ಬೆಂಗಳೂರು: ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಏಕಾಏಕಿ ವಿದ್ಯುತ್ ಕಡಿತ ಮಾಡಿದ ಬೆಸ್ಕಾಂ ವಿರುದ್ಧ ಹೆಣ್ಣೂರು ಬಡಾವಣೆಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ವಿದ್ಯುತ್ ವ್ಯತ್ಯಯ ಕುರಿತು ಈ ಹಿಂದೆ ಪತ್ರಿಕಾ ಪ್ರಕಟಣೆ ನೀಡಲಾಗುತ್ತಿತ್ತು. ಈಗ ಬೆಸ್ಕಾಂ ಅಧಿಕಾರಿಗಳು ಪ್ರಕಟಣೆ ನೀಡುತ್ತಿಲ್ಲ. ಈ ಹಿಂದೆ ಲೋಡ್ ಶೆಡ್ಡಿಂಗ್ ಮಾಡುವಾಗ ಕರಪತ್ರ ಹಂಚುತ್ತಿದ್ದರು. ಆ ಪದ್ಧತಿಯನ್ನೂ ನಿಲ್ಲಿಸಿದ್ದಾರೆ’ ಎಂದು ಹೆಣ್ಣೂರು ಬಡಾವಣೆ ಸಂಘದ ಪದಾಧಿಕಾರಿ ಎನ್.ಮುನಿರಾಜು ಅಸಮಾಧಾನ ವ್ಯಕ್ತಪಡಿಸಿದರು.
‘ಬೆಳಿಗ್ಗೆಯಿಂದ ವಿದ್ಯುತ್ ಇಲ್ಲದ್ದರಿಂದ ನೀರಿನ ಶುದ್ಧೀಕರಣ ಘಟಕ ಕಾರ್ಯನಿರ್ವಹಿಸಲಿಲ್ಲ. ಕುಡಿಯುವ ನೀರಿಲ್ಲದೇ ತೊಂದರೆ ಅನುಭವಿಸಿದೆವು. ವಿದ್ಯುತ್ ಕಡಿತಕ್ಕೆ ಕಾರಣ ತಿಳಿಯಲು ಪೂರ್ವ ವಲಯದ ವಿದ್ಯುತ್ ವಿತರಣಾ ಘಟಕ–9ಕ್ಕೆ ಕರೆ ಮಾಡಿದಾಗ ಸಿಬ್ಬಂದಿ ಸರಿಯಾಗಿ ಸ್ಪಂದಿಸಲಿಲ್ಲ’ ಎಂದು ಪ್ರದೇಶದ ನಿವಾಸಿ ಸುನಿತಾ ದೂರಿದರು.