ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು,ಸಿ.ಎಂ ಪಿಎ, ದಂಧೆಯ ಸೂತ್ರಧಾರಿಗಳು!

Last Updated 23 ಏಪ್ರಿಲ್ 2017, 5:51 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ಮನೆಯಲ್ಲಿ ಪೊಲೀಸರು ಜಪ್ತಿ ಮಾಡಿದ ಹಣ ಮೂವರು ಐಪಿಎಸ್ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ (ಪಿಎ) ಮಂಜುನಾಥ್‌ಗೆ ಸೇರಿದ್ದು’ ಎಂದು ರೌಡಿಶೀಟರ್ ವಿ.ನಾಗರಾಜ್ ಅಲಿಯಾಸ್ ನಾಗ, ಅಜ್ಞಾತ ಸ್ಥಳದಿಂದ ಹೊಸ ‘ಬಾಂಬ್’ ಎಸೆದಿದ್ದಾನೆ.

ತನ್ನ ಮನೆ ಮೇಲೆ ನಡೆದ ಪೊಲೀಸ್ ದಾಳಿ ಹಾಗೂ ಜಪ್ತಿಯಾದ ₹14.8 ಕೋಟಿಯ ಹಿಂದಿನ ಕತೆ ಬಗ್ಗೆ ಸುಮಾರು 1 ತಾಸು ಮಾತನಾಡಿರುವ ಆತ, ಆ  ವಿಡಿಯೊ ಕ್ಯಾಸೆಟ್ಟನ್ನು  ವಕೀಲರ ಮೂಲಕ ಮಾಧ್ಯಮಗಳಿಗೆ ಹಂಚಿದ್ದಾನೆ. ಅದು ಪೊಲೀಸ್ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಆತನ ಹೇಳಿಕೆಯ ಪೂರ್ಣ ವಿವರ ಹೀಗಿದೆ: ‘ಪೊಲೀಸ್ ಇಲಾಖೆ ನೊಂದವರಿಗೆ ನ್ಯಾಯ ಕೊಡಿಸುವ ದೇವಾಲಯ. ಆದರೆ, ಅಲ್ಲಿ ಕುಳಿತ ಶೇ90ರಷ್ಟು ಮಂದಿ ರೋಲ್‌ಕಾಲ್ ಹಾಗೂ ವಂಚನೆ ಮಾಡುತ್ತಿದ್ದಾರೆ. ಅವರು ದುಡ್ಡಿಗೋಸ್ಕರ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ನನ್ನ ಮನೆ ಮೇಲೆ ನಡೆದ ದಾಳಿಯೇ ಸಾಕ್ಷಿ.’

‘ಪೊಲೀಸರು ಏ.14ರ ಬೆಳಿಗ್ಗೆ 5 ಗಂಟೆಗೆ ಮನೆ ಮೇಲೆ ದಾಳಿ ಮಾಡಿದರು. ಆಗ ನಾನು ಅಲ್ಲಿರಲಿಲ್ಲ. ಪತ್ನಿ ಕರೆಮಾಡಿ ವಿಷಯ ತಿಳಿಸಿದಳು. ಮಾಧ್ಯಮದವರಿಗೆ ಹಾಗೂ ದೇವೇಗೌಡ ಅವರಿಗೆ ಕರೆ ಮಾಡುವಂತೆ ಹೇಳಿದೆ. ಮಾಧ್ಯಮದವರು ಸ್ಥಳಕ್ಕೆ ಬರುವಷ್ಟರಲ್ಲಿ ಪೊಲೀಸರು ಏನೆಲ್ಲ ಚಿಲ್ಲರೆ ಕೆಲಸ ಮಾಡಬಹುದೋ ಅದನ್ನೆಲ್ಲ ಮಾಡಿ ಮುಗಿಸಿದ್ದರು.

‘ಆ ದಿನ ನನ್ನ ‘ಸ್ನೇಹ ಸೇವಾ ಸಮಿತಿ ಟ್ರಸ್ಟ್‌’ನಲ್ಲಿ ₹14.8 ಕೋಟಿ ಪತ್ತೆಯಾಯಿತು ಎಂದು ಹೇಳುತ್ತಿದ್ದಾರೆ. ಆದರೆ, ಅದು ನನಗೆ ದೊಡ್ಡ ವಿಷಯವೇ ಅಲ್ಲ. ಏಕೆಂದರೆ, ಅದೆಲ್ಲ ದಾಳಿಗೆ ಬಂದಿದ್ದ ಅಧಿಕಾರಿಗಳಿಗೇ ಸಂಬಂಧಿಸಿದ ಹಣ.’

‘ಕಾರ್ ಡೀಲರ್ ಕಿಶೋರ್, ಜೆಡಿಎಸ್ ಮುಖಂಡ ಶ್ರೀರಾಮಯ್ಯ ಅವರ ಮಗ ಮಧು, ರಿಯಲ್ ಎಸ್ಟೇಟ್ ಏಜೆಂಟ್ ಉಮೇಶ್, ಆತನ ಅಣ್ಣ ನವೀನ್ ಎಂಬುವರು ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ ಎಂದು ನೀವು ಹೇಳುತ್ತಿದ್ದೀರಾ. ಆದರೆ, ಒಂದು ವಿಷಯ ತಿಳಿದುಕೊಳ್ಳಿ. ಇವರೆಲ್ಲ ಆಗಾಗ್ಗೆ ನನ್ನ ಮನೆಗೆ ಬಂದು ಹೋಗುತ್ತಿದ್ದವರು.’

‘ನನಗೆ ಕರೆ ಮಾಡುತ್ತಿದ್ದ ಇವರು, ಮನೆಯ ಎಲ್ಲ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನೂ ಆಫ್ ಮಾಡುವಂತೆ ಹೇಳುತ್ತಿದ್ದರು. ನಾನು ಆಫ್ ಮಾಡಿದ ನಂತರ ಬಂದು, ‘ಮೂವರು ಐಪಿಎಸ್ ಅಧಿಕಾರಿಗಳಿಗೆ ಸೇರಿದ ಹಣವಿದೆ. ಅವುಗಳನ್ನು ಬದಲಾಯಿಸಿಕೊಡಿ’ ಎಂದು ಒತ್ತಾಯಿಸಿದ್ದರು.  ಅದು ಯಾರು ನನ್ನ ಮನೆ ಮೇಲೆ ದಾಳಿ ನಡೆಸಿದರೋ ಅವರದ್ದೇ ಹಣ ಎಂಬುದು ನಂತರ ಗೊತ್ತಾಯಿತು.’

</p><p>‘ನನ್ನ ಮನೆಯಲ್ಲಿ ಆ ದಂಧೆ ನಡೆಸುತ್ತಿಲ್ಲ ಎಂದು ಬೈದಿದ್ದೆ. ಆಗ ‘ನೀವು ಹಲವರಿಗೆ ಸಹಾಯ ಮಾಡಿದ್ದೀರಾ. ಇದು ಐಪಿಎಸ್ ಅಧಿಕಾರಿಗಳಿಗೆ ಸೇರಿದ ಹಣ. ಬದಲಾಯಿಸಿಕೊಡದಿದ್ದರೆ ನಿಮಗೆ ತೊಂದರೆ ಕೊಡುತ್ತಾರೆ’ ಎಂದು ಹೆದರಿಸಿದರು. ನಾನು ಒಪ್ಪದಿದ್ದಾಗ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಮಂಜುನಾಥ್ ಅವರೆಲ್ಲ ಒಟ್ಟಿಗೆ ಸೇರಿದ್ದಾರೆ. ಅವರ ಹಣವೂ ಇದೆ’ ಎಂದರು. ಆದರೂ, ನಾನು ಹತ್ತಿರ ಸೇರಿಸಲಿಲ್ಲ.’</p><p>‘ಇದಾದ ಮೇಲೆ ಏ.7ರಂದು ಉಮೇಶ್ ನಾನು ಸುಲಿಗೆ ಮಾಡಿದ್ದೇನೆ ಎಂದು ಆರೋಪಿಸಿ ಹೆಣ್ಣೂರು ಠಾಣೆಗೆ ದೂರು ಕೊಟ್ಟಿದ್ದಾನೆ. ಆ ದಿನ ನಾನು ಎಲ್ಲಿದ್ದೆ ಎಂಬುದನ್ನೂ ನೋಡದೆ, ಆ ಕಚಡ ಇನ್‌ಸ್ಟೆಕ್ಟರ್ ಶ್ರೀನಿವಾಸ್ ಪ್ರಕರಣ ದಾಖಲಿಸಿಕೊಂಡಿದ್ದಾನೆ. ನಾನಿರೋದು ಶ್ರೀರಾಂಪುರದಲ್ಲಿ. ಅಲ್ಲೇ ಕೇಸ್ ಫೈಲ್ ಮಾಡಬೇಕಿತ್ತು. ಹೆಂಗೋ ಕಾಸು ದುಡಿಯಬೇಕೆಂದರೆ ಬೇಕಾದಷ್ಟು ದಾರಿಗಳಿವೆ. ಹಣಕ್ಕೋಸ್ಕರ ಸುಳ್ಳು ಪ್ರಕರಣ ದಾಖಲಿಸಿದರೆ ಮರ್ಯಾದೆ ಉಳಿಯುತ್ತಾ?’</p><p>‘ಇದೇ ಥರ ಸಿಎಂ ಪಿಎ ಮಂಜುನಾಥ್, ತನ್ನ ಬಳಿ ಸಾವಿರಾರರು ಕೋಟಿ ಇಟ್ಟುಕೊಂಡು ಹಣ ಬದಲಾವಣೆಗೆ ಅಲ್ಲಲ್ಲಿ ಬ್ರೋಕರ್‌ಗಳನ್ನು ಕಳುಹಿಸುತ್ತಿದ್ದಾನೆ. ಇವನಿಗೆ ಐದು ಜನ ಬ್ರೋಕರ್‌ಗಳು, ಇಬ್ಬರು ಡಿಸಿಪಿಗಳು ಸೇರಿ ಮೂವರು ಐಪಿಎಸ್‌ಗಳು ಇದ್ದಾರೆ. ಅವರ ಹೆಸರುಗಳನ್ನು ಹೇಳಿದರೆ, ಸುಮ್ಮನೆ ಸುಟ್ಟು ಸಾಯಿಸಿಬಿಡುತ್ತಾರೆ’ ಎಂದು ನಾಗ ಹೇಳಿದ್ದಾನೆ.</p><p><strong>ಬಂದಿದ್ದು ಎನ್‌ಕೌಂಟರ್‌ಗೆ: </strong>‘ಆ ದಿನ ಪೊಲೀಸರು ಬಂದಿದ್ದು ಮನೆ ಪರಿಶೀಲನೆಗೆ ಅಲ್ಲ. ನನ್ನನ್ನು ಎನ್‌ಕೌಂಟರ್ ಮಾಡುವುದಕ್ಕೆ. ಅವರು ಒಂದು ನಕಲಿ ಗನ್ ತೆಗೆದುಕೊಂಡು ಬಂದಿದ್ದರು. ನಾನು ಬಾಗಿಲು ತೆಗೆದ ಕೂಡಲೇ ಅದನ್ನು ಬಿಸಾಕುವುದು. ಅಯ್ಯೋ ನಮ್ಮನ್ನು ಸುಡೋಕೆ ಬಂದ ಅಂಥ ಎನ್‌ಕೌಂಟರ್ ಮಾಡಿಬಿಡೋದು ಅವರ ಉಪಾಯವಾಗಿತ್ತು. ಈ ಪೊಲೀಸ್ ಬುದ್ಧಿ ನನಗೂ ಚೆನ್ನಾಗಿ ಗೊತ್ತು.’</p><p>‘2018ಕ್ಕೆ ಚುನಾವಣೆ ಬರುತ್ತೆ. ನಾಗರಾಜ್ ಬಳಿ ಹೆಚ್ಚು ಹಣ ಇದೆ. ಹೀಗಾಗಿ, ಆತ ಚುನಾವಣೆಯಲ್ಲಿ ನಿಲ್ಲಬಾರದು. ಬೆಂಗಳೂರಿನ ಹೃದಯ ಭಾಗವಾದ ಗಾಂಧಿನಗರದಿಂದ ಆತ ಸ್ಪರ್ಧಿಸಬಾರದು. ಇಂಥ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅಷ್ಟು ಜನ ಡಿಸಿಪಿಗಳು, ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ. ದೇವರ ದಯೆಯಿಂದ ಆ ದಿನ ನಾನು ಆಚೆ ಬಂದಿದ್ದೆ. ಇಲ್ಲವೆಂದಿದ್ದರೆ ಎನ್‌ಕೌಂಟರ್ ಆಗುತ್ತಿದ್ದೆ.’</p><p>‘ನಮ್ಮ ಟ್ರಸ್ಟ್ ಕಚೇರಿಗೆ ಯಾವಾಗಲೂ ಬೀಗ ಹಾಕುವುದಿಲ್ಲ. ಪೊಲೀಸರೇ ಅಲ್ಲಿ ಹಳೇ ನೋಟುಗಳನ್ನು ಇಟ್ಟು, ನಂತರ ಅವರೇ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ನಂತರ ಅವರ ನೋಟುಗಳ ಜತೆಗೆ, ಅಲ್ಲಿದ್ದ ನನ್ನ ಹೊಸ ನೋಟುಗಳನ್ನೂ ಬಾಚಿಕೊಂಡು ಹೋಗಿದ್ದಾರೆ.’</p><p>‘ಈ ಕಿಶೋರ್‌ ಮೂವರು ಐಪಿಎಸ್ ಅಧಿಕಾರಿಗಳ ಚೇಲಾ. ದಂಧೆಗಾಗಿಯೇ ಉಮೇಶ್‌ನನ್ನು ₹ 10 ಕೋಟಿ ಕೊಟ್ಟು ಕರೆಸಿಕೊಂಡಿದ್ದರು. ಆದರೆ, ಸಿಸಿಬಿಯವರು ಆತನನ್ನು ಬಂಧಿಸಿ ಹಣ ಜಪ್ತಿ ಮಾಡಿದರು. ಕೊನೆಗೆ ಅದು ಸಚಿವರೊಬ್ಬರ ಅಳಿಯನಿಗೆ ಸೇರಿದ್ದು ಎಂದು ನಾಟಕ ಮಾಡಿಬಿಟ್ಟರು. ಆದರೆ, ಅದು ಐಪಿಎಸ್ ಅಧಿಕಾರಿಗಳಿಗೇ ಸೇರಿದ್ದು.’</p><p>‘ನಾನು ಆ ದಿನ ಹೆಣ್ಣೂರಿಗೆ ಬಂದಿದ್ದೆನಾ ಅನ್ನೋದರ ಬಗ್ಗೆ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ವಿಚಾರಣೆ ಮಾಡಬೇಕಿತ್ತು. ಅಲ್ಲಿಗೆ ಬಂದಿದ್ರೆ ಈಗಲೂ ಗನ್ ತಗೊಂಡು ಸುಟ್ಟು ಬಿಡೋ ಶ್ರೀನಿವಾಸ್.  ನೀವು ದಂಧೆಯ ನಿಜವಾದ ಏಜೆಂಟ್‌ಗಳು. ಸಿಎಂ ಪಿಎ ಕಾಸು ಮಾಡಿಕೊಂಡಿದ್ದಾನೆ. ನೀವು ಆತನ ಹಣ ಬದಲಾಯಿಸಲು ಪರದಾಡುತ್ತಿದ್ದೀರಿ. ಈ ಐದು ಜನ ಬ್ರೋಕರ್‌ಗಳನ್ನು ಫೆ.17ರಿಂದ ಏ.6ರ ಮಧ್ಯೆ ಹತ್ತು ಸಲ ನನ್ನ ಮನೆಗೆ ಕಳುಹಿಸಿಕೊಟ್ಟಿದ್ದೀರಾ’ ಎಂದು ಬಾಂಬ್‌ ನಾಗ ಆಕ್ರೋಶ ವ್ಯಕ್ತಪಡಿಸಿದ್ದಾನೆ.</p><p><strong>₹ 2 ಕೋಟಿಯ ಪುಸ್ತಕ ಹಂಚುತ್ತಿದ್ದೆ: </strong>‘ನನ್ನ ಶೋಕಿ ಅಂದರೆ ಧರ್ಮ ಮಾಡೋದು. 1991ರಿಂದ ಧರ್ಮ ಮಾಡ್ತಿದೀನಿ. ದಿನಕ್ಕೆ ₹ 15–20 ಲಕ್ಷ ವರಮಾನ ಬರುತ್ತಿತ್ತು. ಅದನ್ನೆಲ್ಲ ಬಡವರಿಗೆ ದಾನ ಮಾಡಿದ್ದೇನೆ. 1991 ರಿಂದ 2013ರವರೆಗೂ ಪ್ರತಿ ವರ್ಷ ₹ 2 ಕೋಟಿ ಖರ್ಚು ಮಾಡಿ 50 ಸಾವಿರ ಮಕ್ಕಳಿಗೆ ಪುಸ್ತಕಗಳನ್ನು ಹಂಚಿದ್ದೇನೆ. ಇಂಥ ಬೇಕಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ.’</p><p>‘ಇದನ್ನು ಸಹಿಸದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಂಸದ ಪಿ.ಸಿ.ಮೋಹನ್‌ ಪಿತೂರಿ ನಡೆಸಿ ನನ್ನ ಮೇಲೆ ಎಂಟು ಸಲ ರೌಡಿ ಪಟ್ಟಿ ಹಾಕಿಸಿದರು. ಅಷ್ಟೂ ಸಲ ಹೈಕೋರ್ಟ್‌ಗೆ ಹೋಗಿ ನನ್ನ ಹೆಸರನ್ನು ತೆಗೆಸಿದೀನಿ.’</p><p>‘2013ರಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದೆ. ಇನ್ನೇನು ಮಕ್ಕಳಿಗೆ ಪುಸ್ತಕ ಕೊಡಬೇಕು ಎನ್ನುವಷ್ಟರಲ್ಲಿ ಗೂಂಡಾ ಕಾಯ್ದೆಯಡಿ ನನ್ನನ್ನು ಜೈಲಿಗೆ ಹಾಕಿಸಿದರು. ಒಬ್ಬ ತಮಿಳು ಭಾಷಿಕ ಇಷ್ಟೆಲ್ಲ ಮಾಡ್ತಿದ್ದಾನಲ್ಲಾ ಎಂದು ಅವರಿಗೆ ಹೊಟ್ಟೆಕಿಚ್ಚು. ಒಂದು ವೇಳೆ ಶಾಸಕನಾದರೆ, ನಮಗೆ ಉಳಿಗಾಲವಿಲ್ಲ ಎಂಬ ಹೆದರಿಕೆ ಅವರಿಗಿತ್ತು.’</p><p>‘ಇನ್‌ಸ್ಪೆಕ್ಟರ್ ಶ್ರೀನಿವಾಸ್ ನನ್ನ ಮೇಲೆ ಐಪಿಸಿ 364ಎ ಅಡಿ ಕೇಸ್ ಹಾಕಿದ್ದಾನೆ. ಯಾರನ್ನಯ್ಯಾ ನಾನು ಕಿಡ್ನಾಪ್ ಮಾಡಿದೆ? ಇವ್ನೇ ಸೃಷ್ಟಿ ಮಾಡಿದ ಕತೆ ಇದು. ಇದಕ್ಕೆ ಹೆಡ್‌ ಆಫ್‌ ದಿ ಬಾಸ್ ಸಿಎಂ ಪಿಎ ಮಂಜುನಾಥ್. ಆತನ ನಿಯಂತ್ರಣದಲ್ಲಿ ಪೊಲೀಸರಿದ್ದಾರೆ. ಕೊಳ್ಳೆ ಹೊಡೆದು ಶೇಷಾದ್ರಿಪುರ ಹಾಗೂ ಕಿನೋ ಚಿತ್ರಮಂದಿರದ ಬಳಿ ಮನೆಗಳನ್ನು ಕಟ್ಟಿಸಿಕೊಂಡಿದ್ದಾನೆ.’</p><p><strong>ಸಿಬಿಐ ತನಿಖೆಗೆ ಕೊಡಲಿ:</strong> ‘ಐಪಿಎಸ್ ಅಧಿಕಾರಿಗಳು ಹಿಂಗೇ ನನ್ನನ್ನು ಕೆಣಕುತ್ತಿರಲಿ. ಅವರ ಹೆಸರುಗಳನ್ನು ಬಹಿರಂಗ ಮಾಡುತ್ತೇನೆ. ಈ ನನ್‌ ಮಕ್ಕಳನ್ನು ಸರಿಯಾಗಿ ತನಿಖೆಗೆ ಒಳಪಡಿಸಬೇಕು. ಹಗರಣದಲ್ಲಿ ಸಿಎಂ ಪಿಎ ಪಾತ್ರವೂ ಇರುವುದರಿಂದ ಪೊಲೀಸ್ ಕಮಿಷನರ್ ಕ್ರಮ ತೆಗೆದುಕೊಳ್ಳುವುದಿಲ್ಲ. ಈ ಕಾರಣದಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಆಗ ಮಾತ್ರ ಸತ್ಯಾಂಶ ಹೊರಬರುತ್ತದೆ. ಬೆಂಗಳೂರಿನಲ್ಲಿರುವ ಪೊಲೀಸರ ಪೈಕಿ ಶೇ 25ರಷ್ಟು ಸಿಬ್ಬಂದಿ ತಪ್ಪಿತಸ್ಥರು ಸಿಗುತ್ತಾರೆ.’</p><p>‘1991ರಿಂದ 2013ರ ಅವಧಿಯಲ್ಲಿ ರಾಜಕೀಯವಾಗಿ ತುಂಬ ಪ್ರಭಾವ ಹೊಂದಿದ್ದೆ. ಇದನ್ನು ಕೆಲ ರಾಜಕಾರಣಿಗಳು ಸಹಿಸಲಿಲ್ಲ. ನಾಲ್ಕು ಸಲ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋತೆ. ಆದರೆ, 2001ರ ಪಾಲಿಕೆ ಚುನಾವಣೆಯಲ್ಲಿ ಎದುರಾಳಿಗಿಂತಲೂ 18 ಸಾವಿರ ಹೆಚ್ಚು ಮತಗಳನ್ನು ಪಡೆದುಕೊಂಡೆ. ನನ್ನ ಹೆಂಡತಿ ಕೂಡ ಪಾಲಿಕೆ ಸದಸ್ಯೆಯಾದಳು.’</p><p>‘ 2018ಕ್ಕೆ ಚುನಾವಣೆ ಇದೆ. ಅದಕ್ಕೆ ಇವಾಗಿನಿಂದಲೇ ಗೂಬೆ ಕೂರಿಸುತ್ತಿದ್ದಾರೆ. ನನ್ನ ಕ್ಷೇತ್ರದಲ್ಲೇ ನನ್ನನ್ನು ಸಾಯಿಸೋಕೆ ಸಿಪಿ, ಡಿಸಿಪಿ, ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಹೊಟ್ಟೆ ಉರಿಯಿಂದ ಹೇಳ್ತಿದೀನಿ. ನಿಮ್ಮೆಲ್ಲರ ವಂಶ ನಾಶವಾಗುತ್ತೆ.</p><p>‘ಕಮಿಷನರ್ ಅವರೇ ದಯವಿಟ್ಟು ನೀವು ತಿಳ್ಕೋಳಿ. ಇವತ್ತು ಬೆಂಗಳೂರಲ್ಲಿ ₹ 5 ಸಾವಿರ ಕೋಟಿ  ಮೊತ್ತದ ಹಳೇ ನೋಟುಗಳು ಓಡಾಡುತ್ತಿವೆ. ಇದು ಸಿಎಂ ಆಪ್ತ ಹಾಗೂ ಕೆಲ ಐಪಿಎಸ್ ಅಧಿಕಾರಿಗಳಿಗೆ ಸೇರಿದ್ದು. ಈ ವಿಷಯ ತಿಳಿದ ಮೇಲಾದರೂ ತನಿಖೆ ಪ್ರಾರಂಭಿಸಿ’ ಎಂದು ನಾಗ ಮನವಿ ಮಾಡಿದ್ದಾನೆ.</p><p><strong>ವೀರಪ್ಪನ್‌ ಕಾಡಿನಲ್ಲಿ ಹುಡುಕಾಡ್ತಿದೀರಾ?</strong><br/>&#13; ‘ನಾನು ಅಲ್ಲಿದೀನಿ, ಇಲ್ಲಿದೀನಿ ಅಂಥ ಸುಮ್ನೆ ಹುಡುಕಾಡ್ತಿದಿರಾ. ಪ್ರಯೋಜನ ಇಲ್ಲ. ಬೆಂಗಳೂರಿಲ್ಲೇ ಇದೀನಿ. ಓಡೋಗೋಕೆ ಹೇಡಿಯಲ್ಲ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದೇನೆ ಅಷ್ಟೆ. ಏನೇನು ಮಾಡ್ತಿದೀರಾ ಅನ್ನೋದನ್ನ ನೋಡ್ತಾನೆ ಇದ್ದೀನಿ’ ಎಂದು ನಾಗ ಪೊಲೀಸರಿಗೆ ವ್ಯಂಗ್ಯ ಮಾಡಿದ್ದಾನೆ.<br/>&#13; ‘ಸುಮ್ನೆ ಧರ್ಮಪುರಿಗೆ, ತೂತುಕುಡಿ, ವೀರಪ್ಪನ್‌ ಕಾಡಿನಲ್ಲಿ ಹುಡುಕಾಡ್ತಿದೀರಾ. ನಾನು ಸಚಿವ ಆಗುವವನು. ನನ್ನ ಹಿಂದೆ ಯಾಕೆ ಸುತ್ತುತ್ತಿದೀರಾ. ನಾಲ್ಕೈದು ದಿನದಲ್ಲಿ ಜಾಮೀನು ಆಗತ್ತೆ. ನಿಮ್ಮ ಪಕ್ಕದಲ್ಲೇ ಬಂದು ಕುತ್ಕೋತೀನಿ. ಅದೇನು ಮಾಡ್ಕೋತೀರಾ ಮಾಡ್ಕೋಳ್ಳಿ’ ಎಂದು ಸವಾಲು ಹಾಕಿದ್ದಾನೆ.<br/>&#13; * * *</p><p>ವಿಡಿಯೊದಲ್ಲಿ ಬಾಂಬ್‌ ನಾಗ ಮಾಡಿರುವ ಆರೋಪಗಳ ಕುರಿತು ಪೊಲೀಸರು ಸೂಕ್ತ ತನಿಖೆ ನಡೆಸಲಿದ್ದಾರೆ. ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ<br/>&#13; <em><strong>-ಜಿ.ಪರಮೇಶ್ವರ್, ಗೃಹ ಸಚಿವ</strong></em></p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT