ಬೈಂದೂರು: ‘ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಬೈಂದೂರು ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿಗೆ ₹513.33 ಲಕ್ಷ ಅನುದಾನ ದೊರೆತಿದೆ. ಅದರ ಮೊದಲ ಕಂತಿನ ₹2 ಕೋಟಿ ಇದೀಗ ಬಿಡುಗಡೆಯಾಗಿದೆ.
ಈ ಅನುದಾನದಿಂದ ಬೈಂದೂರಿನ ಸೋಮೇಶ್ವರ, ಮರವಂತೆ ಹಾಗೂ ತ್ರಾಸಿ ಬೀಚ್ ಅಭಿವೃದ್ಧಿಪಡಿಸಲಾಗುವುದು’ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆಸಿದ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಕರ್ತರಿಗೆ ಮಾಹಿತಿ ನೀಡಿದರು.
‘ಒತ್ತಿನೆಣೆ ಹಾಗೂ ಸೋಮೇಶ್ವರ ಅಭಿವೃದ್ಧಿಗೆ ₹ 243.65 ಲಕ್ಷ, ಮರವಂತೆ ಬೀಚ್ಗೆ ₹ 136.18 ಲಕ್ಷ ಮತ್ತು ತ್ರಾಸಿ ಬೀಚ್ ಅಭಿವೃದ್ಧಿಗೆ ₹ 133.5 ಲಕ್ಷ ವ್ಯಯಿಸಲಾಗುವುದು. ಮೂರೂ ಕೇಂದ್ರಗಳ ಅಭಿವೃದ್ಧಿಗೆ ಈಗಾಗಲೆ ಯೋಜನೆ ರೂಪಿಸಲಾಗಿದ್ದು, ಸೋಮೇಶ್ವರದಲ್ಲಿ ಚಾಲನೆ ನೀಡಲಾಗಿದೆ’ ಎಂದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಬಿ. ಆರ್. ಕಾರ್ಯನಿರ್ವಾಹಕ ಎಂಜಿನಿಯರ್ ಗಂಗಾಧರ, ಸಹಾಯಕ ಎಂಜಿನಿಯರ್ ಸಿದ್ದರಾಮಣ್ಣ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಇದ್ದರು.
ಅಧಿಕಾರಿಗಳೊಂದಿಗೆ ಸೋಮೇಶ್ವರ ಬೀಚ್ ಸಂದರ್ಶಿಸಿದರು ಅಲ್ಲಿನ ಕಾಮಗಾರಿಯನ್ನು ವೀಕ್ಷಿಸಿದ ಶಾಸಕರು ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದರು.