‘ಪತ್ತೇದಾರಿ ಪ್ರತಿಭಾ’ ಧಾರಾವಾಹಿಯಲ್ಲಿ ವಿಲನ್ (ಅದಿತಿ) ಪಾತ್ರದಲ್ಲಿ ನಟಿಸುತ್ತಿರುವ ಶಿಕಾರಿಪುರ ಮೂಲದ ಸೌಮ್ಯಾ, ಕಾಲೇಜು ದಿನಗಳಿಂದಲೂ ಮುಂಗೋಪಿ. ಹಾಜರಾತಿಗಾಗಿ ಉಪನ್ಯಾಸಕರೊಂದಿಗೆ ಜಗಳವಾಡುತ್ತಿದ್ದ ಇವರಿಗೆ, ‘ಬಕೆಟ್’ ಹಿಡಿಯುವವರನ್ನು ಕಂಡರೆ ಎಲ್ಲಿಲ್ಲದ ಸಿಟ್ಟಂತೆ. ಇಂದಿಗೂ ಅದೇ ಗುಣಗಳನ್ನು ಮೈಗೂಡಿಸಿಕೊಂಡಿರುವ ಸೌಮ್ಯಾ, ಉತ್ತಮ ಪಾತ್ರ ಸಿಕ್ಕ ಖುಷಿಯಲ್ಲಿದ್ದಾರೆ.
ನಟಿ ಸೌಮ್ಯಾ ‘ಗುಲ್ಮೊಹರ್’ನೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.
* ಪ್ರತಿಭಾ ಕೈಯಲ್ಲಿ ಸಿಕ್ಕಿಹಾಕಿಕೊಳ್ಳುವಂಥ ಐಡಿಯಾಗಳನ್ನು ಏಕೆ ಮಾಡ್ತೀರಾ?
ಧಾರಾವಾಹಿಯಲ್ಲಿ ಪದ್ಮಾ ವಾಸಂತಿ ಅವರ ಎರಡನೇ ಸೊಸೆಯಾಗಿರುತ್ತೇನೆ. ಶ್ರೀಮಂತರ ಮಗಳು, ತುಂಬಾ ಕೋಪಿಷ್ಠೆ, ಪ್ರತಿಭಾಳಿಗಿಂತ ಹೆಚ್ಚಿನ ಆದ್ಯತೆ ಮನೆಯಲ್ಲಿ ನನಗೇ ಸಿಗಬೇಕು ಎಂದು ಬಯಸುತ್ತೇನೆ. ಹಾಗಾಗಿ ಅವಳ ಪತ್ತೇದಾರಿ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಿರುತ್ತೇನೆ. ಅವಳ ಈ ಕೆಲಸ ಮನೆಯವರಿಗೆ ಇಷ್ಟವಿರುವುದಿಲ್ಲ. ಇದನ್ನೇ ಬಳಸಿಕೊಂಡು ಕಾಲೆಳೆಯಲು ಹೋಗಿ ಸಿಕ್ಕಿಹಾಕಿಕೊಳ್ಳುತ್ತೇನೆ ಅಷ್ಟೇ.
* ನೀವು ಚಿಕ್ಕವರಿದ್ದಾಗ ಏನಾದ್ರೂ ಕಳ್ಳತನ ಮಾಡಿದ್ದು ನೆನಪಿದೆಯಾ?
ಗೋಲಿ ಕದ್ದ ನೆನಪು ಇದೆ. ಐದನೇ ತರಗತಿ ಓದುವವರೆಗೂ ಗೋಲಿ ಆಡುತ್ತಿದ್ದೆ, ನನ್ನ ಬಳಿ ಗೋಲಿಗಳು ಖಾಲಿಯಾದರೆ ಸ್ನೇಹಿತರ ಗೋಲಿ ಕದಿಯುತ್ತಿದ್ದೆ.
* ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿದ್ದಾಗ ಹಾಜರಾತಿಗಾಗಿ ಉಪನ್ಯಾಸಕರೊಂದಿಗೆ ಜಗಳ ಮಾಡುತ್ತಿದ್ರಂತೆ?
ಅಂಕಗಳಿಗೆ, ಹಾಜರಾತಿಗಾಗಿ ಜಗಳ, ವಾದ ಮಾಡುತ್ತಿದ್ದೆ. ಸ್ನೇಹಿತೆಯರೆಲ್ಲ ಒಟ್ಟುಗೂಡಿ ಉಪನ್ಯಾಸಕರ ಬಳಿ ಹೋಗುತ್ತಿದ್ದೆವು. ನನ್ನದೇ ನಡೆಯಬೇಕು ಎಂಬ ಹಟವಿತ್ತು. ಈಗ ಕಿರುತೆರೆಯಲ್ಲೂ ಅಂಥದ್ದೇ ಪಾತ್ರಗಳು ಸಿಗುತ್ತಿವೆ.
* ಮೇಕಪ್ ಮಾಡಿಕೊಳ್ಳದೆ ಕಾಲೇಜಿಗೆ ಹೋಗಿದ್ದೀರಾ?
ತುಂಬಾ ಕಷ್ಟದ ದಿನಗಳವು. ಮೂರ್ನಾಲ್ಕು ಜೊತೆ ಒಳ್ಳೆಯ ಡ್ರೆಸ್ಗಳಿದ್ದವು ಅಷ್ಟೇ, ಸ್ನೇಹಿತೆಯರ ಉಡುಪುಗಳನ್ನು ಹಾಕಿಕೊಂಡು ಹೋಗಿದ್ದೇನೆ, ಫೇರ್ ಅಂಡ್ ಲವ್ಲಿ ಕ್ರೀಂ ತೆಗೆದುಕೊಳ್ಳಲೂ ಹಣವಿರಲಿಲ್ಲ. ಇನ್ನೆಲ್ಲಿಯ ಮೇಕಪ್...
* ಬಹಳ ಸಿಟ್ಟು ಬಂದ್ರೆ ಏನು ಮಾಡ್ತೀರಾ?
ಸಿಟ್ಟು ಬರುವ ಹಾಗೆ ಮಾಡಿದವರನ್ನು ಹೊಡೆಯುತ್ತೇನೆ. ಹೆಚ್ಚಾಗಿ ನಮ್ಮ ಅಪ್ಪ ಸಿಟ್ಟು ಬರಿಸುತ್ತಾರೆ ಆದರೆ ಹೊಡೆಯಲು ಆಗೋದಿಲ್ಲ.
* ಇತ್ತೀಚೆಗೆ ದಪ್ಪ ಆಗಿದ್ದೀರಲ್ಲ?
55 ಕೆ.ಜಿ ಅಷ್ಟೇ ಇರೋದು, ದೇಹ ಸೌಂದರ್ಯಕ್ಕಾಗಿ ಡಾನ್ಸ್ ಕ್ಲಾಸಿಗೆ ಹೋಗುತ್ತೇನೆ.
* ವಿಶ್ವವಿದ್ಯಾಲಯದಲ್ಲಿ ಓದುವಾಗ ಹೆಚ್ಚಾಗಿ ಕ್ಲಾಸ್ಗೆ ಬಂಕ್ ಮಾಡ್ತಿದ್ರಂತೆ ಹೌದಾ?
ಪಾನಿಪುರಿ ತಿನ್ನುವುದಕ್ಕಾಗಿಯೇ ಕ್ಲಾಸಿಗೆ ಬಂಕ್ ಮಾಡಿ ಹೋಗುತ್ತಿದ್ದೆವು.
* ಈಗ ಮೇಕಪ್ ಉತ್ಪನ್ನಗಳು ಬ್ಯಾನ್ ಆದ್ರೆ ಏನು ಮಾಡ್ತೀರಾ?
ಕ್ಯಾಮೆರಾ ಮುಂದೆ ಬರಲು ಮೇಕಪ್ ಬೇಕು. ಬಣ್ಣ ಹಚ್ಚೋದೇ ನಮ್ಮ ಜೀವನ. ಉಳಿದಂತೆ ಅಗತ್ಯವಿಲ್ಲ
* ನಿಮ್ಮ ನೆಚ್ಚಿನ ಊಟ?
ಅಕ್ಕಿ ರೊಟ್ಟಿ, ಎಣ್ಣೆಗಾಯಿ ಪಲ್ಯ.
* ನಿರೂಪಣೆಯಿಂದ ಕಿರುತೆರೆಗೆ ಬರಲು ಕಾರಣ?
ಮೂರು ವರ್ಷಗಳ ಹಿಂದೆ ವಾಹಿನಿ ಒಂದರಲ್ಲಿ ನಿರೂಪಕಿ ಆಗಿದ್ದೆ. ಅನಿವಾರ್ಯ ಕಾರಣಗಳಿಂದ ಆ ಕೆಲಸ ಬಿಡಬೇಕಾಯಿತು. ನಂತರ ಹೊಟ್ಟೆಪಾಡಿಗಾಗಿ ಆಯ್ಕೆ ಮಾಡಿಕೊಂಡದ್ದು ಕಿರುತೆರೆಯನ್ನು. ‘ವೈಶಾಖ’, ‘ಮಹಾಪರ್ವ’ ಹಾಗೂ ‘ಕರ್ಪೂರದ ಗೊಂಬೆ’ ಧಾರಾವಾಹಿಗಳಲ್ಲಿ ಅಭಿನಯಿಸಿದೆ.
* ಸಿನಿಮಾದಲ್ಲಿ ಅವಕಾಶ ಸಿಕ್ಕರೆ?
‘ಪತ್ತೇದಾರಿ ಪ್ರತಿಭಾ’ ಒಂದು ಭಿನ್ನ ಧಾರಾವಾಹಿ. ನಿರ್ದೇಶಕ ನವೀನ್ ಕೃಷ್ಣ ಅವರು ಎಲ್ಲಾ ಪಾತ್ರಗಳಿಗೂ ಆದ್ಯತೆ ಕೊಟ್ಟಿದ್ದಾರೆ. ಸಿನಿಮಾಗಳಲ್ಲಿ ನಟಿಸುವ ಯೋಚನೆಯಿಲ್ಲ. ಇನ್ನೊಂದು ಮಾತು, ಈ ಧಾರಾವಾಹಿಯಲ್ಲಿ ನನ್ನ ಪ್ರವೇಶಕ್ಕೆ ವಿಚಿತ್ರ ಹಿನ್ನೆಲೆ ಸಂಗೀತ ಹಾಕುತ್ತಾರೆ. ಇದು ಎಷ್ಟು ಜನಪ್ರಿಯವಾಗಿದೆ ಎಂದರೆ, ನಮ್ಮ ಎದುರು ಮನೆಯ ಮಕ್ಕಳು ನನ್ನನ್ನು ನೋಡಿ, ಆ ಮ್ಯೂಸಿಕ್ ಹೇಳಿ ಗೇಲಿ ಮಾಡುತ್ತಾರೆ.
* ಮುಂದಿನ ಕನಸು?
ಧಾರಾವಾಹಿಯಲ್ಲೇ ಉತ್ತಮ ಪಾತ್ರಗಳನ್ನು ಮಾಡಬೇಕು ಅಂದುಕೊಂಡಿದ್ದೇನೆ.
***
ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ
ನಮ್ಮ ವಿಳಾಸ: ಪ್ರಜಾವಾಣಿ, ‘ಗುಲ್ಮೊಹರ್’ ವಿಭಾಗ. ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು– 560001.
ಇ–ಮೇಲ್: gu* mohar@prajavani.co.in * ವಾಟ್ಸ್ ಆ್ಯಪ್: 95133 22931 ದೂರವಾಣಿ: 080 2588 0636
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.