ಅಡಿಕೆಯಲ್ಲಿ ಅಡಗಿರುವ ಮಲೆನಾಡಿನ ನೆಮ್ಮದಿ ಉಳಿಸಲು ಇದೇ ವರ್ಷ ಉತ್ತರ ಕನ್ನಡ ಜಿಲ್ಲಾ ವಾಣಿಜ್ಯ ಉದ್ದಿಮೆ ಕೃಷಿ ಸಂಸ್ಥೆ ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಅಸ್ತಿತ್ವಕ್ಕೆ ಬಂತು.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾನು ಈ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅಂದಿನಿಂದ 35 ವರ್ಷಗಳವರೆಗೆ ಕೆಲಸ ಮಾಡಿದ್ದೆ. ಕೃಷಿಯಲ್ಲೇ ಬದುಕಿನ ಅಸ್ತಿತ್ವ ಕಂಡುಕೊಳ್ಳುವ ಉದ್ದೇಶದಿಂದ ಧಾರವಾಡ ಕೃಷಿ ಕಾಲೇಜಿಗೆ ಸೇರಿದ್ದ ನಾನು ಆಗಷ್ಟೇ ಪದವಿ ಪೂರೈಸಿ ಊರಿಗೆ ಮರಳಿದ್ದೆ.
ಆ ಕಾಲೇಜಿನ ಮೂರನೇ ಬ್ಯಾಚಿನ ವಿದ್ಯಾರ್ಥಿಯಾಗಿದ್ದ ನಾನು ಕೃಷಿ ಪದವಿ ಪಡೆದು ಸ್ವಂತ ಸಾಗುವಳಿಗೆ ಮರಳಿದ ಮೊದಲ ಪದವೀಧರ’ ಎಂದ ಅವರಿಗೆ ಈಗಲೂ ತಾನೊಬ್ಬ ಕೃಷಿಕ ಎಂಬ ಹೆಮ್ಮೆಯಿದೆ.
‘1974ರಲ್ಲಿ ಕೃಷಿ ಕ್ಷೇತ್ರದ ಸಮಸ್ಯೆಗೆ ಸಂಬಂಧಿಸಿ ರಾಜ್ಯದ ಕೃಷಿ ಸಚಿವರಿಗೆ ಬರೆದಿದ್ದು ನನ್ನ ಮೊದಲ ಪತ್ರ. ಆಗೆಲ್ಲ ಸಾಧ್ಯವಿದ್ದಿದ್ದು ಅಂಚೆ ವ್ಯವಸ್ಥೆ ಮಾತ್ರ. ಅಂದಿನಿಂದ ಶುರುವಾದ ಪತ್ರದ ತುಡಿತ ಇಂದಿಗೂ ಮುಂದುವರಿದಿದೆ.
ರೈಲ್ವೆ, ಬಂದರು, ಅರಣ್ಯ, ಕಂದಾಯ, ಶಿಕ್ಷಣ, ಸಹಕಾರಿ, ಕೃಷಿ ಇಲಾಖೆಗಳ ಸಚಿವರು, ಮುಖ್ಯಸ್ಥರು, ವಿಶ್ವವಿದ್ಯಾಲಯಗಳ ಕುಲಪತಿ, ಸಾಂಬಾರು ಮಂಡಳಿ ಮುಖ್ಯಸ್ಥರು ಹಲವರೊಂದಿಗೆ ಪತ್ರದ ಮೂಲಕ ಮಾತನಾಡಿ ಜನರ ನಾಡಿಮಿಡಿತ ತಿಳಿಸಿದ್ದೇನೆ. ಆದರೆ ಅವುಗಳಲ್ಲಿ ಉತ್ತರ ಸಿಕ್ಕಿದ್ದು ಶೇ 10ರಷ್ಟು ಪತ್ರಗಳಿಗೆ ಅಷ್ಟೇ’ ಎಂದರು.
‘ಶಿರಸಿಯಲ್ಲಿ ಈಗ ಇದ್ದ ಅರಣ್ಯ ಕಾಲೇಜನ್ನು ಧಾರವಾಡದಲ್ಲಿ ಪ್ರಾರಂಭಿಸಲು ಸಿದ್ಧತೆ ನಡೆದಿತ್ತು. ಅರಣ್ಯವಿರುವ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಮಾಗೋಡಿನಲ್ಲಿ ಈ ಕಾಲೇಜು ಪ್ರಾರಂಭವಾಗಬೇಕು ಎಂದು ಅಂದಿನ ಕೃಷಿ ಸಚಿವರಿಗೆ ಪತ್ರ ಬರೆದಿದ್ದೆ.
ಶಿರಸಿಯಲ್ಲಿ ಕಾಲೇಜು ಸ್ಥಾಪನೆಯಾದ ನಂತರ ಒಮ್ಮೆ ಕಾರ್ಯಕ್ರಮದಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅವರು ‘ಅರಣ್ಯ ಕಾಲೇಜು ಶಿರಸಿಗೆ ಬರಲು ಸೋಂದೆ ಕಾರಣ’ ಎಂದು ಉಲ್ಲೇಖಿಸಿದ್ದರು’ ಎಂದು ದಶಕಗಳ ಹಿಂದಿನ ಸಂದರ್ಭವನ್ನು ಸ್ಮರಿಸಿದರು.
‘ವ್ಯವಸ್ಥೆ ಸುಧಾರಿಸಿದೆ. ಅಂಚೆ ಜತೆಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪತ್ರಗಳನ್ನು ಇಮೇಲ್ ಮಾಡುತ್ತೇನೆ. ಈವರೆಗೆ ಬರೆದಿರುವ ಪತ್ರಗಳು ಸಾವಿರ ಮೀರಿರಬಹುದು. ವಾರಕ್ಕೆ ಒಂದಾದರೂ ಪತ್ರ ಖಚಿತ. ನನಗೀಗ 87 ವರ್ಷ. ಬರೆಯಲು ಉತ್ಸಾಹವಿದ್ದರೂ ಕೈ ಸಹಕರಿಸದು. ಮನೆಗೆ ಅತಿಥಿಗಳು ಬಂದಾಗ ಅವರನ್ನು ಆಶ್ರಯಿಸಿ ಪತ್ರ ಬರೆಸುತ್ತೇನೆ’ ಎಂದು ಮುಗುಳ್ನಕ್ಕರು.
ಸೋಂದೆಯವರ ಪತ್ರಗಳು ಉತ್ತರ ಕನ್ನಡದ ಒಂದೊಂದು ಕತೆಯನ್ನು ಬಿಚ್ಚಿಡುತ್ತವೆ. ಅವರ ಪತ್ರಗಳನ್ನು ಆಧರಿಸಿ ಉತ್ತರ ಕನ್ನಡದ ಅಭಿವೃದ್ಧಿ ನೋಟಗಳನ್ನು ಬರೆಯಬಹುದು ಎಂದು ಹಿರಿಯರೊಬ್ಬರು ಹೇಳುತ್ತಿದ್ದರು.