ರಾಮದುರ್ಗ: ಇನ್ನಷ್ಟು ದಿನಗಳಲ್ಲಿ ತಾಲ್ಲೂಕಿನಲ್ಲಿ ಮಳೆ ಬೀಳದಿದ್ದರೆ ತಾಲ್ಲೂಕಿನ 20 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ತೀವ್ರತೆ ಎದುರಾಗಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಎಸ್.ಕೆ. ಪಾಟೀಲ ಹೇಳಿದರು.ಮಂಗಳವಾರ ಜರುಗಿದ ತಾಲ್ಲೂಕು ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಬರಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ನಂದಿಹಾಳ ಮತ್ತು ಚಿಕ್ಕಮೂಲಂಗಿ ಗ್ರಾಮಗಳಲ್ಲಿ ಮಾತ್ರ ಪಂಚಾಯ್ತಿ ವತಿಯಿಂದ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ.
ಕೆಲವೇ ದಿನಗಳಲ್ಲಿ ಅಲ್ಲಿ ಕೊಳವೆ ಬಾವಿ ಕೊರೆಯಿಸಿ ನೀರಿನ ಸಮಸ್ಯೆಯನ್ನು ನೀಗಿಸಲಾಗುವುದು. ತಾಲ್ಲೂಕಿನಲ್ಲಿ ಪ್ರತಿಶತ 90ರಷ್ಟು ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲಾಗಿದೆ ಎಂದು ತಿಳಿಸಿದರು.ತಾಲ್ಲೂಕಿನಲ್ಲಿ ಒಟ್ಟು 49 ಶುದ್ದ ಕುಡಿಯುವ ನೀರಿನ ಘಟಕಗಳಿವೆ. ಅವುಗಳಲ್ಲಿ 6 ಶುದ್ಧ ಕುಡಿಯುವ ನೀರಿನ ಘಟಕಗಳು ನೀರಿನ ಪೂರೈಕೆ ಇಲ್ಲದೇ ಸ್ಥಗಿತಗೊಂಡಿವೆ. ತಾಲ್ಲೂಕಿನಲ್ಲಿ ಎದುರಾ ಗಿದ್ದ ಕುಡಿಯುವ ನೀರಿನ 7 ಹಳ್ಳಿಗಳ ಸಮಸ್ಯೆಯನ್ನು ನಿವಾರಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯ ಜವಾಬ್ದಾರಿ ಹೊತ್ತುಕೊಂಡಿ ರುವ ತಾಲ್ಲೂಕು ಪಂಚಾಯ್ತಿಯ ಓವರ್ ಹೆಡ್ ಟ್ಯಾಂಕಿನಲ್ಲಿ ಸುಮಾರು ಎರಡು ಅಡಿಗಳಷ್ಟು ಮಣ್ಣಿನ ಹೂಳು ತುಂಬಿ ಕೊಂಡಿದೆ. ಅದರಲ್ಲಿಯ ನೀರನ್ನೇ ಶುದ್ಧೀಕರಿಸಿ ಪಂಚಾಯ್ತಿ ಸದಸ್ಯರಿಗೆ ಪೂರೈಕೆ ಮಾಡಲಾಗುತ್ತಿದೆ. ಹೀಗಾದರೆ ತಾಲ್ಲೂಕಿನ ಸಮಸ್ಯೆಯನ್ನು ಬಗೆ ಹರಿಸುವುದಾದರೂ ಹೇಗೆ ಎಂದು ಸದಸ್ಯ ಮೌನೇಶ ಕಂಬಾರ ಪ್ರಶ್ನಿಸಿದರು.
ತಾಲ್ಲೂಕು ಪಂಚಾಯ್ತಿಯ ಓವರ್ ಹೆಡ್ ಟ್ಯಾಂಕಿನಲ್ಲಿ ಹೂಳು ತುಂಬಿ ಕೊಂಡಿರುವ ವಿಷಯ ಈಗಷ್ಟೆ ಗಮನಕ್ಕೆ ಬಂದಿದೆ. 24 ಗಂಟೆಗಳಲ್ಲಿ ಟ್ಯಾಂಕಿನ ಹೂಳು ತೆಗೆಸಿ ಶುದ್ದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.ತಾಲ್ಲೂಕಿನಲ್ಲಿ ಒಟ್ಟು 213 ಶಿಕ್ಷಕರ ಕೊರತೆ ಇದೆ. 107 ಶಾಲಾ ಕೊಠಡಿ ಗಳನ್ನು ನಿರ್ಮಿಸಲು ಪ್ರಸ್ತಾವ ಸಲ್ಲಿಸ ಲಾಗಿದೆ. 97 ಶಾಲಾ ಕೊಠಡಿ ದುರಸ್ತಿ ಮಾಡಲು ಕೋರಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.