ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈ ಮುಟ್ಟಿದ್ದನ್ನು ಅಜ್ಜಿಗೆ ಹೇಳುತ್ತೇನೆ ಎಂದಳು’

ಸೇಡಂನಲ್ಲಿ ಬಂಧನ * ತಪ್ಪೊಪ್ಪಿಕೊಂಡ ಆರೋಪಿ
Last Updated 25 ಏಪ್ರಿಲ್ 2017, 20:02 IST
ಅಕ್ಷರ ಗಾತ್ರ

ಬೆಂಗಳೂರು:  ‘ಮೈ–ಕೈ ಮುಟ್ಟಿದ್ದನ್ನು ಅಜ್ಜ ಅಜ್ಜಿಗೆ ತಿಳಿಸುವುದಾಗಿ ಬಾಲಕಿ ಅಳುತ್ತ ಓಡಿದಳು. ಇದರಿಂದ ಹೆದರಿಕೆಯಾಗಿ ಆಕೆಯನ್ನು ಉಸಿರುಗಟ್ಟಿಸಿ ಕೊಂದೆ’ ಎಂದು ಆರೋಪಿ ಅನಿಲ್ ಪೊಲೀಸರಿಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

ಹಂತಕನನ್ನು ಕಲಬುರ್ಗಿಯ ಸೇಡಂನಲ್ಲಿ ಸೋಮವಾರ ವಶಕ್ಕೆ ಪಡೆದ ಪೊಲೀಸರು, ತಡರಾತ್ರಿ ನಗರಕ್ಕೆ ಕರೆತಂದರು. ಮಂಗಳವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನ ತಮ್ಮ ವಶಕ್ಕೆ ಪಡೆದುಕೊಂಡರು.

‘ಏ. 20ರಂದು ನನ್ನ ಪತ್ನಿ ಹಾಗೂ ಇಬ್ಬರು ಮಕ್ಕಳು ಊರಿಗೆ ಹೋಗಿದ್ದರಿಂದ ಮನೆಯಲ್ಲಿ ಒಬ್ಬನೇ ಇದ್ದೆ. ಸಂಜೆ 6 ಗಂಟೆಗೆ ನೆರೆಮನೆ ಮುಂದೆ ಬಾಲಕಿ ಆಟವಾಡುತ್ತಿದ್ದಳು. ಟಿ.ವಿಯಲ್ಲಿ ‘ಕಾರ್ಟೂನ್ ನೆಟ್‌ವರ್ಕ್’ ತೋರಿಸುವುದಾಗಿ ಆಕೆಯನ್ನು ನನ್ನ ಮನೆಗೆ ಕರೆದುಕೊಂಡು ಬಂದೆ. ಮೊದಲು ಮೊಬೈಲ್‌ನಲ್ಲಿ ಕೆಲ ಹಾಸ್ಯದ ವಿಡಿಯೊಗಳನ್ನು ತೋರಿಸಿ ಆಕೆಯ ಗಮನ ಬೇರೆಡೆ ಹೋಗುವಂತೆ ಮಾಡಿದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾನೆ.

‘ನಂತರ ಟಿ.ವಿ ಚಾಲೂ ಮಾಡಿ ಕಾರ್ಟೂನ್ ನೆಟ್‌ವರ್ಕ್‌ ಹಾಕಿದೆ. ಬಾಲಕಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಮೈ–ಕೈ ಮುಟ್ಟಿದಾಗ ಕಿರುಚಿಕೊಂಡಳು. ಸುಮ್ಮನಿರುವಂತೆ ಬೈದಾಗ ಅಳಲಾರಂಭಿಸಿದಳು. ಅಜ್ಜ ಅಜ್ಜಿಗೆ ಹೇಳುವುದಾಗಿ ಬಾಗಿಲ ಕಡೆಗೆ ಓಡಿದಳು. ಹೆದರಿಕೆಯಾಯಿತು. ವಾಪಸ್ ಎತ್ತಿಕೊಂಡು ಬಂದು, ಸ್ನಾನದ ಕೋಣೆಗೆ ಕರೆದೊಯ್ದೆ. ಅಲ್ಲಿ ಮೂಗು, ಬಾಯಿ ಮುಚ್ಚಿ ಉಸಿರುಗಟ್ಟಿಸಿದೆ.’

‘ನಿತ್ರಾಣಳಾದ ಆಕೆಯನ್ನು ಪುನಃ ಕೋಣೆಗೆ ಕರೆ ತಂದು, ದಿಂಬಿನಿಂದ ಮೂಗು, ಬಾಯಿಯನ್ನು ಅಮುಕಿ ಕೊಂದೆ. ಆ ನಂತರ ಭಯ ಶುರುವಾಯಿತು. ಬಟ್ಟೆ ತುಂಬಿದ್ದ ರಟ್ಟಿನ ಪೆಟ್ಟಿಗೆಯಲ್ಲಿ ಶವವನ್ನಿಟ್ಟು, ಅದನ್ನು ಮಂಚದ ಕೆಳಗೆ ತಳ್ಳಿ ಬೀಗ ಹಾಕಿಕೊಂಡು ಹೊರ ಹೋದೆ. ರಾತ್ರಿಯಾದರೂ ಮೊಮ್ಮಗಳು ಕಾಣಿಸದ ಕಾರಣ ಅಜ್ಜ ಅಜ್ಜಿ ಹುಡುಕಾಟ ನಡೆಸುತ್ತಿದ್ದರು. ಕೊನೆಗೆ ಬಾಲಕಿಯ ತಂದೆ ಕೂಡ ಸ್ಥಳಕ್ಕೆ ಬಂದರು. ಅವರ ಜತೆ ನಾನೂ ಹುಡುಕಾಟ ನಡೆಸುವವನಂತೆ ಓಡಾಡಿದ್ದೆ.’

‘ಕೊನೆಗೆ ಬಾಲಕಿಯ ತಂದೆ ದೂರು ಕೊಡುವುದಾಗಿ ಪೊಲೀಸ್ ಠಾಣೆಯ ಕಡೆಗೆ ಹೋದರು. ನನಗೆ ಭಯ ಉಂಟಾಯಿತು. ಆಗ ಪತ್ನಿ, ಮಕ್ಕಳನ್ನು ಕರೆದುಕೊಂಡು ಬರಲು ಹೋಗುತ್ತಿರುವುದಾಗಿ ನೆರೆಹೊರೆಯವರಿಗೆ ತಿಳಿಸಿ ರಾತ್ರಿಯೇ ಊರಿಗೆ ಬಸ್‌ ಹತ್ತಿದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಭಾನುವಾರ ರಾತ್ರಿ ಅನಿಲ್‌ನ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಸ್ಥಳೀಯರು ಬಾಗಿಲು ಒಡೆದು ನೋಡಿದಾಗ ಮಂಚದ ಕೆಳಗೆ ಬಾಲಕಿಯ ಶವ ಪತ್ತೆಯಾಗಿತ್ತು. ಕೂಡಲೇ ಅವರು ಠಾಣೆಗೆ ಕರೆ ಮಾಡಿ  ವಿಷಯ ತಿಳಿಸಿದ್ದರು. ಡಿಸಿಪಿ ಎಸ್‌.ಡಿ.ಶರಣಪ್ಪ ಅವರು ಹಂತಕನ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಿದ್ದರು. ಸೋಮವಾರ ಬೆಳಿಗ್ಗೆ ಸೇಡಂಗೆ ತೆರಳಿದ್ದ ತಂಡವು, ಆರೋಪಿಯನ್ನು ಆತನ ಮನೆಯಿಂದಲೇ ಬಂಧಿಸಿದೆ.

* ಮಗಳನ್ನು ಕೊಲೆ ಮಾಡಿದ ಅನಿಲ್‌ನನ್ನು ನಮ್ಮ ವಶಕ್ಕೆ ಕೊಡಿ. ನಡುರಸ್ತೆಯಲ್ಲೇ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತೇವೆ. ಇಂಥ ಕಾಮುಕರಿಗೆ ಅದು ಪಾಠವಾಗುತ್ತದೆ
–ಬಾಲಕಿಯ ತಂದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT