ಮುಂಬೈ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಲ್ಲಿ ಸೇರ್ಪಡೆ ಮಾಡಿರುವ ಆರೋಗ್ಯಕ್ಕೆ ಹಾನಿಕರ ಸರಕುಗಳ ಪಟ್ಟಿಗೆ ಬೀಡಿಯನ್ನೂ ಸೇರಿಸುವಂತೆ ದೇಶದ 100ಕ್ಕೂ ಹೆಚ್ಚು ಕ್ಯಾನ್ಸರ್ ಆಸ್ಪತ್ರೆಗಳ ಪ್ರಮುಖ ವೈದ್ಯರು ಒತ್ತಾಯಿಸಿದ್ದಾರೆ.
ತಂಬಾಕು ಸೇವನೆಗೆ ಸಂಬಂಧಿಸಿದ ಸಾವಿನ ಪ್ರಕರಣಗಳಲ್ಲಿ ಕಡಿಮೆ ಬೆಲೆಯ ತಂಬಾಕು ಒಳಗೊಂಡಿರುವ ಬೀಡಿ ಕೊಡುಗೆ ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ಜಿಎಸ್ಟಿ ಮಂಡಳಿ ಸೋಮವಾರ ಸಭೆ ಸೇರಿ ತೆರಿಗೆ ದರಗಳನ್ನು ನಿಗದಿ ಮಾಡುವ ಸಾಧ್ಯತೆ ಇದೆ. ‘ಜಿಎಸ್ಟಿ’ ತೆರಿಗೆ ವ್ಯವಸ್ಥೆಯಲ್ಲಿ 5 ಹಂತದ ತೆರಿಗೆಗಳ ವ್ಯಾಪ್ತಿಗೆ ತರಬಹುದಾದ ಸರಕು ಮತ್ತು ಸೇವೆಗಳನ್ನು ಈ ಸಭೆಯಲ್ಲಿ ಅಂತಿಮಗೊಳಿಸುವ ನಿರೀಕ್ಷೆ ಇದೆ.
ತಂಬಾಕು ಬೆಳೆಗಾರರ ಹಿತಾಸಕ್ತಿ ರಕ್ಷಿಸುವ ಉದ್ದೇಶಕ್ಕೆ, ಆರೋಗ್ಯಕ್ಕೆ ಅಪಾಯಕಾರಿಯಾದ ಸರಕುಗಳ ಪಟ್ಟಿಯಿಂದ ಮತ್ತು ಹೆಚ್ಚುವರಿ ಸೆಸ್ ವ್ಯಾಪ್ತಿಯಿಂದ ಬೀಡಿ ಹೊರಗೆ ಇಡಲು ಸರ್ಕಾರ ಬಯಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದಕ್ಕೆ ಪ್ರತಿಯಾಗಿ ವೈದ್ಯರು ಈ ಪತ್ರ ಬರೆದಿದ್ದಾರೆ.