ಕೈರೊ: ಭಾರತದ 16 ವರ್ಷದ ಒಳಗಿನವರ ಫುಟ್ಬಾಲ್ ತಂಡ ಈಜಿಪ್ಟ್ ಜತೆಗಿನ ಸೌಹಾರ್ದ ಪಂದ್ಯದಲ್ಲಿ ಭಾನುವಾರ 2–1 ಗೋಲುಗಳಲ್ಲಿ ಸ್ಥಳೀಯ ತಂಡ ಅಲ್ ಅಹಲಿ ಎದುರು ಗೆಲುವು ದಾಖಲಿಸಿದೆ.
ಭಾರತ ತಂಡದ ರೋಹಿತ್ ದನು ಹಾಗೂ ಎನಮ್ ಜೆರ್ಮ್ ಅವರು ತಲಾ ಒಂದು ಗೋಲು ಗಳಿಸಿ ಗೆಲುವಿಗೆ ಕಾರಣರಾದರು. ಅಲ್ ಅಹಲಿ ತಂಡದ ಅಲಿ ಅಮೀರ್ ಒಂದು ಗೋಲುಗಳಿಸಿದರಾದರೂ ತಂಡದ ಸೋಲು ತಪ್ಪಿಸಲು ಅವರಿಗೆ ಸಾಧ್ಯವಾಗಲಿಲ್ಲ.
‘ಭಾರತ ತಂಡ ಈ ಪಂದ್ಯದಲ್ಲಿ ಗೆಲುವು ಪಡೆದು ಸಾಕಷ್ಟು ಹೊಸ ವಿಷಯಗಳನ್ನು ಕಲಿತುಕೊಂಡಿತು. ಎರಡೂ ತಂಡಗಳಿಗೂ ನೂತನ ಅನುಭವಗಳನ್ನು ನೀಡಿತು. ನಮ್ಮ ತಂಡ ಆಡಿದ ರೀತಿಗೆ ಸಂತೋಷವಾಗಿದೆ’ ಎಂದು ಭಾರತ ತಂಡದ ಮುಖ್ಯ ಕೋಚ್ ಬಿಬಿಯಾನೊ ಫರ್ನಾಂಡಿಸ್ ಹೇಳಿದ್ದಾರೆ.
‘ತಂಡದ ಮೊದಲ ಗೋಲು ದಾಖಲಿಸಲು ಸಾಧ್ಯವಾಗಿದ್ದಕ್ಕೆ ಸಂತೋಷವಾಗಿದೆ. ಈ ಪಂದ್ಯದಿಂದ ಸಾಕಷ್ಟು ಕಲಿಯಲು ಸಾಧ್ಯವಾಯಿತು’ ಎಂದು ರೋಹಿತ್ ದನು ಹೇಳಿದ್ದಾರೆ.
ನೇಪಾಳದಲ್ಲಿ ನಡೆಯಲಿರುವ 16 ವರ್ಷದ ಒಳಗಿನವರ ಎಎಫ್ಸಿ ಕಪ್ನಲ್ಲಿ ಆಡಲು ಭಾರತ ತಂಡದ ಆಟಗಾರರು ತರಬೇತಿ ಪಡೆಯುತ್ತಿದ್ದಾರೆ. ಈ ಸರಣಿಯ ಮುಂದಿನ ಪಂದ್ಯದಲ್ಲಿ ಭಾರತ ತಂಡ ಅಲೆಕ್ಸಾಂಡ್ರಿಯಾದಲ್ಲಿ ಸೆಮೋಹಾ ವಿರುದ್ಧ ಆಡಲಿದೆ.