ಸತ್ಯಮಂಗಲ ಮಹದೇವ
ಹೊಸತನದ ಗಾಳಿ ತಗುಲಿ ಎವೆತೆರೆದು
ನೋಡುತಲಿದ್ದೆ
ಅವಳು ನಸುಕು ಮೈನೆರೆದ ತನ್ನ ತುಟಿಯಂಚಿನ
ನಗೆಯನ್ನು ಹಂಚುತ್ತಿದ್ದಳು, ಆಗ
ಮೌನದ ಬಸಿರಿಂದ ಭಾವ ಶಿಶುವಿನ ಗಾನ
ಶಬ್ದಗಳ ಮೀರಿ ಹೃದಯಕ್ಕೆ ದಾಟುತಿತ್ತು.
ಮೊಗ್ಗಿನಲಿ ಕುಡಿವರಿದ ರಸಭಾವ ಬಂಧದಲಿ
ಬಿರಿದು ಹೂವಾಗುತಲಿತ್ತು ಬಯಕೆ
ಹದವರಿತು ಬೇರುಗಳು ಬಯಸಿ ಪಡೆದಾ ಕಾಯದಲಿ
ಪ್ರಾಣ ಹರಿದಾಡಿತ್ತು
ತನಿರಸದಿ ಅಡಗಿರುವ ಚಿಗುರು-ಒಗರುಗಳಿಗೆಲ್ಲಾ
ಬಲಿತು ಬೀಗುವ ಮಹಾನಂದದ ಘಳಿಗೆ ಬರಲಿದೆಯೆಂದು
ಗರಿಬಿಡಿಸಿ ಒಡೆವಾಗ ಹರಡಿಕೊಳ್ಳುವ
ಗಮ್ಮನೆಯ ಬಿಮ್ಮನಸಿ ಗುಣವು
ತಾಳಿಕೆಯಲಿ ಬಾಳಿದ ಜೀವ ತಂತುಗಳಿಗೆಲ್ಲಾ
ಜೀವರಾಗವ ಕಲಿಸಿ ನಾದಕ್ಕೆ ನುಡಿಸಿದ
ಒಡಪಿನಾ ಒಲವಾಗಿ ಮಾಗುತಿತಲಿತ್ತು ಕೆಂದೆಳರಿನಿಂದ ಹಸಿರಿನೆಡೆಗೆ ಸತತ.
ಬಿಡುಗಡೆಯ ಸೀಳಿದವು ಅನಂತ ಚೇತನವೆಲ್ಲಾ
ಭಾವದಲಿ ನಲಿದು ಕರುಣೆಯಲಿ ಮಿಂದು ಬಣ್ಣವಾಗಿ
ಅಂತರಂಗವ ತೆರೆದು ಎಚ್ಚರಕೆ ಹಾರಿದವು
ಕುಸುಮಿಸಿದೆ ಅಮೃತವು ಹೊಸತು ಹೊಸತಾಗಿ
ಮಾತು ಮೌನಕೆ ಜಾರಿ ಜೀವಧ್ಯಾನಕೆ ಕೂತು
ಪಿಸುಮಾತು ಹೊಮ್ಮುತಿದೆ
ಕಾವ್ಯವೆಂದರೆ ರಸದ ನಿರ್ವಾಣ
ಕಾರಣ ಕಾರ್ಯದಲಿ ಹೊಸೆಯಲಾರದ ಬೆಡಗು-ಬಿನ್ನಾಣ.
****
ಆಕೆಯ ಆ ಅಳು...
ಒಮ್ಮೆ ನನ್ನ ಕ್ಲಿನಿಕ್ಗೆ ಸ್ತ್ರೀ ರೋಗಿ ಒಬ್ಬರು ಮತ್ತು ಆಕೆಯ ಸಂಬಂಧಿ ಬಂದು ಕುಳಿತಿದ್ದರು. ಅವರ ಸರದಿ ಬಂದಾಗ ಪರೀಕ್ಷಾ ಕೊಠಡಿಗೆ ಕರೆದು ‘ಏನು ತೊಂದರೆ?’ ಎಂದು ವಿಚಾರಿಸಿದೆ. ಆ ಮಹಿಳೆ ‘ನನಗೆ ತುಂಬಾ ಸುಸ್ತು, ಆಯಾಸ’ ಎಂದು ಒತ್ತಿ ಒತ್ತಿ ಹೇಳಿದರು. ‘ನಾನು ಈ ಮೊದಲು ಈಗ ಇರುವುದಕ್ಕಿಂತ ಎರಡು ಪಟ್ಟು ದಪ್ಪ ಇದ್ದ ಆಳು’ ಎಂದರು.
ಆಕೆ ಅಷ್ಟೇನೂ ವಿದ್ಯಾವಂತೆ ಅಲ್ಲದಿದ್ದರೂ ವ್ಯಾವಹಾರಿಕವಾಗಿ ಜಾಣೆ. ಆಕೆಯನ್ನು ಪರೀಕ್ಷಿಸಿದೆ. ಏನೂ ನ್ಯೂನತೆಗಳು ಕಾಣಲಿಲ್ಲ. ಸಕ್ಕರೆ ಕಾಯಿಲೆ ಇರಬಹುದು ಎಂದುಕೊಂಡು ‘ರಕ್ತಪರೀಕ್ಷೆ ಮಾಡಿಸಿ’ ಎಂದೆ. ಆ ಹೆಂಗಸು: ‘ಸ್ವಲ್ಪ ದಿನಗಳ ಮುಂಚೆ ತಜ್ಞ ವೈದ್ಯರ ಹತ್ತಿರ ತಪಾಸಣೆ ಮಾಡಿಸಿದ್ದೇನೆ.
ಅವರು ರಕ್ತದಲ್ಲಿನ ಸಕ್ಕರೆ ಅಂಶವನ್ನು ಪರೀಕ್ಷೆ ಮಾಡಿಸಿದ್ದಾರೆ. ಆದರೆ ಸಕ್ಕರೆ ಕಾಯಿಲೆ ಇಲ್ಲ’ ಎಂದು ಲ್ಯಾಬ್ ರಿಪೋರ್ಟ್ ತೋರಿಸಿದರು. ಆದರೂ ಮತ್ತೊಮ್ಮೆ ರಕ್ತದಲ್ಲಿನ ಸಕ್ಕರೆ ಅಂಶ ಮತ್ತು ಕೆಲವು ಬೇರೆ ಪರೀಕ್ಷೆಗಳನ್ನು ಮಾಡಿಸಿ ಎಂದು ಚೀಟಿ ಬರೆದು ಕೊಟ್ಟು – ಸುಸ್ತಿಗೆ ಮಾತ್ರೆಗಳು, ಟಾನಿಕ್ ಬರೆಯುತ್ತಿದ್ದಾಗ, ‘ಅಯ್ಯೋ ನನ್ನ ಗಂಡ ಒಳ್ಳೆಯವನಲ್ಲ, ಕಂಡ ಕಂಡ ಹೆಂಗಸರ ಹತ್ತಿರ ಹೋಗುತ್ತಾನೆ, ವ್ಯಭಿಚಾರಿ’ ಎಂದು ಆ ಮಹಿಳೆ ಹೇಳಿದಳು.