ಮಂಗಳೂರು: ಪ್ರಕಾಶ್ ಪೂಜಾರಿ ಎಂಬುವವರ ಕೊಲೆಯತ್ನ ಪ್ರಕರಣದಲ್ಲಿ ಬಂಧಿತನಾಗಿರುವ ಕಾಟಿಪಳ್ಳದ ಅಹಮ್ಮದ್ ಖುರೇಶಿ ಎಂಬಾತನ ಮೇಲೆ ನಗರ ಅಪರಾಧ ಪತ್ತೆದಳದ (ಸಿಸಿಬಿ) ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪದ ಕುರಿತು ಸಿಐಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಸಿಐಡಿ ಎಸ್ಪಿ ಸಿರಿಗೌರಿ ನೇತೃತ್ವದ ತಂಡಕ್ಕೆ ಪ್ರಕರಣದ ತನಿಖೆಯ ಹೊಣೆ ಒಪ್ಪಿಸಲಾಗಿದೆ.
ಶುಕ್ರವಾರ ನಗರಕ್ಕೆ ಬಂದಿರುವ ತನಿಖಾ ತಂಡ ಪಣಂಬೂರಿನ ಎನ್ಎಂಪಿಟಿ ಅತಿಥಿ ಗೃಹದಲ್ಲಿ ಕಚೇರಿ ತೆರೆದಿದೆ. ಖುರೇಶಿಯ ಅಣ್ಣ ನಿಶಾದ್ ಅವರನ್ನು ಶುಕ್ರವಾರ ಕಚೇರಿಸಿಕೊಂಡ ತಂಡ, ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ನಡೆಸಿದೆ. ಖುರೇಶಿ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪ ಮಾಡಿರುವ ಕೆಲ ಪ್ರಮುಖರನ್ನೂ ವಿಚಾರಣೆಗೆ ಹಾಜರಾಗುವಂತೆ ತನಿಖಾ ತಂಡ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ದೌರ್ಜನ್ಯ ನಡೆಸಿರುವ ಆರೋಪಕ್ಕೆ ಗುರಿಯಾಗಿರುವ ಸಿಸಿಬಿ ಇನ್ಸ್ಪೆಕ್ಟರ್ ಸುನೀಲ್ ವೈ. ನಾಯಕ್, ಸಬ್ ಇನ್ಸ್ಪೆಕ್ಟರ್ ಶ್ಯಾಮ್ಸುಂದರ್, ಅವರ ಜೊತೆಗಿದ್ದ ಸಿಬ್ಬಂದಿ ಮತ್ತು ನಗರ ಪೊಲೀಸ್ ಕಮಿಷನರೇಟ್ನ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳನ್ನೂ ವಿಚಾರಣೆ ನಡೆಸಲು ತನಿಖಾ ತಂಡ ಸಿದ್ಧತೆ ನಡೆಸಿದೆ.
ಖುರೇಶಿಯ ಬಂಧನ, ನ್ಯಾಯಾಲ ಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಆತ ನೀಡಿದ್ದ ಹೇಳಿಕೆ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ನಡೆದ ಬೆಳವಣಿಗೆಗಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ತನಿಖಾ ತಂಡ ಕಲೆ ಹಾಕುತ್ತಿದೆ.