಬಣಕಾರ, ಮಂಗಳಾ ಹುಲ್ಲತ್ತಿ, ಹನುಮಂತಗೌಡ ಗುಬ್ಬಿ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.