ಕೊಪ್ಪಳ: ‘ತಾಲ್ಲೂಕಿನ ಹಿರೇಬಗನಾಳದ ಹರೇಕೃಷ್ಣ ಮೆಟಾಲಿಕ್ಸ್ ಕಂಪೆನಿ ಹೊರಸೂಸುವ ದೂಳಿನಿಂದ ಬೆಳೆ ನಾಶವಾಗಿದೆ’ ಎಂದು ಆರೋಪಿಸಿ ಕಾರ್ಖಾನೆಯಿಂದ ಬಾಧಿತ ರೈತರ ಬೆಂಬಲಿಸುವ ಒಕ್ಕೂಟದ ನೇತೃತ್ವದಲ್ಲಿ ನಗರದ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಎದುರು ಧರಣಿ ನಡೆಯಿತು.
ಸಂತ್ರಸ್ತ ರೈತರಾದ ಹನುಮಂತಪ್ಪ ಕಡ್ಲಿ, ಸಿದ್ಧಪ್ಪ ಕಡ್ಲಿ ಮತ್ತು ರಾಮಣ್ಣ ಕಡ್ಲಿ ಕುಟುಂಬದವರು ಮತ್ತು ರೈತ ಮುಖಂಡರು ಮಾತನಾಡಿ, ‘ಕಾರ್ಖಾನೆಯ ವಿಷಕಾರಿ ಕಪ್ಪುದೂಳು ಮತ್ತು ಕರ್ಕಶ ಶಬ್ದದಿಂದ ಪರಿಸರ ಮಾಲಿನ್ಯ ಉಂಟಾಗಿದೆ. ಬೆಳೆ ಸಂಪೂರ್ಣ ನಾಶವಾಗಿದೆ. ರೈತ ಕುಟುಂಬಗಳು ಬೀದಿಪಾಲಾಗಿವೆ. ಕಡ್ಲಿ ಕುಟುಂಬದವರನ್ನು ಕಂಪೆನಿಯವರು ಬದುಕಲು ಬಿಡುತ್ತಿಲ್ಲ’ ಎಂದು ಆರೋಪಿಸಿದರು.
‘ನಷ್ಟ ಪರಿಹಾರಕ್ಕೆ ರೈತರು ಒತ್ತಾಯಿಸುವ ಪರಿಸ್ಥಿತಿ ಬಂದಿದೆ. ಇದಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ನೇರ ಹೊಣೆ’ ಎಂದು ದೂರಿದರು.
‘ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಬೇಕು. ಭೂಮಿ, ನದಿ ಮಾಲಿನ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಬಾಧಿತ ಗ್ರಾಮ ಮತ್ತು ಜನರಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ಪುನರ್ವಸತಿ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.