ಚಿಕ್ಕಮಗಳೂರು: ಸಾಲ ಮತ್ತು ಬೆಳೆ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ ತಾಲ್ಲೂಕಿನ ಹಂಪಾಪುರ ಗ್ರಾಮದ ರೈತ ಪ್ರವೀಣ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಪಕ್ಷದ ಮುಖಂಡರು ಮತ್ತು ಅಧಿಕಾರಿಗಳೊಂದಿಗೆ ಗುರುವಾರ ಸಂಜೆ ಭೇಟಿ ನೀಡಿ, ಮೃತ ರೈತನ ಪತ್ನಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಿದರು.
ಸಚಿವರು ಭೇಟಿ ನೀಡಿದಾಗ ಪ್ರವೀಣ್ ಪತ್ನಿ ತಾರಾ ಅವರು ಇನ್ನೂ ದುಃಖದ ಮಡುವಿನಿಂದ ಹೊರ ಬಂದಿರಲಿಲ್ಲ. ಬಿಕ್ಕಿಬಿಕ್ಕಿ ಅಳುತ್ತಿದ್ದರು. ಅವರ ಎರಡು ಮುಗ್ಧ ಮಕ್ಕಳು ಕೂಡ ಅಪ್ಪನನ್ನು ಕಳೆದುಕೊಂಡು ಅನಾಥ ಪ್ರಜ್ಞೆಯಿಂದ ಕುಳಿತ್ತಿದ್ದರು. ಮನೆಯಲ್ಲಿ ಯಾರೂ ಮಾತನಾಡುವ ಸ್ಥಿತಿಯಲ್ಲಿರ ಲಿಲ್ಲ. ಮೃತ ರೈತನ ಕುಟುಂಬಕ್ಕೆ ತಕ್ಷಣ ಸರ್ಕಾರದಿಂದ ಕೊಡಬೇಕಾದ ಪರಿಹಾರ ಮತ್ತು ಸಹಾಯ ಒದಗಿಸುವಂತೆ ಸಚಿವರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪ ವಿಭಾಗಾಧಿಕಾರಿಗೆ ಸೂಚನೆ ನೀಡಿದರು.
ಇದಕ್ಕೂ ಮೊದಲು ಶಾಸಕ ಸಿ.ಟಿ.ರವಿ ಬರ ಪರಿಸ್ಥಿತಿ ಪರಿಶೀಲನೆ ಸಭೆಯಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ಈಶ್ವರಹಳ್ಳಿಯಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದರೂ ಅಧಿಕಾರಿಗಳು ರೈತನ ಹೆಸರಿನಲ್ಲಿ ಜಮೀನು ಮತ್ತು ಪಹಣಿ ಇಲ್ಲ ಎನ್ನುವ ಕಾರಣಕ್ಕೆ ಪರಿಹಾರ ನಿರಾಕರಿಸಿರುವ ಬಗ್ಗೆ ಸಚಿವರ ಗಮನಕ್ಕೆ ತಂದರು. ರೈತನ ಹೆಸರಿನಲ್ಲಿ ಜಮೀನು ಇಲ್ಲದಿದ್ದರೂ ಆತನ ಮಗನ ಹೆಸರಿನಲ್ಲೂ ಜಮೀನು ಮತ್ತು ಸಾಲ ಇದೆ.
ಅವರದು ಕೂಡು ಕುಟುಂಬ. ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲೂ ಸಾಲ, ಜಮೀನು ಇದ್ದರೂ ಅದನ್ನು ಪರಿಹಾರಕ್ಕೆ ಪರಿಗಣಿಸುವಂತೆ ಸರ್ಕಾರದ ಸುತ್ತೋಲೆ ಇದೆ. ಆದರೂ ಅಧಿಕಾರಿಗಳು ಪಾಲಿಸುತ್ತಿಲ್ಲವೆಂದು ದೂರಿದರು. ಮೂಡಿಗೆರೆ ತಾಲ್ಲೂಕಿನ ಹಾಲೂರಿನಲ್ಲಿ ರೈತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಅಧಿಕಾರಿಗಳು ಮಹಿಳೆ ಹೆಸರಿನಲ್ಲಿ ಜಮೀನು ಮತ್ತು ಸಾಲವಿಲ್ಲ. ಗಂಡನ ಹೆಸರಿನಲ್ಲಿ ಸಾಲ, ಜಮೀನು ಇದ್ದರೆ ಪರಿಹಾರ ಕೊಡಲು ಸಾಧ್ಯವಿಲ್ಲವೆಂದು ಅರ್ಜಿ ತಿರಸ್ಕರಿಸಿದ್ದಾರೆ ಎಂದು ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರತನ್ ಸಚಿವರ ಗಮನಕ್ಕೆ ತಂದರು.ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ನೀಡಬೇಕು. ಈಗ ತಿರಸ್ಕರಿಸಿರುವ ಅರ್ಜಿಗಳನ್ನು ಸಮಿತಿ ಮುಂದೆ ಇಟ್ಟು, ಪರಿಶೀಲಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.