ಮುಕುಂದ ಪುರೋಹಿತ್
ವಿಶಿಷ್ಟಾದ್ವೈತ ಮತದ ಪ್ರವರ್ತಕರಾದ ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವದ ಸಂಭ್ರಮ ಈಗ. ತಮಿಳುನಾಡಿನ ಪೆರಂಬೂರಿನಲ್ಲಿ ಜನಿಸಿದ ರಾಮಾನುಜಾಚಾರ್ಯರು ಕರ್ನಾಟಕಕ್ಕೂ ಕೊಟ್ಟ ಕೊಡುಗೆ ಅಪಾರ.
ಇಂತಹ ರಾಮಾನುಜರನ್ನು, ಅವರ ಕೊಡುಗೆಯನ್ನು ಇಂದು ಜನಮಾನಸಕ್ಕೆ ತಿಳಿಸುವ ಅಭಿಲಾಷೆಯಿಂದ ಯದುಗಿರಿ ಯತಿರಾಜ ಮಠದ ತಿರು ಜೀಯರ್, ‘ಶ್ರೀ ರಾಮಾನುಜ ಜ್ಯೋತಿ ಭಕ್ತಿರಥಯಾತ್ರೆ’ಯ ಸಂಚಾರಕ್ಕೆ ಚಾಲನೆ ನೀಡಿದ್ದಾರೆ.
ರಾಮಾನುಜರ ಭಕ್ತಿ ರಥಯಾತ್ರೆಯ ರೂವಾರಿ ಹಿರೇಮಗಳೂರಿನ ಬದರೀನಾಥ ಹಾಗೂ ಮಮತಾ ದಂಪತಿ, ‘ಶ್ರೀಮತಿ ಶಕುಂತಲಮ್ಮ ಶ್ರೀ ಸವ್ಯಸಾಚಿ ಪ್ರತಿಷ್ಠಾನ’, ‘ಶ್ರೀ ಸವ್ಯಸಾಚಿ ಶಿಷ್ಯವರ್ಗ’ ಮತ್ತು ‘ಅಖಿಲ ಕರ್ನಾಟಕ ಶ್ರೀ ವೈಷ್ಣವ ಸಭಾ’ದ ಆಶ್ರಯದಲ್ಲಿ ಈ ಭಕ್ತಿಯಾತ್ರೆಯನ್ನು ಒಂದು ಸಾವಿರ ಕಿ.ಮೀ. ದೂರ ಎಲ್ಲ ಜಿಲ್ಲೆಗಳಿಗೆ ಕೊಂಡೊಯ್ಯುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ರಥಯಾತ್ರೆ ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಸಂಚಲನ ನಡೆಸಿದೆ. ರಾಯಚೂರು, ಹರಪನಹಳ್ಳಿ, ದಾವಣಗೆರೆ, ಶಿವಮೊಗ್ಗ ಮುಗಿಸಿ ಉಡುಪಿಯ ಶ್ರೀ ಪೇಜಾವರ ಸ್ವಾಮಿಗಳ ಹಾಗೂ ಮಂತ್ರಾಲಯ ಶ್ರೀಗಳ ಆಶೀರ್ವಾದ ಪಡೆದು ಮುಂದೆ ಸಾಗಿದೆ.
ರಾಮಾನುಜರು ಸ್ಥಾಪಿಸಿದ ಪಂಚನಾರಾಯಣ ಕ್ಷೇತ್ರವಾದ ಬೇಲೂರು, ತಲಕಾಡು, ಮೇಲುಕೋಟೆಯೂ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಜ್ಯೋತಿ ಸಂಚರಿಸಿ ಇದೇ ಮೇ30ರಂದು ತೊಂಡನೂರಿನ ನಂಬಿ ನಾರಾಯಣನ ದೇಗುಲಕ್ಕೆ ಬರುತ್ತದೆ.
ರಾಮಾನುಜರು ಪ್ರತಿಷ್ಠಾಪಿಸಿದ ಪಂಚನಾರಾಯಣ ಕ್ಷೇತ್ರವನ್ನು ಹಾಗೂ ಅವರ ಪಾದಸ್ಪರ್ಶವಾದ ತಾಣವೂ ಸೇರಿದಂತೆ ರಾಮಾನುಜರನ್ನು ಪೂಜಿಸಿ ಆರಾಧಿಸುವ ಪುಣ್ಯಭೂಮಿ ಸ್ಥಳಗಳನ್ನು ಸಂಚಾರ ಮಾಡಿಕೊಂಡು ಬಂದ ರಾಮಾನುಜ ಜ್ಯೋತಿ ರಥವನ್ನು ಕೆರೆ ತೊಣ್ಣೂರಿನಲ್ಲಿ ಯದುಗಿರಿ ಯತಿರಾಜ ಮಠದ ತಿರುಜೀಯರ್ ಅವರೂ ಸೇರಿದಂತೆ ರಾಜ್ಯ, ರಾಷ್ಟ್ರದ ಗಣ್ಯರೂ, ಸ್ಥಳೀಯ ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಹಿರಿಯ ಅಧಿಕಾರಿಗಳು ಸ್ವಾಗತಿಸಲಿದ್ದಾರೆ.
ಮೇ1ರಂದು ರಾಮಾನುಜ ಅವರ ಸಾವಿರ ವರ್ಷದ ಜಯಂತಿ. ಈ ಹಿನ್ನೆಲೆಯಲ್ಲಿ ತೂಣ್ಣೂರಿನಲ್ಲಿ ರಾಮಾನುಜರ 36ಅಡಿ ಎತ್ತರದ ಬೃಹತ್ ಭಕ್ತಾನಂದ ರಾಮಾನುಜ ವಿಗ್ರಹದ ಅನಾವರಣವಾಗುತ್ತಿದೆ.
ಈ ಸಮಾರಂಭದ ಸಮಾರೋಪ ಕಾರ್ಯಕ್ರಮವನ್ನು ಮೇ ಎರಡನೇ ವಾರದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಅನೇಕ ಧಾರ್ಮಿಕ, ಸಾಹಿತ್ಯ, ಸಾಹಿತ್ಯ, ಮುಂತಾದ ಕೈಂಕರ್ಯಗಳು ಜರುಗಲಿದ್ದು ಈ ಬೃಹತ್ ಸಮಾರಂಭಕ್ಕೆ 25ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆಯಿದೆ.