ಗುರುನಾಥ ಹೆಗಡೆ
ಸಾಮಾನ್ಯವಾಗಿ ಕುಂಬಳಕಾಯಿ ಬಳ್ಳಿ ನೆಲದ ತುಂಬೆಲ್ಲಾ ಹರಡಿ ಬೆಳೆಯುತ್ತಾ ಸಾಗುತ್ತದೆ. ಆದರೆ ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿಯ ವೆಂಕಟ್ರಮಣ ಹೆಗಡೆ ಅವರು ಬೆಳೆದಿರುವ ಕುಂಬಳಕಾಯಿ ಬಳ್ಳಿ ಆಕಾಶದ ಕಡೆಗೆ ಮುಖಮಾಡುತ್ತಾ ನೆಲದಿಂದ ಸುಮಾರು ಹದಿನೈದು ಅಡಿ ಎತ್ತರ ಹೋಗಿದೆ. ಮನೆಯ ಸ್ಲ್ಯಾಬ್ ಮೇಲೆ ಹರಡಿಕೊಂಡು 8–10 ದೊಡ್ಡ ದೊಡ್ಡ ಕಾಯಿಗಳನ್ನು ಬಿಟ್ಟಿದೆ.
ಅಷ್ಟಕ್ಕೂ ಈ ರೀತಿಯಾಗಿ ಬೆಳೆದಿರುವುದಕ್ಕೆ ಕಾರಣ, ಹೆಗಡೆ ಅವರು ಟೆರೇಸ್ ಮೇಲಿಂದ ಹಗ್ಗವನ್ನು ಇಳಿ ಬಿಟ್ಟದ್ದು. ಮನೆಯ ನೆಲದ ಮೇಲೆ ಬಳ್ಳಿ ಹಬ್ಬಿದರೆ ಹೆಚ್ಚು ಸ್ಥಳದ ಅವಶ್ಯಕತೆ ಇರುತ್ತದೆ ಎಂಬ ಕಾರಣಕ್ಕೆ ಟೆರೇಸ್ ಮೇಲಿನಿಂದ ಹಗ್ಗ ಇಳಿಬಿಡುವ ಪ್ರಯತ್ನ ಮಾಡಿದರು.
‘ಈ ರೀತಿ ಬಳ್ಳಿ ಮೇಲಕ್ಕೆ ಹೋಗುತ್ತದೋ ಇಲ್ಲವೋ ಎಂಬ ಸಂದೇಹವಿತ್ತು. ಆದರೀಗ ನನ್ನ ಪ್ರಯತ್ನ ಫಲ ಕಂಡಿದೆ’ ಎನ್ನುತ್ತಾರೆ ವೆಂಕಟ್ರಮಣ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕಾನಸೂರ ಹುಕ್ಲಕೈ ಊರಿನವರಾದ ವೆಂಕಟ್ರಮಣ ಅವರಿಗೆ ಈಗ 83 ವರ್ಷ. ಮೊದಲಿನಿಂದ ಒಂದಿಲ್ಲೊಂದು ಪ್ರಯೋಗಗಳ ಮೂಲಕ ಹೆಸರು ಮಾಡಿರುವ ಇವರೀಗ ಇಂಥದ್ದೊಂದು ಹೊಸ ‘ಸಂಶೋಧನೆ’ ಮಾಡಿದ್ದಾರೆ.
ಈಗ ಅವರೆಕಾಯಿ ಬಳ್ಳಿ ಇದೇ ರೀತಿ ಹಬ್ಬಿ ಕಾಯಿ ಬಿಡುತ್ತಿದೆ. ಸೂಜಿ ಮೆಣಸಿನಕಾಯಿ ಗಿಡ, ಹಿತ್ತಲ ಬದನೆ ಮುಂತಾದವುಗಳನ್ನೂ ಬೆಳೆಸಿರುವ ಅವರು ಆ ಕೃಷಿಯಲ್ಲಿಯೂ ಹೊಸಹೊಸ ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ.