ವಿಜಯಪುರ: ಇಲ್ಲಿನ ರುಡ್ಸೆಟ್ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ವರ್ಷದಲ್ಲಿ 54 ತರಬೇತಿ ಶಿಬಿರ ಸಂಘಟಿಸಲಾಗಿದ್ದು, 1574 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ ಎಂದು ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಆರ್.ಟಿ.ಉತ್ತರಕರ ತಿಳಿಸಿದ್ದಾರೆ.ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಭೇಟಿ ಮಾಡಿ ವಿಜಯಪುರದ ರುಡ್ಸೆಟ್ ಸಂಸ್ಥೆಯ ವಾರ್ಷಿಕ ವರದಿ, ಕಾರ್ಯ ಚಟುವಟಿಕೆಗಳ ಕುರಿತು ವಿವರಣೆ ನೀಡಿದ ಸಂದರ್ಭದಲ್ಲಿ ಈ ವಿಷಯವನ್ನು ಪ್ರಕಟಿಸಿದರು.
2016–-17 ನೇ ಸಾಲಿನಲ್ಲಿ ಸಂಸ್ಥೆಯು 54 ತರಬೇತಿ ತಂಡಗಳನ್ನು ಪೂರ್ಣಗೊಳಿಸಿದ್ದು, ಇದರಲ್ಲಿ 1574 ಅಭ್ಯರ್ಥಿಗಳನ್ನು ತರಬೇತಿಗೊಳಿಸಿದೆ. ಒಟ್ಟು ಅಭ್ಯರ್ಥಿಗಳಲ್ಲಿ 1154 ಗ್ರಾಮೀಣ ಯುವ ಜನತೆ ತರಬೇತಿ ಪಡೆದಿದ್ದಾರೆ.ಹೈನುಗಾರಿಕೆ, ಹೊಲಿಗೆ, ಮೋಟರ್ ರೀವೈಂಡಿಂಗ್, ಕಂಪ್ಯೂಟರ್, ಮೊಬೈಲ್ ರಿಪೇರಿ, ಕುರಿ ಸಾಕಣೆ ಸೇರಿದಂತೆ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡಲಾಗಿದೆ. 414 ಪರಿಶಿಷ್ಟ ಜಾತಿ, 74 ಪರಿಶಿಷ್ಟ ಪಂಗಡ, 121 ಅಲ್ಪಸಂಖ್ಯಾತ ವರ್ಗ, 817 ಹಿಂದುಳಿದ ಹಾಗೂ 148 ಅಭ್ಯರ್ಥಿಗಳು ಇತರೆ ವರ್ಗಕ್ಕೆ ಸೇರಿದವರಾಗಿದ್ದಾರೆ.
ವಿವಿಧ ಸ್ವ -ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ 1184 ಅಭ್ಯರ್ಥಿಗಳಲ್ಲಿ 476 ಜನ ₹ 6.30 ಕೋಟಿ ಬ್ಯಾಂಕಿನ ಸಾಲ ಸೌಲಭ್ಯ ಪಡೆದಿದ್ದಾರೆ, 665 ಅಭ್ಯರ್ಥಿಗಳು ಸ್ವಂತ ಬಂಡವಾಳ ಹಾಕಿ ಉದ್ಯೋಗ ಆರಂಭಿಸಿದ್ದಾರೆ. ಇದರಲ್ಲಿ ಕಂಪ್ಯೂಟರ್ ಸಂಬಂಧಿತ ತರಬೇತಿ ಪಡೆದ 93 ಜನ ಅಭ್ಯರ್ಥಿಗಳು ಅಲ್ಲಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ, ಕಂಪ್ಯೂಟರ್ ಸೆಂಟರ್ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ವಿವಿಧೆಡೆ ಉದ್ಯೋಗ ಮಾಡಲು ಅನುಕೂಲವಾಗುವಂತೆ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.
ರುಡಸೆಟ್ ಸಂಸ್ಥೆಯು ಜಿಲ್ಲೆಯ ವಿವಿಧ ಇಲಾಖೆ, ಸಂಘ ಸಂಸ್ಥೆಗಳೊಂದಿಗೆ ಕೂಡಿ ಒಟ್ಟು 75 ಉದ್ಯಮಶೀಲತಾ ಜಾಗೃತಿ ಶಿಬಿರ ಏರ್ಪಡಿಸಿ, 5876 ಜನರಿಗೆ ಸಂಸ್ಥೆಯ ಹಾಗೂ ಸ್ವ-ಉದ್ಯೋಗದ ಬಗ್ಗೆ ಮಾಹಿತಿ ನೀಡಿದೆ ಎಂದಿದ್ದಾರೆ.ಶ್ಲಾಘನೆವಿಜಯಪುರದ ರುಡ್ಸೆಟ್ ಸಂಸ್ಥೆ ವತಿಯಿಂದ ಕೈಗೊಳ್ಳಲಾಗುತ್ತಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಹ ಶ್ಲಾಘಿಸಿದ್ದು, ಜಿಲ್ಲೆಯ ಜನತೆಗೆ ಇದೇ ರೀತಿಯ ಸೇವೆಯನ್ನು ಅವಿರತವಾಗಿ ಒದಗಿಸಬೇಕು ಎಂದು ಇದೇ
ಸಂದರ್ಭ ಸಲಹೆ ನೀಡಿದರು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.