ಹುಣಸಗಿ: ನಾರಾಯಣಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ರಾಜನ ಕೋಳೂರ ತಾಂಡಾ ಜನರು ಕುಡಿಯುವ ನೀರು, ಶೌಚಾಲಯ ಸೇರಿದಂತೆ ಹಲವಾರು ಸಮಸ್ಯೆಗಳಿಂದ ತೊಂದರೆ ಪಡುವಂತಾಗಿದೆ.
ರಾಜನಕೋಳೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. ತಾಂಡಾ ದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಆದರೆ, ಬೇಸಿಗೆ ಬಂದರೆ ತಾಂಡಾ ಜನತೆಗೆ ಕುಡಿಯುವ ನೀರಿನದ್ದೇ ಚಿಂತೆ. ನಿತ್ಯ ಸರದಿಯಲ್ಲಿ ನಿಂತು ನೀರು ಪಡೆಯು ವಂತಾಗಿದೆ ಎಂದು ತಾಂಡಾದ ಶಾಂತಾ ಬಾಯಿ ಚವ್ವಾಣ, ಅನಸುಬಾಯಿ ಶಾಂತಿ ಲಾಲ್ ಹೇಳುತ್ತಾರೆ.
‘ಮಳೆಗಾಲದಲ್ಲಿ ತಾಂಡಾ ಹೊರ ವಲಯದಲ್ಲಿನ ಕೊಳವೆಬಾಯಿಂದ ಪೈಪ್ಲೈನ್ ವ್ಯವಸ್ಥೆಯ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಡಿಸೆಂಬರ್ನಿಂದ ಜೂನ್ ತಿಂಗಳ ವರೆಗೂ ಆ ಕೊಳವೆಬಾವಿ ಬತ್ತಿದ್ದರಿಂದ ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ’ ಎಂದು ತಾಂಡಾದ ನಿವಾಸಿಗಳಾದ ವೆಂಕಟೇಶ ಪವಾರ, ಲಾಲು ನಾಯಕ ಹೇಳಿದರು.
ತಾಂಡಾದಲ್ಲಿ ಒಂದು ಬಾವಿ ಇದೆ. ಅದರಲ್ಲಿ ನೀರು ತಳ ಕಂಡಿದೆ. ಏಕೈಕ ಕೊಳವೆಬಾವಿಯೇ ಈ ತಾಂಡಾಕ್ಕೆ ಆಸರೆಯಾಗಿದೆ.
ಹಣ ಖರ್ಚಾದರೂ ನೀರಿಲ್ಲ: ರಾಜನ ಕೋಳೂರ ತಾಂಡಾಕ್ಕೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಎರಡು ವರ್ಷದ ಹಿಂದೆ ₹20 ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿ ಟೆಂಡರ್ ಕರೆದಿತ್ತು. ತಾಂಡಾ ಹೊರವಲಯದಲ್ಲಿ ಕುಡಿ ಯುವ ನೀರಿನ ಟ್ಯಾಂಕ್ ನಿರ್ಮಿ ಸಲಾಗಿದೆ. ವಿದ್ಯುತ್ ಸಂಪರ್ಕಕ್ಕಾಗಿ ಟಿ.ಸಿ ಅಳವಡಿಸಲಾಗಿದೆ. ಆದರೆ, ಕೊಳವೆ ಬಾವಿ ಸಂಪರ್ಕ ಕಲ್ಪಿಸುವುದು ಮಾತ್ರ ಬಾಕಿ ಉಳಿದಿದೆ.
‘ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಯಿಸಿದರೂ ನೀರು ಲಭ್ಯ ವಾಗಿಲ್ಲ. ಇದರಿಂದಾಗಿ ಕಾಮಗಾರಿ ಪೂರ್ಣಗೊಳ್ಳದೆ ನೀರು ಪಡೆಯಲು ಸಾಧ್ಯವಾಗಿಲ್ಲ’ ಎಂದು ಶಾಂತಿಲಾಲ ನಾರಾಯಣ, ತಿರುಪತಿ, ನಾಗೇಶ ಪವಾರ್ ದೂರಿದರು.
ಮನೆ ಹಂಚಿಕೆಯಲ್ಲೂ ಅನ್ಯಾಯ: ‘ಅರ್ಹರಿಗೆ ಮನೆ ನೀಡಲಿ. ಆದರೆ, ಒಂದೇ ಕುಟುಂಬಕ್ಕೆ ಎರಡು ಮೂರು ಮನೆ ಹಂಚಿಕೆ ಮಾಡಲಾಗಿದೆ. ವಿವಿಧ ವಸತಿ ಯೋಜನೆಯಡಿ ಮನೆ ಹಂಚಿಕೆ ಯಲ್ಲಿಯೂ ಅನ್ಯಾಯವಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿಗೆ ದೂರು ಸಲ್ಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನಿಸಬೇಕು’ ಎಂದು ಜನರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.