50-70ರ ದಶಕದಲ್ಲಿ ತೆಲುಗು, ತಮಿಳು ಚಿತ್ರರಂಗದ ನಂ.1 ನಟಿ ಆಗಿ ಮೆರೆದಿದ್ದ ಸಾವಿತ್ರಿ ಅವರ ಜೀವನ ಆಧಾರಿತ ಚಿತ್ರ ಸೆಟ್ಟೇರಿದ್ದು, ನಟಿ ಕೀರ್ತಿ ಸುರೇಶ್ ಸಾವಿತ್ರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸಾವಿತ್ರಿ ಅವರ ಪತಿ ಜೆಮಿನಿ ಗಣೇಶನ್ ಪಾತ್ರಕ್ಕಾಗಿ ಹುಡುಕಾಟ ನಡೆಸಿದ್ದ ಚಿತ್ರತಂಡ ಮಲೆಯಾಳಂನ ಯುವನಟ ದುಲ್ಕರ್ ಸಲ್ಮಾನ್ ಅವರನ್ನು ಆಯ್ಕೆ ಮಾಡಿದೆ. ಈ ವಿಷಯವನ್ನು ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ದೃಢಪಡಿಸಿದ್ದಾರೆ.
ಮಲಯಾಳಂನ ಈ ಜನಪ್ರಿಯ ನಟ ‘ಓಕೆ ಬಂಗಾರಂ’ ಹಾಗೂ ‘ಓಕೆ ಕಣ್ಮಣಿ’ ಮೂಲಕ ತೆಲುಗು, ತಮಿಳು ಪ್ರೇಕ್ಷಕರಿಗೂ ಪರಿಚಿತ. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದ್ದು, ತಮಿಳಿನಲ್ಲಿ ‘ನದಿಗಯರ್ ತಿಲಗಂ’ ಮತ್ತು ತೆಲುಗಿನಲ್ಲಿ ‘ಮಹಾನಟಿ’ ಎಂದು ಹೆಸರು ಇಡಲಾಗಿದೆ.
ಚಿತ್ರದಲ್ಲಿ ಸಮಂತಾ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಜನಪ್ರಿಯತೆ ಜೊತೆಗೆ ವಿವಾದಗಳಿಂದಲೂ ಸುದ್ದಿಯಾಗಿದ್ದ ನಟಿ ಸಾವಿತ್ರಿ ಅವರ ಬದುಕು ಚಿತ್ರವಾಗುತ್ತಿರುವುದು ತಮಿಳು ಹಾಗೂ ತೆಲುಗಿನ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಸಾವಿತ್ರಿ ಅವರ ಹಳೆಯ ಚಿತ್ರವನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ಕೀರ್ತಿ ಸುರೇಶ್ ಮತ್ತು ಸಮಂತಾ ರೆಟ್ರೊ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.