ಮುದ್ದೇಬಿಹಾಳ: ಮನೆ, ಅಂಗಡಿ ಇತರೆ ಸ್ಥಳಗಳಲ್ಲಿ ಅಗ್ನಿ ಸೇರಿದಂತೆ ಯಾವುದೇ ಅವಘಡ ಸಂಭವಿಸುವುದಕ್ಕೆ ಅನೇಕ ಸಾರಿ ನಿರ್ಲಕ್ಷ್ಯತೆ ಕಾರಣವಾಗಿರುತ್ತದೆ. ಸಾರ್ವಜನಿಕರು ಇಂತಹ ಅವಘಡ ತಪ್ಪಿಸಲು ಮುಂಜಾಗ್ರತೆ ವಹಿಸುವುದು ಅವಶ್ಯ ಎಂದು ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರಾಜೇಂದ್ರ ಪೋದ್ದಾರ ಹೇಳಿದರು.
ಅವರು ತಾಲ್ಲೂಕಿನ ತಂಗಡಗಿ ಗ್ರಾಮ ದಲ್ಲಿ ಅಗ್ನಿಶಾಮಕ ಹುತಾತ್ಮದ ದಿನಾಚರಣೆ ನಿಮಿತ್ತ ಅಗ್ನಿಶಾಮಕ ಸೇವಾ ಸಪ್ತಾಹ ಅಡಿ ಅಗ್ನಿ ಸೇರಿದಂತೆ 9 ಬಗೆಯ ಅವಘಡ ನಿರ್ವಹಣೆ ಪ್ರಾತ್ಯಕ್ಷಿಕೆ ನೀಡಿದ ನಂತರ ನಡೆದ ಸನ್ಮಾನ ಸಭೆಯಲ್ಲಿ ಮಾತನಾಡಿದರು.
ಅವಘಡ ಸಂಭವಿಸಿದ ತುರ್ತು ಸ್ಥಿತಿಯಲ್ಲಿ ಮನುಷ್ಯ ಏನು ಮಾಡಬೇಕು ಎನ್ನುವುದನ್ನು ಅರಿತಿರಬೇಕು. ಇದಕ್ಕಾಗಿ ಪ್ರಥಮ ಚಿಕಿತ್ಸೆ ಮಾಹಿತಿ ಹೊಂದಿರ ಬೇಕು. ಅಡುಗೆ ಮನೆಯ ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಕಾಳಜಿ ವಹಿಸಬೇಕು. ಆದಷ್ಟು ಆಕಸ್ಮಿಕ ದುರಂತ ಸಂಭವಿಸಿದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಪ್ರಾತ್ಯಕ್ಷಿಕೆ ನಂತರ ರಾಜೇಂದ್ರ ಅವರನ್ನು ಗ್ರಾಮಸ್ಥರು ಮತ್ತು ಸ್ನೇಹಸಿರಿ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಶೈಲ ಮರೋಳ, ಮುತ್ತು ನಿಡಗುಂದಿ, ಅಗ್ನಿಶಾಮಕ ಸಿಬ್ಬಂದಿ ಜಟ್ಟೆಪ್ಪ ಮುರಾಳ, ತಾಂತ್ರಿಕ ಚಾಲಕ ಎಚ್.ಎಸ್.ಬುರನ ಗೋಳ, ಅಗ್ನಿಶಾಮಕ ಚಾಲಕ ಲಿಂಗಪ್ಪ ಲಮಾಣಿ, ಅಗ್ನಿಶಾಮಕರಾದ ಈರಣ್ಣ ಉಂಡಿ, ಮಹೇಶ ಕರಡ್ಡಿ, ಜಾವೀದ ಜಮಖಂಡಿ, ತೌರು ರಾಠೋಡ, ಎಂ.ವೈ.ಗೌಡರ, ಗ್ರಾಮಸ್ಥರು ಇದ್ದರು.