ಬೆಂಗಳೂರು: ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಬಿಜೆಪಿ ಪರಿಶಿಷ್ಟ ಜಾತಿ/ ವರ್ಗ ಮೋರ್ಚಾ ಇಂದಿರಾ ಕಾಲೊನಿಯಲ್ಲಿ ಶುದ್ಧ
ಕುಡಿಯುವ ನೀರಿನ ಘಟಕ ಪ್ರಾರಂಭಿಸಿದೆ.
ಅಂಬೇಡ್ಕರ್ ಅವರ 126ನೇ ಜನ್ಮ ದಿನದ ಪ್ರಯುಕ್ತ ಜಯನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಘಟಕವನ್ನು ಉದ್ಘಾಟಿಸಿದರು.
ಈ ಘಟಕದಲ್ಲಿ ಒಬ್ಬ ವ್ಯಕ್ತಿಗೆ ದಿನಕ್ಕೆ ₹5ಕ್ಕೆ 25 ಲೀಟರ್ ನೀರು ಪೂರೈಕೆ ಮಾಡಲಾಗುತ್ತದೆ.
ರಕ್ತದಾನ ಶಿಬಿರ: ರಾಷ್ಟ್ರೋತ್ಥಾನ ಪರಿಷತ್ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 250 ಮಂದಿ ರಕ್ತದಾನ ಮಾಡಿದರು. ಜಯನಗರ ಭಾಗದಲ್ಲಿ ಯಾರಿಗಾದರೂ ರಕ್ತದ ಅಗತ್ಯವಿದ್ದರೆ, ಬಿಜೆಪಿ ಕಚೇರಿಯನ್ನು ಸಂಪರ್ಕಿಸಿ ಉಚಿತವಾಗಿ ರಕ್ತ ಪಡೆಯಬಹುದು ಎಂದು ಸಂಘಟಕರು ತಿಳಿಸಿದರು.
ತಾರಸಿ ತೋಟ ಬೆಳೆಸಿ: ‘ಹವಾನಿಯಂತ್ರಣ ವ್ಯವಸ್ಥೆಗಿಂತ ಕಡಿಮೆ ವೆಚ್ಚದಲ್ಲಿ ತಾರಸಿ ತೋಟ ಮಾಡಬಹುದು. ಎಲ್ಲರೂ ಮನೆಗಳಲ್ಲಿ ತೋಟ ಬೆಳೆಸಿ ನಗರದ ತಾಪಮಾನ ಕಡಿಮೆ ಮಾಡಲು ಸಹಕರಿಸಬೇಕು’ ಎಂದು ಅನಂತ್ ಕುಮಾರ್ ಕೋರಿದರು.
‘ಡಿಜಿಟಲ್ ವ್ಯವಹಾರಕ್ಕೆ ನೆರವಾಗುವ ಭೀಮ್ (BHIM) ಆ್ಯಪ್ ಅನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಅದನ್ನು ಜನಪ್ರಿಯಗೊಳಿಸಬೇಕು.
ಆ ಮೂಲಕ ಅಂಬೇಡ್ಕರ್ ಜಯಂತಿ ಆಚರಿಸಬೇಕು’ ಎಂದರು.