ಭಾರತದಲ್ಲಿ ಪ್ರತಿವರ್ಷ ಎಷ್ಟೋ ಜನ ಆಹಾರವಿಲ್ಲದೆ ಸಾವನ್ನಪ್ಪುತ್ತಿದ್ದಾರೆ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ, ಆಹಾರ ಪೋಲಾಗುವುದನ್ನು ತಡೆಯಲು ಚಿಂತನೆ ಹರಿಸಿರುವುದು ಒಳ್ಳೆಯ ಬೆಳವಣಿಗೆ.
ಒಂದು ವರದಿ ಪ್ರಕಾರ ಭಾರತದಲ್ಲಿ ವಾರ್ಷಿಕ 6 ಕೋಟಿ ಟನ್ಗೂ ಅಧಿಕ ಆಹಾರ ವ್ಯರ್ಥವಾಗುತ್ತಿದೆ. ಈ ಬಗ್ಗೆ ಗಂಭೀರವಾಗಿ ಯೋಚಿಸಿದರೆ ಅನ್ನದ ಒಂದು ಅಗಳು ತಿನ್ನುವ ಮೊದಲು ನೂರು ಸಾರಿ ಯೋಚನೆ ಮಾಡಬೇಕೆನಿಸುತ್ತದೆ.
ದೇಶದಲ್ಲಿ ರೈತ ಬೆಳೆದ ಶೇ 4.7 ರಿಂದ ಶೇ 6 ರಷ್ಟು ಧಾನ್ಯಗಳು ಹಾಳಾಗುತ್ತವೆ. ಬೇಳೆಕಾಳು, ಹಣ್ಣುಗಳು ಸಹ ದೊಡ್ಡ ಪ್ರಮಾಣದಲ್ಲಿ ಹಾಳಾಗುತ್ತವೆ.
ಕೆಲವೊಂದು ರಾಜ್ಯಗಳಲ್ಲಿ ಮದುವೆ ಮನೆ, ಹೋಟೆಲ್ಗಳಲ್ಲಿ ಉಳಿದ ಆಹಾರವನ್ನು ಸಂಗ್ರಹಿಸಿ ಬಡವರಿಗೆ, ಹಸಿದವರಿಗೆ ತಂದುಕೊಡುವ ಕೆಲಸವನ್ನು ಕೆಲವು ಸಂಘ ಸಂಸ್ಥೆಗಳು ಮಾಡುತ್ತಿವೆ.
ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಕಾರವನ್ನು ಕೊಡಬೇಕಾಗಿದೆ. ರಾಜ್ಯದಲ್ಲಿ ಬರಗಾಲ ಇದೆ. ಎಷ್ಟೋ ಜನ ನೀರು ಮತ್ತು ಆಹಾರವಿಲ್ಲದೆ ಬಳಲುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಆಹಾರ ಪೋಲಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ.
-ಸಂಜಯ ಬೂಪಾಲ ಕೌಲಗಿ, ಅಥಣಿ