ಭಾವನೆಗಳ ಮೂಲ ಮನಸ್ಸಾದರೂ, ಮನಸ್ಸಿನಲ್ಲಿ ಅವು ಹೇಗೆ ಹುಟ್ಟುತ್ತವೆ ಎಂಬುದಂತೂ ನಿಗೂಢವೇ. ಜಗತ್ತಿನ ಸಾವಯವ ವಸ್ತುಗಳು ಈ ಗುಣವನ್ನು ಹೊತ್ತಿರುತ್ತವೆ. ನೋಡುವ ಕಣ್ಣಿನೊಂದಿಗೆ ಮನಸ್ಸಿನ ಕಣ್ಣೂ ತೆರೆದುಕೊಂಡುಬಿಟ್ಟರೆ ಭಾವಗಳ ಗುಬ್ಬಿಗಳು ರೆಪ್ಪೆ ಬಡಿಯುತ್ತವೆ, ರೆಕ್ಕೆ ಬಿಚ್ಚುತ್ತವೆ.
ಆಗ ಜೊತೆಯಲ್ಲಿ ಕ್ಯಾಮೆರಾ ಇದ್ದರೆ, ಅದರ ಕಣ್ಣಿಗೆ ಚಿತ್ರಕಾರತನ ಬಂದುಬಿಡುತ್ತದೆ. ಕ್ಷಣವೋ ನಿಮಿಷಗಳೋ ಚೆಲುವಿನ ಜೀವವುಳ್ಳವು ‘ಆಲ್ಬಂ’ ಆಗಿ ಉಳಿದುಬಿಡುತ್ತವೆ. ಇಲ್ಲಿನವು ಅನಿರೀಕ್ಷಿತ ಅದೃಷ್ಟದ ಚಿತ್ರಕಾವ್ಯ ರೂಪಕಗಳು.
ಊರಮುಂದಿನ (ಕೋಲಾರ ಜಿಲ್ಲೆಯ ಕಶೇಟ್ಟಿಪಲ್ಲಿ) ಅರಳಿಕಟ್ಟೆಯಲ್ಲಿ ತನ್ನನ್ನು ನೆಡುವುದರೊಂದಗೆ 1948ರಲ್ಲಿ ನಿರ್ಮಿಸಿದ ನಾಗರಕಲ್ಲು ಮಂಟಪಕ್ಕೆ ನೆರಳಾಗಿ, ವಿಧುರನಾದ ವೃಕ್ಷರಾಜನ ಕೊರಡು ಮುಂಡದಲ್ಲಿ ಅರಳಿದ ಅಣಬೆಗಳಿವು. ಇದನ್ನು ‘ವಿಧುರ’ ಅಂದುದೇಕೆಂದರೆ, ತನ್ನೊಡನೆ ಮದುವೆಯಾಗಿದ್ದ ಬೇವುರಾಣಿ ಐವತ್ತೆಂಟು ವರ್ಷಗಳ ಕಾಲ ಜೊತೆಯಾಗಿ ಬಾಳಿ, ಮಳೆಗಾಳಿಯೆಂಬುವ ವೈರಿ ದಾಳಿಗೆ ನೆಲಕುರುಳಿ ಹತಳಾದಳು.
ಅವಳ ಅಗಲಿಕೆಯಿಂದ ಒಂಟಿಯಾದ ಈ ವೃಕ್ಷರಾಜ ವೈರಾಗ್ಯ ತಳೆದು ನಿಂತ. ರಾಜ್ಯ(ಕಟ್ಟೆ) ಶಿಥಿಲಗೊಂಡಿತು. ಈ ಜೀವನ ಇನ್ನೆಷ್ಟು ದಿನ ಅಂದುಕೊಂಡನೇನೊ! ನಿಧಾನವಾಗಿ ಉಸಿರು ಕಡಿಮೆಮಾಡಿಕೊಳ್ಳುತ್ತ ಬಂದ. ರಸ ಬತ್ತಿದ ಕೈಕಾಲುಗಳೊಂದಿಗೆ ಶಾಪಪಡೆದ ಪುಣ್ಯಪುರುಷನಂತೆ ನಿಂತ.