ಶ್ರೀನಗರ: ಜಮ್ಮು– ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ 9 ವರ್ಷದ ಬಾಲಕಿ ಸೇರಿದಂತೆ ಒಂದೇ ಕುಟುಂಬದ ಐದು ಮಂದಿಯ ಮೇಲೆ ಗೋರಕ್ಷಕರು ಶುಕ್ರವಾರ ಸಂಜೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದ್ದಾರೆ.
ಗೋ ರಕ್ಷಕರಿಂದ ಹಲ್ಲೆಗೊಳಗಾದ ಕುಟುಂಬಸ್ಥರು ತಮ್ಮ ಜಾನುವಾರುಗಳ ಸಮೇತ ಜಮ್ಮುವಿನ ತಲ್ವಾರ ಪ್ರದೇಶದ ಕಡೆಗೆ ಹೋಗುತ್ತಿದ್ದರು. ಈ ವೇಳೆ ಬಂದ ಗೋ ರಕ್ಷಕರು ಏಕಾಏಕಿ ದಾಳಿ ನಡೆಸಿ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
9 ವರ್ಷದ ಬಾಲಕಿ ಸಮ್ಮಿಗೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಗೋ ರಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆ ನಡೆಸಿದ ಗೋರಕ್ಷಕರಲ್ಲಿ ಐವರನ್ನು ಗುರುತಿಸಲಾಗಿದೆ. ಆದರೆ ಯಾರನ್ನು ಬಂಧಿಸಿಲ್ಲ. ತನಿಖೆ ಕೈಗೆತ್ತಿಕ್ಕೊಳ್ಳಲಾಗಿದೆ ಎಂದು ರಿಯಾಸಿ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
‘ಗೋರಕ್ಷಕರು ನಮ್ಮ ಮೇಲೆ ನಿರ್ದಾಕ್ಷಿಣ್ಯವಾಗಿ ಹಲ್ಲೆ ನಡೆಸಿದರು. ಅವರು ಹೊಡೆಯುವ ವೇಳೆ ನಮ್ಮಲ್ಲಿ ಕೆಲವರು ತಪ್ಪಿಸಿಕೊಂಡೆವು. ಆಗ ನಮ್ಮ 10 ವರ್ಷದ ಮಗನೊಬ್ಬ ನಾಪತ್ತೆಯಾಗಿದ್ದಾನೆ.
ಆತನ ಬಗ್ಗೆ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ಅವರು ನಮ್ಮನ್ನೆಲ್ಲಾ ಕೊಂದು ನಮ್ಮ ಶವಗಳನ್ನು ನದಿಗೆ ಎಸೆಯಬೇಕೆಂದುಕೊಂಡಿದ್ದರು’ ಎಂದು ಗಾಯಾಳು ನಸೀಮ್ ಬೇಗಮ್ ಹೇಳಿದ್ದಾರೆ.