ಹರಿಹರ: ‘ಕಾನೂನುಗಳ ಅನುಷ್ಠಾನದ ಕೊರತೆಯಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ’ ಎಂದು ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ಕೆ.ಎಂ. ಸರ್ವಮಂಗಳ ಆತಂಕ ವ್ಯಕ್ತಪಡಿಸಿದರು.
ನಗರದ ಗಿರಿಯಮ್ಮ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸಮಿತಿ, ವಕೀಲರ ಸಂಘ, ಮಾನವ ಹಕ್ಕುಗಳ ಸಂಘ ಹಾಗೂ ಕಾಲೇಜಿನ ಮಹಿಳಾ ಕೋಶದ ಆಶ್ರಯದಲ್ಲಿ ಶುಕ್ರವಾರ ನಡೆದ ಭೂಮಿ ದಿನಾಚರಣೆ ಹಾಗೂ ಉಚಿತ ಕಾನೂನು ಅರಿವು-– ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕೈಗಾರಿಕೆಗಳಿಂದಾಗುವ ಪರಿಸರ ಮಾಲಿನ್ಯ ತಡೆಗಟ್ಟಲು ಸರ್ಕಾರ ಅನೇಕ ಕಾನೂನುಗಳನ್ನು ರಚಿಸಿದೆ. ಆದರೆ, ಅವುಗಳ ಸಮರ್ಥ ಅನುಷ್ಠಾನದ ಕೊರತೆ, ಪರಿಸರ ನಾಶಕ್ಕೆ ಕಾರಣವಾಗಿದೆ. ಪರಿಸರ ಹಾಗೂ ಜಲ ಮಾಲಿನ್ಯದಿಂದಾಗಿ ಜನ ಸಾಮಾನ್ಯರು ಹಾಗೂ ಪ್ರಾಣಿ–ಪಕ್ಷಿ ಸಂಕುಲ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ’ ಎಂದರು.
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಯುವ ಸಮುದಾಯ ಪ್ರಯತ್ನ ನಡೆಸಬೇಕು’ ಎಂದು ಹೇಳಿದರು.
ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಧೀಶರಾದ ಬೆಣ್ಣೆಕಲ್ ಸುಮಲತಾ ಮಾತನಾಡಿ, ‘ಕಾನೂನಿನ ಅರಿವು ಪ್ರತಿಯೊಬ್ಬರಿಗೆ ಅಗತ್ಯ. ವಿಶೇಷವಾಗಿ ಯುವತಿಯರು ಹಾಗೂ ಮಹಿಳೆಯರು ಕಾನೂನಿನಲ್ಲಿ ಅವರಿಗಿರುವ ಸೌಲಭ್ಯ ಹಾಗೂ ಹಕ್ಕುಗಳನ್ನು ಅರಿತುಕೊಳ್ಳಬೇಕು. ಯಾವುದೇ ದೌರ್ಜನ್ಯ ಅಥವಾ ಮಾನಸಿಕ ಕಿರುಕುಳಗಳಿಂದ ಪಾರಾಗಲು ಕಾನೂನು ನೆರವು ಪಡೆಯಲು ಹಿಂಜರಿಕೆ ಬೇಡ’ ಎಂದು ಹೇಳಿದರು.
‘ಆರ್ಥಿಕವಾಗಿ ಹಿಂದುಳಿದವರಿಗೆ ತಾಲ್ಲೂಕು ಕಾನೂನು ಸೇವಾ ಸಮಿತಿ ಎಲ್ಲ ರೀತಿಯ ಕಾನೂನು ನೆರವುಗಳನ್ನು ನೀಡಲು ಸಿದ್ಧವಾಗಿದೆ. ಈ ಸೌಲಭ್ಯಗಳನ್ನು ಬಳಸಿಕೊಂಡು, ತೊಂದರೆ ಹಾಗೂ ಸಮಸ್ಯೆಗಳಿಂದ ಬಿಡುಗಡೆ ಹೊಂದಬೇಕು’ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಎಚ್. ಪ್ಯಾಟಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಸಹಾಯಕ ಅಭಿಯೋಜಕ ಶಂಶೇರ್ ಅಲಿಖಾನ್, ಸಂಪನ್ಮೂಲ ವ್ಯಕ್ತಿ ಭಾಗೀರಥಿ ಉಪಸ್ಥಿತರಿದ್ದರು.