ಆಲೂರು: ಕುಡಿಯುವ ನೀರಲ್ಲದೇ ಜನರು ಪರಿತಪಿಸುತ್ತಿದ್ದು, ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ನೀರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ತಾಲ್ಲೂಕಿನ ನಾಕಲಗೂಡು ಗ್ರಾಮಸ್ಥರು, ಶುಕ್ರವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.ಸತತ ಮೂರು ವರ್ಷದಿಂದ ಬರಗಾಲ ಬಿದ್ದಿದ್ದು, ರೈತರ ಬದುಕು ಸಂಕಷ್ಟಕ್ಕೀಡಾಗಿದೆ. ಅಂತರ್ಜಲ ಬತ್ತಿಹೋಗಿ ಕುಡಿಯುವ ನೀರಿಲ್ಲದೆ ಜನರು, ಜಾನುವಾರುಗಳು ಸಂಕಟಪಡುತ್ತಿದ್ದು, ಇದರಿಂದ ಪಾರು ಮಾಡಲು ವಿವಿಧ ಯೋಜನೆಯಡಿ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಿ ನೀರನ್ನು ಒದಗಿಸಬೇಕು ಎಂದು ಸರ್ಕಾರ ಸೂಚಿಸಿದ್ದರೂ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ನಟರಾಜು ನಾಕಲಗೂಡು ಆರೋಪಿಸಿದರು.