ಸರ್ಕಾರಿ ಕಚೇರಿಯಲ್ಲಿ ಬಯೊಮೆಟ್ರಿಕ್ ವ್ಯವಸ್ಥೆ
ಲಖನೌ: ಸರ್ಕಾರಿ ನೌಕರರು ಸರಿಯಾದ ಸಮಯಕ್ಕೆ ಕಚೇರಿಗೆ ಬರುವುದನ್ನು ಖಾತರಿಪಡಿಸಲು ತಾಲ್ಲೂಕುಮಟ್ಟದ ವರೆಗಿನ ಎಲ್ಲ ಕಚೇರಿಗಳಲ್ಲಿ ಬಯೊಮೆಟ್ರಿಕ್ ವ್ಯವಸ್ಥೆ ಅಳವಡಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಸೂಚಿಸಿದ್ದಾರೆ.
ರೈಲು ಮಾಹಿತಿಗೆ ಒಂದೇ ಆ್ಯಪ್
ನವದೆಹಲಿ (ಪಿಟಿಐ): ರೈಲು ಪ್ರಯಾಣಕ್ಕೆ ಸಂಬಂಧಿಸಿ ಯಾವುದೇ ಪ್ರಶ್ನೆಗೆ ಉತ್ತರಿಸುವ ಆ್ಯಪ್ವೊಂದನ್ನು ಜೂನ್ನಿಂದ ಆರಂಭಿಸಲಾಗುವುದು. ಈಗ ಇರುವ ಎಲ್ಲ ಆ್ಯಪ್ಗಳ ಸೇವೆಗಳನ್ನೂ ಇದಕ್ಕೆ ಸೇರಿಸಲಾಗುವುದು. ಹಿಂದ್ರೈಲ್ ಎಂದು ಇದಕ್ಕೆ ಹೆಸರು ಇರಿಸುವ ಸಾಧ್ಯತೆ ಇದೆ. ಆದರೆ ಅದು ಅಂತಿಮ ಆಗಿಲ್ಲ.
ಈ ಆ್ಯಪ್ ರೈಲ್ವೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ವ್ಯವಸ್ಥೆಯಂತೆ ಕಾರ್ಯನಿರ್ವಹಿಸಲಿದೆ. ರೈಲು ಬರುವ, ಹೋಗುವ ಮಾಹಿತಿ, ವಿಳಂಬ, ರದ್ದತಿಯ ವಿವರ, ಪ್ಲಾಟ್ಫಾರ್ಮ್ ಸಂಖ್ಯೆ, ಸೀಟು ಲಭ್ಯತೆ ಮಾಹಿತಿಗಳೆಲ್ಲವೂ ಇದರಲ್ಲಿ ದೊರೆಯಲಿದೆ.
ಇದಲ್ಲದೆ, ಟ್ಯಾಕ್ಸಿ ಕಾದಿರಿಸುವಿಕೆ, ಕೂಲಿ ಸೇವೆ, ವಿಶ್ರಾಂತಿ ಮತ್ತು ಹೋಟೆಲ್ ಕೊಠಡಿ ಕಾದಿರಿಸುವಿಕೆ, ಪ್ರವಾಸ ಪ್ಯಾಕೇಜ್, ಕೇಟರಿಂಗ್ ಸೇವೆಗಳೂ ಈ ಆ್ಯಪ್ನಲ್ಲಿ ಲಭ್ಯ ಇರುತ್ತವೆ.
16.15 ಲಕ್ಷ ವಿವಿಪಿಎಟಿ ಖರೀದಿಗೆ ಕ್ರಮ
ನವದೆಹಲಿ (ಪಿಟಿಐ): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಮತದಾನ ದೃಢೀಕರಣ ರಸೀದಿ ಉಪಕರಣ (ವಿವಿಪಿಎಟಿ) ಬಳಸಲು ಪಣತೊಟ್ಟಿರುವ ಚುನಾವಣಾ ಆಯೋಗವು, ‘2018ರ ಸೆಪ್ಟೆಂಬರ್ ಅಂತ್ಯಕ್ಕೆ 16.15 ಲಕ್ಷ ವಿವಿಪಿಎಟಿಗಳನ್ನು ಕೊಳ್ಳಲಾಗುವುದು’ ಎಂದು ತಯಾರಕರಿಗೆ ಪತ್ರ ಬರೆದಿದೆ.
ಅಗತ್ಯವಿರುವಷ್ಟು ವಿವಿಪಿಎಟಿಗಳನ್ನು ಖರೀದಿಸಲು ₹ 3,174 ಕೋಟಿ ಹಣ ನೀಡಲು ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದ ಮೂರು ದಿನದಲ್ಲೇ ಆಯೋಗವು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ಗಳಿಗೆ ಪತ್ರ ಬರೆದಿದೆ.