ಚಿಕ್ಕಬಳ್ಳಾಪುರ: ‘ಕುರುಬ ಸಮುದಾಯದವರು ಮಕ್ಕಳ ವಿದ್ಯಾರ್ಜನೆಗೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಸಂಘಟಿತರಾಗಿ ಸಹಕಾರ ಕ್ಷೇತ್ರದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಹೇಳಿದರು.
ನಗರದ ಗಂಗಮ್ಮನ ಗುಡಿ ರಸ್ತೆಯಲ್ಲಿರುವ ಕನಕದಾಸರ ಭಜನೆ ಮಂದಿರ ನಿವೇಶನದಲ್ಲಿ ಭಾನುವಾರ ಕುರುಬ ಏಜುಕೇಷನ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ಕನಕದಾಸರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕುರುಬ ಸಮುದಾಯ ಕೆಲ ದಶಕಗಳ ಹಿಂದೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತುಂಬಾ ಹಿಂದೆ ಉಳಿದಿತ್ತು. ಬದಲಾದ ಸನ್ನಿವೇಶದಲ್ಲಿ ಇವತ್ತು ರಾಜ್ಯಕ್ಕೆ ಸಿದ್ದರಾಮ್ಯಯ ಅವರಂತಹ ನಾಯಕನನ್ನು ಈ ಸಮುದಾಯ ನೀಡಿದೆ. ಅವರು ಎಲ್ಲ ವರ್ಗಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.
‘ಕುರುಬ ಸಮುದಾಯದವರು ಮೊದಲಿನಿಂದಲೂ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ. ಹೀಗಾಗಿ ಜನಾಂಗದವರು ಸಹಕಾರ ಸಂಘಗಳನ್ನು ಆರಂಭಿಸಲು ಆದ್ಯತೆ ನೀಡಬೇಕು. ಶೀಘ್ರದಲ್ಲಿಯೇ ಕನಕ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಆರಂಭಿಸಬೇಕು. ಅದಕ್ಕೆ ಬೇಕಾದ ಸಹಕಾರವನ್ನು ನಾನು ನೀಡುತ್ತೇನೆ’ ಎಂದರು.
ಕುರುಬ ಸಮುದಾಯದ ಮುಖಂಡರಾದ ಚಿಕ್ಕಸುಬ್ಬಣ್ಣ, ಜಿ.ಎಂ.ಕೃಷ್ಣಪ್ಪ ಅವರೊಂದಿಗೆ ಎಚ್.ಎಂ.ರೇವಣ್ಣ, ಕುರುಬ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎ.ನಾಗರಾಜ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.