ಪಾಶ್ಚಿಮಾತ್ಯ ಸಂಗೀತದ ಗೀಳಿನಲ್ಲಿರುವ ಜನ ಶಾಸ್ತ್ರೀಯ ಸಂಗೀತದತ್ತ ಒಲವು ತೋರುವುದು ಕಡಿಮೆಯಾಗುತ್ತಿದೆ. ಹಾಗಾಗಿ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕಲೆಗೆ ಸರಿಯಾದ ವೇದಿಕೆ ಕಲ್ಪಿಸುವ ಮೂಲಕ ಜನರಲ್ಲಿ ಕಲಾಪ್ರೀತಿಯನ್ನು ಹುಟ್ಟುಹಾಕಬೇಕು ಎಂಬ ಸುದುದ್ದೇಶ ಇರಿಸಿಕೊಂಡು ಸಂಸ್ಥೆಯನ್ನು ಆರಂಭಿಸಿದ್ದಾರೆ ಗಣೇಶ್ ದೇಸಾಯಿ.
ಸಮರಸ ಸಂಸ್ಥೆಯ 140 ವಿದ್ಯಾರ್ಥಿಗಳಲ್ಲಿ 40 ಮಂದಿ ನೃತ್ಯ ಕಲಿಯುವ ವಿದ್ಯಾರ್ಥಿಗಳಾದರೆ, ಉಳಿದ 100 ಮಂದಿ ಸಂಗೀತಾಭ್ಯಾಸ ಮಾಡುತ್ತಾರೆ. ರಾಜಾಜಿನಗರದಲ್ಲಿ ಪ್ರತಿದಿನ ತರಗತಿಗಳು ನಡೆಯುತ್ತವೆ. ಮಲ್ಲತ್ತಹಳ್ಳಿಯಲ್ಲಿ ಒಂದು ದಿನ, ಆರ್ಟಿ ನಗರ ಹಾಗೂ ಬಾಣಸವಾಡಿಯಲ್ಲಿ ವಾರದಲ್ಲಿ ಒಂದು ದಿನ ತರಗತಿಗಳು ನಡೆಯುತ್ತವೆ.
ಗಣೇಶ ದೇಸಾಯಿ ದಂಪತಿ ಜತೆ ಉಮೇಶ್ ದೇಸಾಯಿ ಹಾಗೂ ಅಕ್ಷಯ್ ದೀಕ್ಷಿತ್ ಅವರು ಸಮರಸ ತಂಡದಲ್ಲಿ ಶಿಕ್ಷಕರಾಗಿದ್ದಾರೆ. ಗಣೇಶ್ ದೇಸಾಯಿ ಹಿಂದೂಸ್ತಾನಿ ಸಂಗೀತ ಹಾಗೂ ಲಘು ಸಂಗೀತವನ್ನು ಕಲಿಸಿದರೆ, ನಮಿತಾ ಭರತನಾಟ್ಯ ಹಾಗೂ ಜನಪದ ನೃತ್ಯದ ಪ್ರಕಾರಗಳನ್ನು ಕಲಿಸುತ್ತಾರೆ. ಉಮೇಶ್ ದೇಸಾಯಿ ಶಾಸ್ತ್ರೀಯ ಸಂಗೀತ ಹಾಗೂ ಅಕ್ಷಯ್ ದೀಕ್ಷಿತ್ ತಬಲಾ ವಾದನವನ್ನು ಹೇಳಿಕೊಡುತ್ತಾರೆ.
ಬೆಂಗಳೂರು ಮಾತ್ರವಲ್ಲದೇ ದಾವಣಗೆರೆ, ಶಿರಸಿ ಹಾಗೂ ಧಾರಾವಾಡದಲ್ಲೂ ಸಮರಸದ ವಿದ್ಯಾರ್ಥಿಗಳು ಕಾರ್ಯಕ್ರಮ ನೀಡಿದ್ದಾರೆ. ವಿದೇಶಗಳಿಂದಲೂ ಸಂಗೀತ ಕಲಿಯಲು ಇವರ ಬಳಿಗೆ ವಿದ್ಯಾರ್ಥಿಗಳು ಬರುತ್ತಾರೆ.
‘ಫೇಸ್ಬುಕ್ ಪೇಜ್ನಲ್ಲಿ ನೋಡಿ ನಮ್ಮನ್ನು ಸಂಪರ್ಕಿಸಿ ನಮ್ಮ ಬಳಿ ಸಂಗೀತ ನೃತ್ಯ ಕಲಿಯಲು ವಿದೇಶಿಗರು ಬರುತ್ತಾರೆ’ ಎಂದು ಖುಷಿಯಿಂದ ಹೇಳುತ್ತಾರೆ ಗಣೇಶ್ ದೇಸಾಯಿ.
ಸಮರಸ ಸಂಸ್ಥೆಯ ಇನ್ನೊಂದು ವಿಶೇಷ ಎಂದರೆ ಸಮೂಹ ಗೀತೆ. ಭಾರತೀಯ ಸಮೂಹ ಗೀತೆಯನ್ನು ವಿಶಿಷ್ಟ ಶೈಲಿಯಲ್ಲಿ ಹಾಡುವುದು. ಸಮರಸ ತಂಡ ‘ನವಪಲ್ಲವ’ ಎಂಬ ಸಮೂಹ ಗೀತೆಗಳ ಸಿಡಿಯೊಂದನ್ನು ಬಿಡುಗಡೆ ಮಾಡಿದೆ.
ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು, ಉದ್ಯೋಗಿಗಳು, ಸೆಲೆಬ್ರಿಟಿಗಳು ಸಮರಸದಲ್ಲಿ ಸಂಗೀತ ಹಾಗೂ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.
ಗಣೇಶ ದೇಸಾಯಿ ಸಂಪರ್ಕ ಸಂಖ್ಯೆ: 98452 16091.
***
ಇಂದು ಕಗ್ಗ, ವಚನ, ದಾಸರ ಪದಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ನನ್ನದು.
–ಗಣೇಶ ದೇಸಾಯಿ, ಸಮರಸ ಸಂಸ್ಥೆ ಸ್ಥಾಪಕರು