ತಿ.ನರಸೀಪುರ: ಸ್ನಾತಕೋತ್ತರ ಪದವಿಯ ನಂತರ ಸಂಶೋಧನೆ ಮಾಡ ಬಯಸುವ ವಿದ್ಯಾರ್ಥಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚಿನ ಸಹಾಯಧನ ನೀಡುತ್ತಿದ್ದು, ಅದರ ಪ್ರಯೋಜನ ಪಡೆದು ಸಂಶೋಧನೆ ಕೈಗೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ. ದಯಾನಂದ ಮಾನೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ 2016–17ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಸಂಶೋಧನೆಗೆ ಯಾವುದೇ ಸಹಾಯ ಸಿಗುತ್ತಿರಲಿಲ್ಲ. ಇಚ್ಛೆಪಟ್ಟು ಸಂಶೋಧನೆಗೆ ಹೋಗಿ ಪರಿಶ್ರಮದಿಂದ ಸಾಧಿಸಬೇಕಿತ್ತು. ಆದರೆ ಈಗ ರಾಜ್ಯ ಸರ್ಕಾರ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾಸಿಕ ₹30 ಸಾವಿರ ಸಹಾಯಧನ ನೀಡುತ್ತಿದೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮೋದಿಯವರು ಪ್ರಧಾನಮಂತ್ರಿ ವಿದ್ಯಾರ್ಥಿ ವೇತನವನ್ನು ₹1 ಲಕ್ಷ ನೀಡಲು ನಿರ್ಧರಿಸಿದ್ದು, ಇನ್ನು ಎರಡು ತಿಂಗಳಲ್ಲಿ ಆದೇಶ ಹೊರ ಬೀಳುವ ಸಾಧ್ಯತೆ ಇದೆ. ಇಂತಹ ಸಹಾಯಧನವನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಹೊಂದುವತ್ತ ವಿದ್ಯಾರ್ಥಿಗಳು ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು’.
ಮೈಸೂರು ವಿವಿ ತನ್ನದೇ ಆದ ಕೀರ್ತಿಯನ್ನು ಕಾಪಾಡಿಕೊಂಡು ಬಂದಿದ್ದು, ದೇಶದಲ್ಲಿ 36ನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಈಗ1200 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲ ಸಂಶೋಧನೆ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈಗ ನಗರ ಪ್ರದೇಶಗಳಿಗಿಂತ ಮುನ್ನಡೆ ಸಾಧಿಸಿದ್ದು, ಈ ಕಾಲೇಜಿನ ವಿದ್ಯಾರ್ಥಿಗಳು ಕೆಲ ವಿಷಯಗಳಲ್ಲಿ ಶೇ 100ರಷ್ಟು ಅಂಕ ಪಡೆದು ಸಾಧಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ನಾಗರತ್ನಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭಾಧ್ಯಕ್ಷೆ ಸುಧಾ ಗುರುಮಲ್ಲಪ್ಪ, ಬೆಂಗಳೂರಿನ ಕೇಂದ್ರಿಯ ಗೃಹ ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಎಸ್. ಸುಮಾ, ಅಂತರರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಎಚ್. ಎನ್. ಹೇಮಲತಾ ಮಾತನಾಡಿದರು.
ಇದೇ ವೇಳೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ವಿಜೇತರಿಗೆ ಹಾಗೂ ಪ್ರತಿಭಾವಂತರನ್ನು ಕಾಲೇಜಿ ನಿಂದ ಅಭಿನಂದಿಸಿ ಬಹುಮಾನ ವಿತರಿಸ ಲಾಯಿತು. ಕಾಲೇಜಿನ ಎನ್ಎಸ್ಎಸ್ ಘಟಕಾಧಿಕಾರಿಗಳಾದ ಡಿ. ಹರೀಶ್, ಡಾ. ಪಿ.ಎಂ.ನಾಗೇಂದ್ರಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಉದಯ್ಕುಮಾರ್ ಪ್ರಾಧ್ಯಾಪಕರಾದ ಪರಶಿವಮೂರ್ತಿ, ಪ್ರೇಮಕುಮಾರಿ ಮುರುಳೀಧರ್, ಪುಟ್ಟಸ್ವಾಮಿ, ರಾಜೀವ್ ಸೇರಿದಂತೆ ಹಲವು ಸಹಾಯಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.