ಕಾಸರಗೋಡಿನ ಬಗ್ಗೆ ಮಹಾಜನ್ ಆಯೋಗಕ್ಕೆ ಕೇರಳ ಸರ್ಕಾರ ಮನವಿ ಸಲ್ಲಿಸದು: ಇ.ಎಂ.ಎಸ್.
ಎರ್ನಾಕುಲಂ, ಏ. 20– ಕೇರಳ ರಾಜ್ಯ ಸರ್ಕಾರವು ಮಹಾಜನ್ ಆಯೋಗವನ್ನು ಭೇಟಿ ಮಾಡುವುದಿಲ್ಲ ಮತ್ತು ಕಾಸರಗೋಡು ಪ್ರಶ್ನೆಗೆ ಸಂಬಂಧಿಸಿದಂತೆ ಯಾವುದೇ ಮನವಿಯನ್ನು ಆಯೋಗಕ್ಕೆ ಸಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಶ್ರೀ ಇ.ಎಂ.ಎಸ್. ನಂಬೂದರಿಪಾಡ್ ಅವರು ಇಂದು ಸುದ್ದಿಗಾರರಿಗೆ ತಿಳಿಸಿದರು.
ಕೇಂದ್ರ ಸರಕಾರವು ನೇಮಿಸಿದ ಮಹಾಜನ್ ಆಯೋಗವು ಕಾಸರಗೋಡು ಪ್ರಶ್ನೆಯನ್ನು ಪುನಃ ಪ್ರಸ್ತಾಪಿಸದಂತೆ ಕೇರಳ ಸರ್ಕಾರವು ನೋಡಿಕೊಳ್ಳಬೇಕೆಂದು ಒತ್ತಾಯಪಡಿಸುವ ಐಕ್ಯ ಕೇರಳ ಕಾಸರಗೋಡು ಸಮಿತಿಯ ನಿಯೋಗವೊಂದನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಮುಖ್ಯಮಂತ್ರಿಯವರು ಈ ಹೇಳಿಕೆ ಇತ್ತರು.
**
ಚಂದ್ರ ಗ್ರಹದ ಮೇಲೆ ಸರ್ವೆಯರ್–3 ಸಾಧನದ ಯಶಸ್ವೀ ಅವತರಣ; ಚಿತ್ರ ಪ್ರಸಾರ ಆರಂಭ
ಪಸಡೆನ, ಏ. 20– ಚಂದ್ರ ಗ್ರಹದ ಮೇಲಿನ ‘ಚಂಡಮಾರುತ ಸಾಗರ’ ಪ್ರದೇಶದಲ್ಲಿ ಯಶಸ್ವಿಯಾಗಿ ಲಘು ಅವತರಣ ಮಾಡಿದ ಒಂದು ಗಂಟೆಯೊಳಗಾಗಿಯೇ ಅಮೆರಿಕದ ಸರ್ವೆಯರ್–3 ಗಗನ ಸಾಧನವು ಟೆಲಿವಿಷನ್ ಚಿತ್ರಗಳನ್ನು ಭೂಮಿಗೆ ಕಳುಹಿಸಲು ಆರಂಭಿಸಿತು.
ಅಮೆರಿಕವು ಚಂದ್ರಗ್ರಹದಲ್ಲಿ ಯಶಸ್ವಿಯಾಗಿ ಇಳಿಸಿದ ಮಾನವರಹಿತ ಗಗನ ಸಾಧನಗಳಲ್ಲಿ ಇದು ಎರಡನೆಯದು.
***
ಇರಾನಿನಲ್ಲಿ ಭಾರಿ ಮಳೆ: ಒಂಬತ್ತು ಮಂದಿ ಸಾವು
ಟಹರಾನ್, ಏ. 20– ಇರಾನಿನ ಖೊರಾಸನ್ ಪ್ರಾಂತ್ಯದ ಈಶಾನ್ಯ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಒಂಬತ್ತು ಮಂದಿ ಸತ್ತು, ಅನೇಕ ಕುರಿಗಳು ಹಾಗೂ ದನಗಳು ಪ್ರವಾಹದಲ್ಲಿ ಕೊಚ್ಚಿ ಹೋದವೆಂದು ನಿನ್ನೆ ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.
** ಮಾಸಾಂತ್ಯಕ್ಕೆ ಕೇರಳ ಪಾನ ನಿರೋಧ ನೀತಿ ಕುರಿತು ಆಖೈರು ನಿರ್ಧಾರ
ತಿರುವನಂತಪುರ, ಏ. 20– ಏಪ್ರಿಲ್ 26 ರಂದು ನಡೆಯಲಿರುವ ಕೇರಳ ಸಂಪುಟದ ಮುಂದಿನ ಸಭೆಯಲ್ಲಿ ಪಾನನಿರೋಧ ಕುರಿತ ತನ್ನ ನೀತಿಯನ್ನು ಸಂಪುಟವು ನಿರ್ಧರಿಸುವುದೆಂದು ಮುಖ್ಯಮಂತ್ರಿ ಇ.ಎಂ.ಎಸ್. ನಂಬೂದರಿಪಾಡ್ರವರು ಇಲ್ಲಿ ಇಂದು ಪತ್ರಕರ್ತರಿಗೆ ತಿಳಿಸಿದರು.