ಒಂದು ಕಿಲೋ ಹತ್ತಿಯಿಂದ ಸಾವಿರ ಮೀಟರ್ ಉದ್ದದ ಒಟ್ಟು 14 ರೀಲುಗಳು ತಯಾರಾಗುತ್ತವೆ. ಒಂದು ರೀಲಿಗೆ 80ರಿಂದ 100 ರೂಪಾಯಿ ಸಿಗುತ್ತದೆ. ‘ವರ್ಷವಿಡೀ ನಾವು ಕೆಲಸ ಮಾಡಿದರೆ ತಿಂಗಳಿಗೆ ಸರಾಸರಿ 2,500 ರೂಪಾಯಿ ಕೂಲಿ ಸಿಕ್ಕೀತಷ್ಟೇ’ ಎಂದು ಲೆಕ್ಕಾಚಾರ ಕೊಡುತ್ತಾರೆ ವೆಂಕಟಲಕ್ಷ್ಮಮ್ಮ.
ರಮಣಮ್ಮ ಅವರದು 25 ವರ್ಷಗಳಿಂದಲೂ ಚರಕದ ಜೊತೆ ಒಡನಾಟ. ಬೆಳಿಗ್ಗೆ ಮನೆಯ ಎಲ್ಲ ಕೆಲಸ ಮುಗಿಸಿ ಮೂರು ತಾಸು ಹಾಗೂ ಮಧ್ಯಾಹ್ನ ಊಟದ ಬಳಿಕ ಕೂತರೆ ಸಂಜೆಯವರೆಗೆ ಎರಡು ತಾಸು ನೂಲು ತೆಗೆಯುವುದನ್ನು ಅವರು ಯಾವತ್ತೂ ಬಿಟ್ಟಿಲ್ಲ. ಪತಿ ಜವಳಿ ಅಂಗಡಿಯಲ್ಲಿದ್ದರೆ, ರಮಣಮ್ಮ ಮನೆಯಲ್ಲಿದ್ದುಕೊಂಡೇ ಚಿಕ್ಕಪುಟ್ಟ ಖರ್ಚಿಗೆ ಹಣ ಸರಿದೂಗಿಸಿಕೊಳ್ಳುವುದು ನೂಲಿನಿಂದ.
ಚರಕ ತಿರುಗಿಸುತ್ತ ಮಾತಾಡುತ್ತಿದ್ದ ಅವರು ಪೊಂದೂರಿನ ಹತ್ತಿ, ಖಾದಿವೈಭವ ಹೇಳುತ್ತಲೇ ಹೋದರು. ನಡುವೆ ಮನೆಯೊಳಗೆ ಹೋಗಿ, ಗರಿಗರಿಯಾದ ಸೀರೆಯೊಂದನ್ನು ತಂದು ತೋರಿಸಿ – ‘ಇದು ಪೊಂದೂರು ಹತ್ತಿಯಿಂದ ಮಾಡಿದ್ದು. ನನ್ನ ಮದುವೆಯಾದಾಗ ತಾಯಿ ಇದನ್ನು ಕೊಟ್ಟಿದ್ದಳು’ ಎಂದಾಗ ನಂಬಲು ಆಗಲೇ ಇಲ್ಲ. ಹದಿನೆಂಟು ವರ್ಷಗಳಾದರೂ ಆ ಸೀರೆಯ ಹೊಳಪು ನೂಲಿನಷ್ಟೂ ಕಡಿಮೆಯಾಗಿರಲಿಲ್ಲ!
ಹತ್ತಿಯನ್ನು ನೂಲಿನ ಹಂತದವರೆಗೆ ಮಾಡುವ ಪ್ರಕ್ರಿಯೆ ಅಸಾಧಾರಣ ತಾಳ್ಮೆಯನ್ನೂ ಕೌಶಲವನ್ನೂ ಬಯಸುತ್ತದೆ. ಹತ್ತಿಯನ್ನು ಬೀಜದಿಂದ ಬೇರ್ಪಡಿಸಲು ಕಟ್ಟಿಗೆ ಹಲಗೆ ಬೇಕು. ಕಸಕಡ್ಡಿಯನ್ನು ತೆಗೆದು ಹೊಳಪು ಕೊಡಲು ಮೀನಿನ ದವಡೆ ಬೇಕು! ಬಳಿಕ ಅದನ್ನು ಹಂಜಿಯನ್ನಾಗಿ ಮಾಡಲು ಇನ್ನೊಂದು ಸಲಕರಣೆ; ಶುದ್ಧ ಹತ್ತಿಯನ್ನು ಹಿಡಿಯಲು ಬಾಳೆಹಾಳೆಯೇ ಸೈ! ಹತ್ತಿಯು ನೂಲು ಆಗಿ ಪರಿವರ್ತನೆಯಾಗಲು ಚರಕ ನೆರವು.
ವಿಶೇಷವೆಂದರೆ, ಇಲ್ಲಿ ಯಾವ ಪ್ಲಾಸ್ಟಿಕ್ ಅಥವಾ ಲೋಹದ ಸಾಧನ ಬಳಕೆಯಾಗುವುದೇ ಇಲ್ಲ! ‘ಎಂಟು ವರ್ಷಗಳ ಹಿಂದೆ ಅಲ್ಯೂಮಿನಿಯಂ ಉಪಕರಣಗಳು ಮಾರುಕಟ್ಟೆಗೆ ಬಂದವು. ಆದರೆ ಅದು ಯಾಕೋ ಸರಿ ಅನಿಸಲಿಲ್ಲ. ಮತ್ತೆ ಮೀನಿನ ದವಡೆ, ಕಟ್ಟಿಗೆ ಉಪಕರಣಕ್ಕೆ ಮೊರೆ ಹೋದೆವು’ ಎಂದು ನಗುತ್ತಾರೆ ಅಪ್ಪಮ್ಮ. ಬೇರೆ ತಳಿಗಳ ಹತ್ತಿಯನ್ನು ತಂದು ನೂಲು ಮಾಡಲು ಹಲವರು ಯತ್ನಿಸಿದರೂ, ಅದರಿಂದ ಗುಣಮಟ್ಟದ ನೂಲು ಬರಲಿಲ್ಲ. ಹೀಗಾಗಿ ಆ ತಳಿಗಳ ಹತ್ತಿ ಇಲ್ಲಿ ಕಾಣಿಸಿಕೊಂಡೇ ಇಲ್ಲ. ಈಗ ಪೊಂದೂರು ಹತ್ತಿಯದೇ ದರ್ಬಾರು!
ಅಸಲಿ ಖಾದಿ!
ಪೊಂದೂರು ಪಟ್ಟಣದಲ್ಲಿ 1949ರಲ್ಲಿ ನೇಕಾರರೇ ಸ್ಥಾಪಿಸಿದ ‘ಆಂಧ್ರ ಫೈನ್ ಖಾದಿ ಕಾರ್ಮಿಕಾಭಿವೃದ್ಧಿ ಸಂಘ’ವು ಈಗ ‘ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ’ದ ಅಡಿ ಕಾರ್ಯನಿರ್ವಹಿಸುತ್ತಿದೆ. ರೈತರು, ನೂಲುವವರು ಹಾಗೂ ನೇಕಾರರ ಜೊತೆ ಕೆಲಸ ಮಾಡುವ ಈ ಕೇಂದ್ರ, ವಾರ್ಷಿಕ ಮೂರು ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಹಿವಾಟು ನಡೆಸುತ್ತಿದೆ. ಊರಿನಲ್ಲಿ ಸುಮಾರು ಇನ್ನೂರು ಮನೆಗಳಲ್ಲಿ ಚರಕ ತಿರುಗುತ್ತಿದ್ದರೆ, ಐವತ್ತು ನೇಕಾರರು ಬಟ್ಟೆ ನೇಯುತ್ತಾರೆ.
ಮಹಿಳೆಯರು ಮನೆಯಲ್ಲಿ ನೇಯ್ದ ನೂಲನ್ನು ಕೇಂದ್ರಕ್ಕೆ ತರುತ್ತಾರೆ. ಅಲ್ಲಿ ತೂಕದ ಆಧಾರದ ಮೇಲೆ ಅದರ ದರ ನಿಗದಿ ಮಾಡಲಾಗುತ್ತದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ಕೇಂದ್ರದಲ್ಲಿ ಜನಜಂಗುಳಿ. ಕಾಗದದಲ್ಲಿ ಸುತ್ತಿ ತಂದ ನೂಲನ್ನು ಹುಷಾರಾಗಿ ಬಿಡಿಸಿಕೊಟ್ಟರೆ, ಅಲ್ಲಿರುವ ಸಿಬ್ಬಂದಿ ಅದನ್ನು ಅಷ್ಟೇ ನಾಜೂಕಾಗಿ ತೂಕ ಮಾಡುತ್ತಾರೆ.
ಹತ್ತು ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ (ಆ ಪೈಕಿ ಹೆಚ್ಚು ನೇಕಾರರು, ನೂಲುವವರು ಇರುವುದು ಪೊಂದೂರಿನಲ್ಲೇ) ಕೇಂದ್ರವು 2 ಕೋಟಿ ರೂಪಾಯಿಗಳನ್ನು ರೈತರಿಂದ ಹತ್ತಿ ಖರೀದಿಗಾಗಿಯೇ ವೆಚ್ಚ ಮಾಡುತ್ತದೆ. ನೇಕಾರರು ನೇಯುವ ಬಟ್ಟೆಯು 75 ಹಾಗೂ 100 ಕೌಂಟ್ ಎಂಬೆರಡು ವಿಧಗಳಲ್ಲಿ ದೊರಕುತ್ತವೆ.
ಈ ಬಟ್ಟೆಯಿಂದ ಅಂಗಿ ಸೇರಿದಂತೆ ಬೇರೆಲ್ಲ ಉಡುಪುಗಳನ್ನು ಹೊಲಿಸಿಕೊಳ್ಳಬಹುದು. ಉಳಿದಂತೆ ಇಲ್ಲಿಯೇ ಪಂಚೆ ಹಾಗೂ ಸೀರೆಗಳನ್ನೂ ನೇಯಲಾಗುತ್ತದೆ. ಇಲ್ಲಿ ತಯಾರಾದ ಬಟ್ಟೆಗೆ ಹೈದರಾಬಾದ್, ವಿಜಯವಾಡಾ, ವಿಶಾಖಪಟ್ಟಣ ಸೇರಿದಂತೆ ವಿವಿಧೆಡೆ ಭಾರೀ ಬೇಡಿಕೆಯಿದೆ.