ಆಲೂರು: ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಕೊರತೆಯಾಗದಂತೆ ಮುಂಜಾಗ್ರತೆ ವಹಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಶಿವರಾಜ್ ತಿಳಿಸಿದರು.ಪಟ್ಟಣದ ವೀರಶೈವ ಕಲ್ಯಾಣ ಮಂಟಪದ ಎದುರಿನಲ್ಲಿರುವ ಮೇವು ಬ್ಯಾಂಕ್ನಲ್ಲಿ ವಿತರಣೆಯಾಗುತ್ತಿರುವ ಮೇವಿನ ಗುಣಮಟ್ಟವನ್ನು ಬುಧವಾರ ಪರಿಶೀಲಿಸಿ ಅವರು ಮಾತನಾಡಿದರು.
ಸಧ್ಯಕ್ಕೆ ಬಳ್ಳಾರಿ ಜಿಲ್ಲೆಯಿಂದ ಜೋಳದ ದಂಟು ಸರಬರಾಜು ಆಗುತ್ತಿದೆ. ನಿತ್ಯ ಮೇವನ್ನು ತಾಲ್ಲೂಕಿನ ಪಾಳ್ಯ, ಕುಂದೂರು, ಕಸಬಾ ಕೇಂದ್ರಗಳಿಂದ ಪೂರೈಸಲಾಗುತ್ತಿದೆ. ಸ್ಥಳೀಯ ರೈತರು ಜಾನುವಾರುಗಳಿಗೆ ಮೇವನ್ನು ನೀಡಿದರೆ ಸ್ಥಳದಲ್ಲೇ ಹಣ ಪಾವತಿಸಿ ಖರೀದಿಸಲಾಗುವುದು ಎಂದು ಹೇಳಿದರು.
‘ಮೇವಿನ ತೂಕವನ್ನು ಹೆಚ್ಚಿಸಲು ನೀರು ಹಾಕಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ನಿತ್ಯ ಅಗತ್ಯವಿರುವಷ್ಟು ಮೇವನ್ನು ಮಾತ್ರ ತರಿಸುವುದರಿಂದ ಮೇವು ಹಾಳಾಗುವುದನ್ನು ತಡೆಯಬಹುದು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಕೆ.ಎನ್.ಶಾರದಾಂಬ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶಿವಕುಮಾರಪ್ಪ, ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ್, ಪಿಡಿಒ ಸವಿತಾ, ಪಶುವೈದ್ಯಾಧಿಕಾರಿ ಡಾ.ರವೀಂದ್ರ ನಾಥ್, ಕಂದಾಯ ನಿರೀಕ್ಷಕ ಹರೀಶ್, ಗ್ರಾಮ ಲೆಕ್ಕಿಗ ಪುಟ್ಟರಾಜು ಇದ್ದರು.