ಗಂಗಾವತಿ: ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂಬ ಆರೋಪಿಸಿ ಶನಿವಾರ ಬಿಜೆಪಿ ಮುಖಂಡರು ಇಲ್ಲಿ ಸಚಿವರಪ್ರತಿಕೃತಿ ದಹಿಸಿದರು.ಮಾಜಿ ಸಂಸದ ಎಸ್. ಶಿವರಾಮಗೌಡ ಹಾಗೂ ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ‘ರಾಯರಡ್ಡಿ ಪ್ರಬುದ್ಧ ರಾಜಕಾರಣಿಗಳಲ್ಲಿ ಒಬ್ಬರು. ಆದರೆ ಯಾವ ಕಾರಣಕ್ಕೆ ನಾಲಿಗೆ ಹರಿಯ ಬಿಟ್ಟಿದ್ದಾರೆ ಎಂಬುವುದು ಗೊತ್ತಿಲ್ಲ. ಸಚಿವರು, ತಮ್ಮ ಸ್ಥಾನಮಾನದ ಘನತೆ, ಗೌರವ ಮರೆತು ಮಾತನಾಡಿದ್ದಾರೆ’ ಎಂದು ದೂರಿದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ‘ಈ ಸರ್ಕಾರ ಸಂವೇದನಶೀಲತೆ ಕಳೆದುಕೊಂಡಿದೆ. ಮುಖ್ಯಮಂತ್ರಿ ಆದಿಯಾಗಿ ಸಂಪುಟದ ಸಚಿವರು ಸಾರ್ವಜನಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು, ತಮ್ಮ ಕರ್ತವ್ಯಗಳೇನು ಎಂಬುದನ್ನು ಮರೆತಿದ್ದಾರೆ. ಪರಿಣಾಮ ಜನ ರಾಜಕಾರಣಿಗಳನ್ನು ಅಸಹ್ಯವಾಗಿ ನೋಡುವಂತಾಗುತ್ತಿದೆ’ ಎಂದರು.
ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್ ಸಿಂಗನಾಳ, ಹಿರಿಯ ಮುಖಂಡ ಎಚ್.ಎಂ. ತಿಪ್ಪೇರುದ್ರಸ್ವಾಮಿ, ಪ್ರಮುಖರಾದ ಎಸ್. ಶಿವರಾಜಗೌಡ, ಕೆ. ಅಂಬಣ್ಣ, ಶಿವು, ಶ್ರೀನಿವಾಸಧೂಳ, ಕಾಶಿನಾಥ ಚಿತ್ರಗಾರ, ಬಲ್ಕುಂದಿ ವೀರೇಶ, ಚಿದಾನಂದ ನಾಯಕ, ಸಂಗಯ್ಯಸ್ವಾಮಿ, ನವೀನ ಮಾಲಿಪಾಟೀಲ ಇದ್ದರು.