ರವೀಂದ್ರ ಕಲಾಕ್ಷೇತ್ರ–50 ‘ನೆನಪಿನೋಕುಳಿ’ಗೆ ಸಂಬಂಧಿಸಿದ ಚಿತ್ರ ( ಪ್ರ.ವಾ.ಏ.8)ನೋಡಿ ಹೊಟ್ಟೆಯಲ್ಲಿ ಕಲಕಿದಂತಾಯಿತು.
ವೇದಿಕೆ ಮೇಲೆ ಪ್ರಸಿದ್ಧ ಕವಿಗಳು, ಗಾಯಕರು... ಆದರೆ ಪ್ರೇಕ್ಷಕರ ಕುರ್ಚಿಗಳು ಖಾಲಿ–ಖಾಲಿ! ಭಣ–ಭಣ! ಯಾವ ಪುರುಷಾರ್ಥಕ್ಕಾಗಿ ಈ ಕಾರ್ಯಕ್ರಮ, ಸಂಭ್ರಮ!?
ಸಾಮಾನ್ಯ ಪ್ರೇಕ್ಷಕ ಮತ್ತು ಕಲಾಸಕ್ತನಾದ ನಾನು ಕಳೆದ ಹಲವಾರು ತಿಂಗಳಿಂದ ‘ನೆನಪಿನೋಕುಳಿ’ ಕಾರ್ಯಕ್ರಮಗಳನ್ನು ನೋಡುತ್ತಾ ಬಂದಿದ್ದೇನೆ. ಪ್ರತಿ ತಿಂಗಳು ಐದೈದು ದಿನ ನಡೆಯುವ ಈ ಸಂಭ್ರಮದಲ್ಲಿ ಕಲಾಕ್ಷೇತ್ರ ಪ್ರೇಕ್ಷಕರಿಂದ ತುಂಬಿದ್ದಂತು ಇಲ್ಲವೇ ಇಲ್ಲ!!
‘ರವೀಂದ್ರ ಕಲಾಕ್ಷೇತ್ರ’ಕ್ಕೆ 50 ತುಂಬಿದ ನೆನಪಿನಲ್ಲಿ ಸಂಭ್ರಮಾಚರಣೆ ಖಂಡಿತ ಬೇಕು, ನಿಜ, ಎರಡು ಮಾತಿಲ್ಲ. ಆದರೆ ಪ್ರತಿ ತಿಂಗಳು ಐದೈದು ದಿನಗಳು...!! ಲಕ್ಷಾಂತರ ರೂಪಾಯಿ ಖರ್ಚು...!! ಪ್ರೇಕ್ಷಕರಿಲ್ಲದ ರಂಗಮಂದಿರ...!! ಇದರ ಅಗತ್ಯವಿದೆಯೇ? ಈ ಸಂಭ್ರಮ ಸವಿಯಲು ಪ್ರೇಕ್ಷಕರು ತುಂಬಿದರಷ್ಟೇ ತಾನೆ ಸಾರ್ಥಕ?
ಸಂಗೀತ, ನೃತ್ಯ, ಚಿತ್ರಕಲೆ, ಸಾಹಿತ್ಯ... ಈ ರೀತಿ ಒಂದೊಂದು ದಿನದಂತೆ ತಿಂಗಳಿಗೊಂದರಂತೆ ಒಟ್ಟು 12 ದಿನ ಮಾಡಿ ಮುಗಿಸಬಹುದಿತ್ತಲ್ಲಾ? ನಾನು ಗಮನಿಸಿದಂತೆ ಕೆಲವು ಕಾರ್ಯಕ್ರಮಗಳ ಪುನರಾವರ್ತನೆ...! ಇದು ಯಾರಿಗಾಗಿ? ಸಮಿತಿಯ ಸದಸ್ಯರ ಇಚ್ಛೆಗೋ!?
ಹಣ ಪೋಲು ಮಾಡುವ ಇಂತಹ ಸಂಭ್ರಮಾಚರಣೆ ಬಿಟ್ಟು ಅದೇ ಹಣವನ್ನು ಕಲಾಕ್ಷೇತ್ರವನ್ನು ಮತ್ತಷ್ಟು ಅಂದಗೊಳಿಸಲು, ನವೀಕರಿಸಲು ವಿನಿಯೋಗಿಸಿದರೆ ಸರ್ಕಾರದ ಅರ್ಥಾತ್ ನನ್ನಂತಹ ಶ್ರೀಸಾಮಾನ್ಯನ ಹಣಕ್ಕೆ ಬೆಲೆ ಬಂದೀತು. -ಕೆ.ವಿ. ಶ್ರೀನಿವಾಸ, ಬೆಂಗಳೂರು