ಇಂಡಿ: ತಾಲ್ಲೂಕಿನ ಬಬಲಾದ ಗ್ರಾಮದಲ್ಲಿ ಒಂದೇ ಒಂದು ಕೊಳವೆ ಬಾವಿ ಇದ್ದು ಒಂದು ಕೊಡ ನೀರು ತುಂಬಿಸಲು 10 ನಿಮಿಷ ಕಾಯಬೇಕು. ಹೀಗಾಗಿ ಜನಸಾಮಾನ್ಯರು ನಳದ ಮುಂದೆ ಕುಡಿಯುವ ನೀರಿಗಾಗಿ ಗಂಟೆಗಟ್ಟಲೇ ಕಾಯಬೇಕಾಗಿದೆ.
ಇದು ಬಬಲಾದ ಒಂದೇ ಗ್ರಾಮದ ಸ್ಥಿತಿಯಲ್ಲ. ಹಳಗುಣಕಿ, ನಿಂಬಾಳ, ತಡವಲಗಾ ಮುಂತಾದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕುಡಿಯುವ ನೀಗಿಗಾಗಿ ಕಿ.ಮೀ. ಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
‘ನೀರಿಗಾಗಿ ನಿಂತು ನಿಂತು ಸಾಕಾಗ್ಯಾದರೀ. ಬ್ಯಾಸಗಿ ಯ್ಯಾಕ ಬರ್ತಾದ್ ಅನಿಸಿಬಿಟ್ಟಾದರೀ. ಟ್ಯಾಂಕರ್ ತುಂಬಿಸುವ ಬೋರ್ ಒಣಗ್ಯಾದರೀ. ನಮಗ ಈ ಪರಿ ಬಂದಾದರೀ’ ಎಂದು ಬಬಲಾದ ಗ್ರಾಮಸ್ಥರಾದ ವಿಠೋಬಾ ದಶವಂತ, ದುಂಡಪ್ಪ ದಶವಂತ ಮತ್ತು ರೇಖಾ ದಶವಂತ ನೋವು ತೋಡಿಕೊಂಡರು.
ತಾಲ್ಲೂಕಿನ ಹಳಗುಣಕಿ ಗ್ರಾಮಕ್ಕೆ ನೀರು ಪೂರೈಸುವ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಗ್ರಾಮದಿಂದ 4 ಕಿ.ಮೀ. ದೂರದಲ್ಲಿಯ ಗುಡ್ಡದ ಕೊಳವೆ ಬಾವಿಯಲ್ಲಿ ಹನಿ ಹನಿ ನೀರು ಬರುತ್ತಿದೆ. ಅಲ್ಲಿಂದ ನೀರು ತರಬೇಕಾದ ಪರಿಸ್ಥತಿ ಬಂದಿದೆ.
‘ಚಂದ್ರಾಮ ವಾಲೀಕಾರ ಅವರ ತೋಟದ ಕೊಳವೆ ಬಾವಿಯಿಂದ ನೀರು ಖರೀದಿಸಿ ಪೂರೈಸಲಾಗುತ್ತಿದೆ. ಆದರೆ ಅದು ಸಾಕಾಗುತ್ತಿಲ್ಲ. ಟ್ಯಾಂಕರ್ಗೆ ಮಂಜೂರಾತಿ ನೀಡಿದ್ದಾರೆ. ಟ್ಯಾಂಕರ್ ಇನ್ನೂವರೆಗೆ ಬಂದಿಲ್ಲ’ ಎಂದು ಗ್ರಾಮದ ನಾಗಪ್ಪ ನಾವಿ, ಭೀಮಾಶಂಕರ ಹೊಸಮನಿ, ಸೋಮಶೇಖರ ಹಿರೇಮಠ ಹೇಳುತ್ತಿದ್ದಾರೆ. ಇಲ್ಲಿಯ ಜನರು ದೇಗಿನಾಳ ಮತ್ತು ನಿಂಬಾಳ ಗ್ರಾಮಗಳ ತೋಟದ ಕೊಳವೆ ಬಾವಿಗಳಿಂದ ನೀರು ತರುತ್ತಿದ್ದಾರೆ.
ನೀರಿನ ಕೊರತೆಯಿಂದಾಗಿ ನಿಂಬಾಳ ಗ್ರಾಮದ ಶಿವಾನಂದ ಜವಳಗಿ ಪೂಜಾರಿ ಅವರ ನಿಂಬೆ ಬನ ಸಂಪೂರ್ಣ ಒಣಗಿ ಹೋಗಿದೆ. ತಡವಲಗಾ ಗ್ರಾಮದ ರೈತ ಉಮೇಶ ಒಣರೊಟ್ಟಿ ಎನ್ನುವವರು ಕಳೆದ 8 ವರ್ಷಗಳಿಂದ ಜೋಪಾನವಾಗಿ ಬೆಳೆಸಿರುವ 3 ಎಕರೆ ನಿಂಬೆ ಗಿಡಕ್ಕೂ ನೀರಿಲ್ಲದಾಗಿದೆ. ಗಿಡಗಳ ರಕ್ಷಣೆಗಾಗಿ ಸುಮಾರು 15 ಕಿ.ಮೀ. ದೂರದ ಮಸಳಿ ಗ್ರಾಮದಿಂದ ಟ್ಯಾಂಕರ್ ನೀರು ತಂದು ನಿಂಬೆ ಗಿಡಗಳಿಗೆ ಉಣಿಸುತ್ತಿದ್ದಾರೆ.
‘ಟ್ಯಾಂಕರ್ ಮೂಲಕ ನೀರು ತಂದು ಹಾಯಿಸಲು ಲಕ್ಷಾಂತರ ಹಣ ಖರ್ಚು ಮಾಡಬೇಕಾಗುತ್ತದೆ. ಗಿಡ ಒಣಗುವುದನ್ನು ನೋಡಲಾಗದೇ ನೀರು ತಂದು ಹಾಕುತ್ತಿದ್ದೇನೆ. ಮುಂದೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ’ ಎಂದು ಉಮೇಶ ಒಣರೊಟ್ಟಿ ಹೇಳುತ್ತಾರೆ.
ಬಹುತೇಕ ಗ್ರಾಮಗಳಲ್ಲಿ ತೋಟಗಾರಿಕಾ ಬೆಳೆಗಳಿವೆ. ಭೀಮಾ ನದಿಯ ಸರಹದ್ದು ಬಿಟ್ಟರೆ ಹೊರ್ತಿ, ಇಂಚಗೇರಿ, ನಿಂಬಾಳ, ತಡವಲಗಾ, ಅಥರ್ಗಾ ಮುಂತಾದ ಗ್ರಾಮಗಳಲ್ಲಿ ತೋಟಗಾರಿಕೆ ಬೆಳೆ ಸಂರಕ್ಷಣೆ ಮಾಡಿಕೊಳ್ಳುವುದು ಒಂದು ಸವಾಲಾಗಿದೆ. ಈಗಾಗಲೇ ಅರ್ಧದಷ್ಟು ರೈತರ ತೋಟಗಾರಿಕಾ ಬೆಳೆಗಳು ಒಣಗಿ ಹೋಗಿವೆ. ಕೆಲವರು ಟ್ಯಾಂಕರ್ ಮೊರೆ ಹೋಗಿದ್ದು ಬೆಳೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
‘ಕುಡಿಯುವ ನೀರು ನಿರ್ವಹಣೆಗೆ ಎರಡು ಟ್ಯಾಂಕರ್ ಉಚಿತವಾಗಿ ಪೂರೈಸಲಾಗುವುದು. ನಿಂಬೆ, ದಾಳಿಂಬೆ, ದ್ರಾಕ್ಷಿ ಬೆಳೆಗಳಿಗೆ ಸರ್ಕಾರ 2 ತಿಂಗಳ ಕಾಲ ಟ್ಯಾಂಕರ್ ನೀರು ಪೂರೈಸಬೇಕು’ ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಶೀಲವಂತ ಉಮರಾಣಿ ಆಗ್ರಹಿಸಿದ್ದಾರೆ. ಜಾನುವಾರುಗಳಿಗೆ ತಡವಲಗಾ, ಹೊರ್ತಿ, ಹಳಗುಣಕಿ ಗ್ರಾಮಗಳಲ್ಲಿ ಗೋಶಾಲೆ ತೆರೆಯಬೇಕು ಎಂದು ಆಗ್ರಹಿಸಿದ್ದಾರೆ.
ಎ.ಸಿ.ಪಾಟೀಲ