ಯಾದಗಿರಿ: ವಕೀಲರ ಹಕ್ಕುಚ್ಯುತಿಗಾಗಿ ಕೇಂದ್ರ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ನೀಡಿರುವ ಮಸೂದೆ ತಿದ್ದುಪಡಿ ವರದಿಯನ್ನು ತಿರಸ್ಕರಿಸು ವಂತೆ ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿ ಗಳು ಪ್ರತಿಭಟನೆ ನಡೆಸಿದರು.
‘ವಕೀಲರ ಸಂಘಟನೆಗಳಲ್ಲಿ ವಕೀಲಿ ವೃತ್ತಿ ಅಲ್ಲದವರನ್ನು ತರುವ ಹುನ್ನಾರ ನಡೆದಿದೆ. ವಕೀಲರಿಗೆ ಸಾಂವಿಧಾನಿಕವಾಗಿ ನೀಡಿರುವ ಹಕ್ಕುಗಳನ್ನು ಮೊಟಕುಗೊಳಿಸುವ ಉದ್ದೇಶದಿಂದ ಮಸೂದೆ ತಿದ್ದುಪಡಿಗೆ ವರದಿ ನೀಡಲಾಗಿದೆ.
ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ವಿರುದ್ಧವಾದುದು’ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಕಾನೂನು ಸಚಿವರು ಈ ವರದಿಯನ್ನು ಅಂಗೀಕರಿಸದೆ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
‘ಕೇಂದ್ರ ಕಾನೂನು ಆಯೋಗದ ಅಧ್ಯಕ್ಷ ಚೌಹಾಣ ಅವರನ್ನು ವಜಾ ಗೊಳಿಸಬೇಕು. ವಕೀಲರ ಹಿತಕ್ಕೆ ವಿರುದ್ಧ ವ್ಯವಸ್ಥೆ ತರಲು ಹೊರಟಿರುವ ಅವರನ್ನು ಅಧ್ಯಕ್ಷ ಸ್ಥಾನ ನಿಭಾಯಿಸುವ ಶಕ್ತಿ ಇಲ್ಲ. ದೇಶದ ವಕೀಲರಿಗೆ ಕಾನೂನು ಆಯೋಗ ತಪ್ಪು ಮಾಹಿತಿ ನೀಡಿ ಹಕ್ಕುಚ್ಯುತಿಗೆ ಕಾರಣವಾಗಿದೆ’ ಎಂದು ದೂರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ ಇಟಗಿ, ನಿಂಗಣ್ಣ ಬಂದಳ್ಳಿ,ರಾಜು ದೊಡ್ಡಮನಿ, ಬಿ.ಬಿ ಕಿಲ್ಲನಕೇರಾ, ನರಸಿಂಹರಾವ್ ಕುಲಕರ್ಣಿ, ಶಫೀಕ್ ಅಹ್ಮದ್ ಖುರೇಶಿ, ಮಾರುತಿ ಕಾಳೆನೋರ್, ಪರ್ವತರೆಡ್ಡಿ ಪಾಟೀಲ್, ದೇವು ದೊಡ್ಡಮನಿ, ಶಾಂತಪ್ಪ ಕಾನಳ್ಳಿ, ಎಸ್.ಬಿ.ಪಾಟೀಲ್, ಹಣಮಂತ ಇಟಗಿ, ಟಿ.ಎಸ್. ಮಾಲಿಪಾಟೀಲ್, ಹಣಮಂತ ಜೋಶಿ ಭಾಗವಹಿಸಿದ್ದರು.