ಇಸ್ಲಾಮಾಬಾದ್: ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ದೂತಾವಾಸ ಸಂಪರ್ಕ ಕಲ್ಪಿಸಿಕೊಡಬೇಕು ಎಂಬ ಭಾರತದ ಮನವಿಯನ್ನು ಅರ್ಹತೆ ಆಧಾರದಲ್ಲಿ ಪರಿಗಣಿಸಲಾಗುವುದು ಎಂದು ಪಾಕಿಸ್ತಾನ ಹೇಳಿದೆ.
ದೂತಾವಾಸ ಸಂಪರ್ಕ ಕಲ್ಪಿಸುವ ಸಂಬಂಧ ಭಾರತ ಮತ್ತು ಪಾಕಿಸ್ತಾನಗಳ ನಡುವೆ ದ್ವಿಪಕ್ಷೀಯ ಒಪ್ಪಂದವಿದೆ. ಆದರೆ ಎಲ್ಲ ಪ್ರಕರಣಗಳನ್ನೂ ಅರ್ಹತೆ ಆಧಾರದಲ್ಲಿಯೇ ನಿರ್ಧರಿಸಬೇಕಾ ಗುತ್ತದೆ ಎಂದು ವಿದೇಶಾಂಗ ಕಚೇರಿ ವಕ್ತಾರ ತಿಳಿಸಿದ್ದಾರೆ.
**
‘ಜಾಧವ್ ರಕ್ಷಿಸಿ’: ಸಹಿ ಅಭಿಯಾನ
ವಾಷಿಂಗ್ಟನ್: ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ರಕ್ಷಿಸುವಂತೆ ಡೊನಾಲ್ಡ್ ಟ್ರಂಪ್ ಆಡಳಿತ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಅಮೆರಿಕದಲ್ಲಿನ ಭಾರತೀಯರ ಸಮುದಾಯ ‘ಶ್ವೇತ ಭವನ ಅರ್ಜಿ ಸಹಿ ಸಂಗ್ರಹ’ ಆರಂಭಿಸಿದೆ.
ಈ ಅರ್ಜಿಗೆ ಟ್ರಂಪ್ ಆಡಳಿತದಿಂದ ಪ್ರತಿಕ್ರಿಯೆ ದೊರಕಲು ಮೇ 14ರ ಒಳಗೆ ಕನಿಷ್ಠ ಒಂದು ಲಕ್ಷ ಸಹಿ ಸಂಗ್ರಹವಾಗುವ ಅಗತ್ಯವಿದೆ.