ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳೆಯರಿಗೆ ಸಹಕರಿಸುವಂತೆ ಮಹಿಳೆಗೆ ಬ್ಲ್ಯಾಕ್‌ಮೇಲ್

ಅರಣ್ಯ ಇಲಾಖೆ ಕಚೇರಿ ಸಹಾಯಕ ಸೆರೆ
Last Updated 29 ಏಪ್ರಿಲ್ 2017, 20:14 IST
ಅಕ್ಷರ ಗಾತ್ರ

ಬೆಂಗಳೂರು: ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ನಗ್ನ ಸ್ಥಿತಿಯಲ್ಲಿರುವ ಫೋಟೊಗಳನ್ನು ಫೇಸ್‌ಬುಕ್‌ಗೆ ಹಾಕುವುದಾಗಿ ಮಹಿಳೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ಅರಣ್ಯ ಇಲಾಖೆಯ ಕಚೇರಿ ಸಹಾಯಕ ಸಿ.ಕೃಷ್ಣ (52) ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.

‘ನನ್ನ ಗೆಳತಿ ಕೂಡ ಕೃಷ್ಣನ ಜತೆ ಸೇರಿಕೊಂಡು ಕಿರುಕುಳ ನೀಡುತ್ತಿದ್ದಾಳೆ. ಇವರಿಬ್ಬರೂ 2013ರಿಂದ ಈವರೆಗೆ ನನ್ನ ಬಳಿ ₹ 4.76 ಲಕ್ಷ ಸುಲಿಗೆ ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು, ನನ್ನ ಹಣ ವಾಪಸ್ ಕೊಡಿಸಿ’ ಎಂದು ಸಂತ್ರಸ್ತೆ ಏ.25ರಂದು ದೂರು ಕೊಟ್ಟಿದ್ದಾರೆ.

ಪೊಲೀಸರು ಅದೇ ದಿನ ಎಂ.ಎಸ್.ಬಿಲ್ಡಿಂಗ್‌ನ ಕ್ಯಾಂಟಿನ್‌ನಲ್ಲಿ ಕೃಷ್ಣನನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ಗೆಳತಿಯ ಪತ್ತೆಗೆ ಬಲೆ ಬೀಸಿದ್ದಾರೆ. ಕೃಷ್ಣ ಎಸ್‌.ಎಸ್‌.ಬಿಲ್ಡಿಂಗ್‌ನ 4ನೇ ಮಹಡಿಯ ಕಚೇರಿಯಲ್ಲಿ ಕೆಲಸ ಮಾಡುತ್ತಾನೆ. ಸಂತ್ರಸ್ತೆ ಕೂಡ ಅದೇ ಕಟ್ಟಡದ ಇನ್ನೊಂದು ಕಚೇರಿಯಲ್ಲಿ ಶೀಘ್ರ ಲಿಪಿಕಾರರಾಗಿದ್ದಾರೆ. ಇಬ್ಬರೂ ಐದಾರು ವರ್ಷಗಳಿಂದ ಪರಿಚಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಗೆಳತಿ ಕುತಂತ್ರ: ‘2013ರಲ್ಲಿ ಬೆಂಗಳೂರಿಗೆ ಬಂದ ನಾನು, ಗೆಳತಿ ಜತೆ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಈ ಅವಧಿಯಲ್ಲಿ ಆಕೆ ನನ್ನ ಫೋಟೊಗಳನ್ನು ತೆಗೆದುಕೊಂಡಿದ್ದಳು. ಸ್ನಾನ ಮಾಡುತ್ತಿರುವ ದೃಶ್ಯಗಳನ್ನೂ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಳು. ಆ ನಂತರ ಆಕೆ ಕೆಲಸದ ಮೇಲೆ ಕಲುಬುರ್ಗಿಗೆ ತೆರಳಿದಳು’ ಎಂದು ಸಂತ್ರಸ್ತೆ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

‘ಕೆಲವೇ ದಿನಗಳಲ್ಲಿ ಹಣಕಾಸಿನ ತೊಂದರೆಯಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿತು. ಆಗ ಕೃಷ್ಣ ನೆರವಾಗಿದ್ದ. ಆ ಮೂಲಕ ನಮ್ಮ ಕುಟುಂಬಕ್ಕೂ ಹತ್ತಿರವಾಗಿದ್ದ. ನಂತರ ಆತನಿಗೆ ನನ್ನ ಗೆಳತಿಯ ಪರಿಚಯವಾಯಿತು. ಆಕೆ, ಹಿಂದೆ ತೆಗೆದಿದ್ದ ಫೋಟೊ ಹಾಗೂ ವಿಡಿಯೊಗಳನ್ನು ಆತನಿಗೆ ಕೊಟ್ಟಿದ್ದಳು.’

‘ಅವುಗಳನ್ನು ನನಗೆ ತೋರಿಸಿದ ಕೃಷ್ಣ, ‘ಹಣ ಕೊಡದಿದ್ದರೆ ಫೋಟೊ–ವಿಡಿಯೊಗಳನ್ನು ಫೇಸ್‌ಬುಕ್‌ನಲ್ಲಿ ಹಾಕುತ್ತೇನೆ’ ಎಂದು ಬೆದರಿಸಿದ. ಮರ್ಯಾದೆಗೆ ಅಂಜಿ, ಹಂತ ಹಂತವಾಗಿ ನಗದು ಹಾಗೂ ಚೆಕ್ ಮೂಲಕ ₹ 4,76 ಲಕ್ಷ ಕೊಟ್ಟಿದ್ದೆ. ಅಲ್ಲದೆ, 35 ಗ್ರಾಂನ ಮಾಂಗಲ್ಯ ಸರವನ್ನೂ ಬಿಚ್ಚಿ ಕೊಟ್ಟಿದ್ದೆ.’

ಸುಮ್ಮನಾಗಲಿಲ್ಲ: ‘ಇಷ್ಟು ದಿನ ಹಣ ವನ್ನಷ್ಟೇ ಕೇಳುತ್ತಿದ್ದ ಕೃಷ್ಣ, ಈಗ ಸ್ನೇಹಿತರಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪೀಡಿಸುತ್ತಿದ್ದಾನೆ. ಅಲ್ಲದೆ, ದೂರು ಕೊಟ್ಟರೆ ಕುಟುಂಬ ಸದಸ್ಯರನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾನೆ. ಪ್ರತಿದಿನ ಆತ ನೀಡುತ್ತಿದ್ದ ಹಿಂಸೆಯನ್ನು ಸಹಿಸಲಾಗದೆ ಠಾಣೆಯ ಮೆಟ್ಟಿಲೇರಿದ್ದೇನೆ’ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.

ವಿಡಿಯೊ ತೋರಿಸುತ್ತಿದ್ದ
‘ಕೃಷ್ಣ ಕೇಳಿದ ಕೂಡಲೇ ಹಣ ಕೊಡಬೇಕಿತ್ತು. ಒಂದೆರಡು ದಿನ ತಡವಾದರೂ, ಕಚೇರಿಯ ಕೆಲ ನೌಕರರಿಗೆ ನನ್ನ ಫೋಟೊ ಹಾಗೂ ವಿಡಿಯೊಗಳನ್ನು ತೋರಿಸಿ ಮರ್ಯಾದೆ ತೆಗೆಯುತ್ತಿದ್ದ. 4 ವರ್ಷಗಳಿಂದ ಇದನ್ನು ಸಹಿಸಿಕೊಂಡು ಬಂದಿದ್ದೆ. ಆದರೆ, ಈಗ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಹೇಳಿದ್ದನ್ನು ಸಹಿಸಲು ಆಗಲಿಲ್ಲ’ ಎಂದು ಸಂತ್ರಸ್ತೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT