ಅರಕಲಗೂಡು: ‘ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ. ಕೃಷ್ಣಪ್ರಸಾದ್ ರಾವ್ ತಿಳಿಸಿದರು.
ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಶನಿವಾರ ‘ವಿಶ್ವ ಭೂ ದಿನ’ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಮಾನವ ಅತಿಯಾಸೆಯಿಂದ ಪರಿಸರದ ಅಸಮತೋಲನಕ್ಕೆ ಕಾರಣನಾಗಿದ್ದಾನೆ, ಜಲಮೂಲ, ಗಾಳಿ ಕಲುಷಿತವಾಗಿದೆ. ಪ್ರಾಣಿ, ಪ್ರಕ್ಷಿಗಳ ಸಂಕುಲ ನಾಶವಾಗುತ್ತಿದೆ. ಪರಿಸರ ದಿನೇದಿನೇ ಹದಗೆಡುತ್ತಿದೆ’ ಎಂದರು.
‘ಇದೇ ರೀತಿ ಮುಂದುವರೆದಲ್ಲಿ ಜೀವ ಸಂಕುಲ ವಾಸಿಸುವುದು ಕಷ್ಟಕರವಾಗಲಿದೆ. ಈ ಕುರಿತು ಈಗಿನಿಂದಲೇ ಸರಿಪಡಿಸುವ ಕುರಿತು ಕಾರ್ಯ ಪ್ರವೃತ್ತರಾಗಬೇಕು’ ಎಂದು ಸಲಹೆ ಮಾಡಿದರು.
ಹಿರಿಯ ವಕೀಲ ಎ.ಆರ್.ಜನಾರ್ದನ ಗುಪ್ತ ಅವರು, ‘ವಿಶ್ವ ಭೂ ದಿನ’ ಮಹತ್ವ ವಿವರಿಸುತ್ತಾ, 1972ರ ಏಪ್ರಿಲ್ 22 ರಂದು ಅಮೇರಿಕದ ಸೆನೆಟರ್ ನೆಲ್ಸನ್ ಭೂಮಿಯ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಭೂಮಿ ದಿನಾಚರಣೆ ಆಚರಿಸಲು ಚಾಲನೆ ನೀಡಿತು ಎಂದರು.
ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯ ಕುರಿತು ವಕೀಲ ಎಸ್.ಟಿ ಪ್ರಕಾಶ್ ಮಾಹಿತಿ ನೀಡಿದರು.
ಸಿವಿಲ್ ನ್ಯಾಯಾಧೀಶ ಕುರಣಿ ಕಾಂತ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ದೀಪಾ, ವಕೀಲರ ಸಂಘದ ಅಧ್ಯಕ್ಷ ನಳರಾಜ್, ಸರ್ಕಾರಿ ವಕೀಲರಾದ ರಂಜನಾರಾವ್, ಎಸ್.ಎನ್.ಮಮತಾ, ದೊರೆಸ್ವಾಮಿ, ವಕೀಲರ ಸಂಘದ ಕಾರ್ಯದರ್ಶಿ ಜಿ.ಜಿ.ರವಿ, ಖಜಾಂಚಿ ವಿ.ಎನ್. ರವಿಕುಮಾರ್ ಉಪಸ್ಥಿತರಿದ್ದರು.