ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಪೀಳಿಗೆ ರೊಬೋಟ್‌ನಂತಾಗುತ್ತಿದೆಯೇ?: ಮೋದಿ ಕಳವಳ

Last Updated 30 ಏಪ್ರಿಲ್ 2017, 15:00 IST
ಅಕ್ಷರ ಗಾತ್ರ

ನವದೆಹಲಿ: ‘ಮನದ ಮಾತು’ ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ‘ರಜೆಗೆ ರಜೆ ಮತ್ತು ದುಡಿಮೆಗೆ ದುಡಿಮೆ’ಯಲ್ಲಿ ತೊಡಗಿಕೊಳ್ಳಿ, ಭಾಷೆ, ಈಜು, ಚಿತ್ರಕಲೆ ಕಲಿಯಿರಿ, ಪಶು ಪಕ್ಷಿಗಳಿಗೆ ನೀರಿಡಿ ಎಂದು ಕಿವಿಮಾತು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮೇ 1 ಗುಜರಾತ್ ಮತ್ತು ಮಹಾರಾಷ್ಟ್ರದ ಸ್ಥಾಪನಾ ದಿನ, ಆಹಾರ ವ್ಯರ್ಥ ತಡೆಗೆ ಯುವಜನರ ಕಾಳಜಿ ವಹಿಸಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯುವ ಸಮೂಹದ ಬಗ್ಗೆ ಅತೀವ ಕಾಳಜಿ ವ್ಯಕ್ತಪಡಿಸಿರುವ ಮೋದಿ ಅವರು, ‘ಒಮ್ಮೊಮ್ಮೆ ನಮ್ಮ ಯುವ ಪೀಳಿಗೆ ರೊಬೋಟ್‌ನಂತಾಗುತ್ತಿದೆಯೇ? ಯಂತ್ರಗಳಂತೆ ಜೀವನ ನಡೆಸುತ್ತಿದೆಯೇ? ಎಂದು ಯೋಚನೆಯಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮೇ 5ರಂದು ಭಾರತ, ದಕ್ಷಿಣ ಏಷಿಯಾ ಉಪಗ್ರಹ ಉಡಾವಣೆ ನಡೆಯಲಿದೆ ಎಂದು ಹೇಳಿದರು ಮೋದಿ, ಹವಾಮಾನದಲ್ಲಿ ಬಿಸಿಲು ಬಹಳ ಇದೆ, ತಾಳಿಕೊಳ್ಳದ ಸ್ಥಿತಿ ಇದೆ. ನಿಮ್ಮ ಪ್ರೀತಿಪಾತ್ರರ ಬಗ್ಗೆ ಕಾಳಜಿ ವಹಿಸಿ, ನಿಮ್ಮ ಬಗ್ಗೆಯೂ ಕಾಳಜಿ ತೆಗೆದುಕೊಳ್ಳಿ ಎಂದು ಜನರ ಆರೋಗ್ಯ ಕಾಳಜಿಗೆ ಸಲಹೆ ನೀಡಿದ್ದಾರೆ. ಈ ಎಲ್ಲಾ ಅಂಶಗಳನ್ನೊಳಗೊಂಡ ಮೋದಿ ಅವರ ‘ಮನದ ಮಾತು’ಗಳ ಪೂಣರ್ ಸಾರ ಅವರ ನುಡಿಯಲ್ಲಿಯೇ ಇದೆ...

‘ನನ್ನ ಪ್ರೀತಿಯ ದೇಶ ಬಾಂಧವರೇ, ನಮಸ್ಕಾರ. ನನ್ನ ಪ್ರತಿಯೊಂದು ಮನದಾಳದ ಮಾತಿಗೆ ಮುನ್ನ, ಆಕಾಶವಾಣಿ, ನರೇಂದ್ರ ಮೋದಿ ಆಪ್‌, ಮೈ ಗೌಗೆ ದೇಶದ ಮೂಲೆ ಮೂಲೆಗಳಿಂದ, ಎಲ್ಲ ವಯೋಮಾನದವರಿಂದ ದೂರವಾಣಿ ಮೂಲಕ, ಮುದ್ರಿತ ಸಂದೇಶದ ರೂಪದಲ್ಲಿ ಸಾಕಷ್ಟು ಸಲಹೆಗಳು ಬರುತ್ತವೆ. ಕೆಲವೊಮ್ಮೆ ಸಮಯ ಮಾಡಿಕೊಂಡು ಇದೆಲ್ಲವನ್ನೂ ನೋಡಿದಾಗ, ನನಗೆ ತುಂಬಾ ಒಳ್ಳೇ ಅನುಭವ ಆಗುತ್ತದೆ.

‘ಎಷ್ಟೊಂದು ವಿಸ್ತೃತ ಆಯಾಮಗಳಿಂದ ಕೂಡಿದ ಮಾಹಿತಿ ದೊರಕುತ್ತದೆ. ದೇಶದ ಪ್ರತಿಯೊಂದು ಮೂಲೆಯಲ್ಲೂ ಎಷ್ಟೊಂದು ಪ್ರತಿಭಾವಂತ ಜನರಿದ್ದಾರೆ ಎಂಬುದು ಎಲ್ಲರಿಗೂ ವೇದ್ಯವಾಗುತ್ತದೆ. ಸಮಾಜದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುವ ಮತ್ತು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬುವರು ಲೆಕ್ಕವಿಲ್ಲದಷ್ಟು ಜನರಿದ್ದಾರೆ, ಇನ್ನೊಂದೆಡೆ ಬಹುಶಃ ಸರ್ಕಾರದ ದೃಷ್ಟಿಗೂ ಬೀಳದ ಸಮಸ್ಯೆಗಳ ಭಂಡಾರವೇ ಗೋಚರಿಸುತ್ತದೆ. ಬಹುಶಃ ವ್ಯವಸ್ಥೆಯೂ ಇಂಥ ಸಮಸ್ಯೆಗಳೊಂದಿಗೆ ಒಗ್ಗಿಕೊಳ್ಳುತ್ತದೆ. ಜನರೂ ಒಗ್ಗಿಕೊಂಡುಬಿಡುತ್ತಾರೆ. ನಾನು ಮಕ್ಕಳ ಜಿಜ್ಞಾಸೆ, ಯುವಕರ ಮಹತ್ವಾಕಾಂಕ್ಷೆ, ಹಿರಿಯರ ಅನುಭವದ ಸಾರ ಹೀಗೆ, ವಿಭಿನ್ನವಾದ ವಿಷಯಗಳು ಹೊರಹೊಮ್ಮುತ್ತವೆ. ಪ್ರತಿ ಬಾರಿ ಮನದಾಳದ ಮಾತಿಗೆ ಎಷ್ಟು ಸಲಹೆ ಸೂಚನೆಗಳು ಬರುತ್ತವೆಯೋ ಅದೆಲ್ಲವನ್ನೂ ಸರ್ಕಾರದಲ್ಲಿ ವಿಸ್ತೃತವಾಗಿ ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ.

‘ಸಲಹೆಗಳು ಯಾವ ತರಹದ್ದು, ದೂರುಗಳು ಎಂಥಹವು, ಜನರ ಅನುಭವವೇನು?ಸಾಮಾನ್ಯವಾಗಿ ಬೇರೆಯವರಿಗೆ ಸಲಹೆ ಅಥವಾ ಪರಿಹಾರ ನೀಡುವುದು ಪ್ರಕೃತಿ ಸ್ವಭಾವದ ಭಾಗವಾಗಿದೆ. ರೈಲಿನಲ್ಲಿ, ಬಸ್‌ನಲ್ಲಿ ಹೋಗುವಾಗ ಯಾರಾದರೂ ಕೆಮ್ಮಿದರೂ ಸಾಕು ಬೇರೊಬ್ಬರು ಬಂದು ಅದರ ಪರಿಹಾರ ಹೀಗೆ ಎಂಬ ಸಲಹೆ ನೀಡುತ್ತಾರೆ. ಆರಂಭದಲ್ಲಿ ಮನದಾಳದ ಮಾತಿಗೆ ಸಲಹೆಗಳು ಸೂಚನೆಗಳು ಬಂದಾಗ, ಸಲಹೆಗಳು ಶಬ್ದದ ರೂಪದಲ್ಲಿ ಕೇಳಲು ಸಿಕ್ಕಾಗ, ಓದಲು ಸಿಕ್ಕಾಗ ನಮ್ಮ ತಂಡದವರು ಬಹಳಷ್ಟು ಜನರಿಗೆ ಇದೊಂದು ಅಭ್ಯಾಸವೇ ಎಂದುಕೊಂಡಿದ್ದೆವು, ಆದರೆ ಸೂಕ್ಷ್ಮವಾಗಿ ಗಮನಿಸುವ ಪ್ರಯತ್ನ ಮಾಡಿದಾಗ ನಿಜವಾಗಿಯೂ ನಾನು ಭಾವನಾತ್ಮಕತೆಯ ಉತ್ತುಂಗಕ್ಕೇರಿ ಹೋದೆ.

‘ಸಲಹೆ ನೀಡುವವರು, ನನ್ನವರೆಗೆ ತಲುಪುವ ಪ್ರಯತ್ನ ಮಾಡುವವರು ಎಂಥವರು ಅಂದ್ರೆ ಖಂಡಿತ ಅವರು ಜೀವನದಲ್ಲಿ ಏನಾದ್ರೂ ಮಾಡಿಯೇ ಮಾಡುತ್ತಾರೆ. ಏನಾದ್ರೂ ಒಳ್ಳೇದಾಗುವುದಾದರೆ ಅದಕ್ಕಾಗಿ ತಮ್ಮ ಜಾಣ್ಮೆ, ಶಕ್ತಿ, ಸಾಮರ್ಥ್ಯವನ್ನು ಪರಿಸ್ಥಿತಿಗನುಸಾರ ಬಳಸಿ ಪ್ರಯತ್ನಿಸುತ್ತಾರೆ. ನನ್ನ ಅರಿವಿಗೆ ಈ ವಿಷಯಗಳು ಬಂದಾಗ ಈ ಸಲಹೆಗಳು ಅತ್ಯದ್ಭುತ ಎಂದೆನಿಸಿತು. ಇವು ಬದುಕಿನ ಕಾಲಘಟ್ಟದ ಅನುಭವದ ಸಾರವಾಗಿವೆ ಎನಿಸಿತು. ಕೆಲವರು ಸಲಹೆಗಳನ್ನು ಏಕೆ ನೀಡುತ್ತಾರೆಂದರೆ, ಅವರದೇ ವಿಚಾರಗಳು ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೋ ಅಲ್ಲಿಯ ವಿಚಾರಗಳನ್ನು ವಿಸ್ತೃತ ವೇದಿಕೆಯಲ್ಲಿ ಹೆಚ್ಚಿನ ಜನರು ಕೇಳಿದರೆ ಅದಕ್ಕೆ ಒಂದು ವ್ಯಾಪಕ ರೂಪ ದೊರೆತು ಬಹಳಷ್ಟು ಜನರಿಗೆ ಅದರ ಭಾಗವಾಗಬಹುದು ಎಂದು ಯೋಚಿಸುತ್ತಾರೆ. ಅದಕ್ಕಾಗಿಯೇ ಮನದಾಳದ ಮಾತಿನಲ್ಲಿ ಈ ವಿಷಯ ಪ್ರಸ್ತಾಪವಾದರೆ ಹೇಗೆ ಎಂಬುದು ಅವರ ಸಹಜ ಆಸೆ ಆಗಿರುತ್ತದೆ. ಇವೆಲ್ಲ ಮಾತುಗಳು ನನ್ನ ದೃಷ್ಟಿಯಲ್ಲಿ ಬಹಳ ಸಕಾರಾತ್ಮಕವಾದವು. ನಾನು ಎಲ್ಲಕ್ಕಿಂತ ಮೊದಲು ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತವುಳ್ಳ ಹೆಚ್ಚಿನ ಸಂಖ್ಯೆಯಲ್ಲಿ ಬಂದ, ಕರ್ಮಯೋಗಿಗಳ ಸಲಹೆಗಳಿಗಾಗಿ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ. ಇಷ್ಟೇ ಅಲ್ಲ,ನಾನು ಯಾವುದೇ ವಿಷಯವನ್ನು ಉಲ್ಲೇಖಿಸಿದಾಗ ಎಂತೆಂತಹ ವಿಷಯಗಳು ನೆನಪಿಗೆ ಬರುತ್ತವೆ ಎಂದರೆ ಬಹಳ ಆನಂದವೆನಿಸುತ್ತದೆ.

ಆಹಾರ ವ್ಯರ್ಥ ತಡೆಗೆ ಯುವಜನರ ಕಾಳಜಿ
‘ಕಳೆದ ಬಾರಿ ಮನದಾಳದ ಮಾತಿನಲ್ಲಿ ಕೆಲವರು ಆಹಾರ ವ್ಯರ್ಥವಾಗುತ್ತಿರುವುದರ ಬಗ್ಗೆ ಕಾಳಜಿವಹಿಸಿ ನನಗೆ ಸಲಹೆ ನೀಡಿದ್ದರು, ನಾನು ಅದನ್ನು ಉಲ್ಲೇಖಿಸಿದ್ದೆ. ನಾನು ಈ ವಿಷಯ ಪ್ರಸ್ತಾಪಿಸಿದ ಮೇಲೆ ನರೇಂದ್ರ ಮೋದಿ ಆಪ್‌ನಲ್ಲಿ, ಮೈ ಗೌ ನಲ್ಲಿ ದೇಶದ ಮೂಲೆ ಮೂಲೆಗಳಿಂದ ಸಾಕಷ್ಟು ಮಂದಿ, ಆಹಾರ ವ್ಯರ್ಥ ಆಗದಂತೆ ಹಲವು ನಾವಿನ್ಯಮಯ ಯೋಜನೆಗಳನ್ನು ಪ್ರಯೋಗಗಳನ್ನು ಜಾರಿಗೆ ತಂದಿರುವುದಾಗಿ ತಿಳಿಸಿದ್ದಾರೆ. ಇಂದು ನಮ್ಮ ದೇಶದಲ್ಲಿ, ವಿಶೇಷವಾಗಿ ಯುವಜನ, ಎಷ್ಟೋ ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿದ್ದಾರೆ ಎಂದು ನಾನು ಯೋಚಿಸಿಯೂ ಇರಲಿಲ್ಲ. ಕೆಲ ಸಾಮಾಜಿಕ ಸಂಘಟನೆಗಳು ಎಷ್ಟೋ ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿವೆ ಎಂದು ನಮಗೆಲ್ಲ ತಿಳಿದಿದೆ. ಆದರೆ, ನಮ್ಮ ದೇಶದ ಯುವಜನ ಇದರಲ್ಲಿ ತೊಡಗಿದೆ ಎಂಬುದು ನನಗೆ ಈಗ ತಿಳಿದುಬಂತು. ನನಗೆ ಹಲವು ಜನರು ವಿಡಿಯೋಗಳನ್ನು ಕಳಿಸಿದ್ದಾರೆ. ಎಷ್ಟೋ ಸ್ಥಳಗಳಲ್ಲಿ ರೋಟಿ ಬ್ಯಾಂಕ್‌ಗಳನ್ನು ತೆರೆಯಲಾಗಿದೆ. ಜನರು ರೋಟಿ ಬ್ಯಾಂಕ್‌ಗಳಲ್ಲಿ ತಮ್ಮ ಮನೆಯಲ್ಲಿ ಉಳಿದ ರೊಟ್ಟಿ, ಪಲ್ಯ ಜಮಾ ಮಾಡುತ್ತಾರೆ. ಅವಶ್ಯಕತೆಯಿರುವವರು ಅಲ್ಲಿಂದ ಅದನ್ನು ಪಡೆದುಕೊಳ್ಳುತ್ತಾರೆ. ಕೊಡುವವರಿಗೂ ಸಂತೋಷವಾಗುತ್ತದೆ. ಪಡೆಯುವವರಿಗೂ ಕೀಳರಿಮೆ ಇರುವುದಿಲ್ಲ. ಸಮಾಜದ ಸಹಯೋಗದೊಂದಿಗೆ ಎಂತೆಂಥಹ ಕೆಲಸಗಳು ಆಗುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ ಮಾತ್ರ.

ಮೇ 1 ಗುಜರಾತ್ ಮತ್ತು ಮಹಾರಾಷ್ಟ್ರದ ಸ್ಥಾಪನಾ ದಿನ
‘ಇಂದು ಏಪ್ರಿಲ್ ತಿಂಗಳು ಮುಗಿಯುತ್ತಾ ಇದೆ. ಇಂದೇ ಕೊನಯ ದಿನವಾಗಿದೆ. ಮೇ 1 ಗುಜರಾತ್ ಮತ್ತು ಮಹಾರಾಷ್ಟ್ರದ ಸ್ಥಾಪನಾ ದಿನವೂ ಆಗಿದೆ. ಈ ಸಂದರ್ಭದಲ್ಲಿ ಎರಡೂ ರಾಜ್ಯದ ಜನರಿಗೆ ನನ್ನ ಪರವಾಗಿ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಎರಡೂ ರಾಜ್ಯಗಳು ಅಭಿವೃದ್ಧಿಯ ಹೊಸ ಎತ್ತರ ತಲುಪಿವ ಮತ್ತು ದೇಶದ ಅಭಿವೃದ್ಧಿಯಲ್ಲಿ ತಮ್ಮ ಕಾಣಿಕೆ ಸಲ್ಲಿಸುತ್ತಿವೆ. ಅಲ್ಲದೇ ಎರಡೂ ರಾಜ್ಯಗಳಲ್ಲಿನ ಮಹಾಪುರುಷರ ನಿರಂತರ ಪರಿಶ್ರಮ, ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ, ಅವರ ಜೀವನ ನಮಗೆ ಪ್ರೇರಣಾದಾಯಕವಾಗಿದೆ. ರಾಜ್ಯದ ಸ್ಥಾಪನಾ ದಿನದಂದು ಈ ಮಹಾಪುರುಷರನ್ನು ನೆನೆಯುತ್ತಾ, 2022ರಲ್ಲಿ, ಸ್ವಾತಂತ್ರ್ಯದ 75ನೇ ವರ್ಷದಲ್ಲಿ, ನಾವು ನಮ್ಮ ರಾಜ್ಯವನ್ನು, ನಮ್ಮ ದೇಶವನ್ನು, ನಮ್ಮ ಸಮಾಜವನ್ನು, ನಮ್ಮ ನಗರವನ್ನು ನಮ್ಮ ಕುಟುಂಬವನ್ನು ಯಾವ ಹಂತಕ್ಕೆ ಕೊಂಡೊಯ್ಯುತ್ತೇವೆ ಎಂಬ ಬಗ್ಗೆ ಸಂಕಲ್ಪ ಮಾಡಬೇಕಾಗಿದೆ. ಆ ಸಂಕಲ್ಪವನ್ನು ಸಾಧಿಸಲು ಯೋಜನೆಯನ್ನೂ ರೂಪಿಸಬೇಕಿದೆ ಮತ್ತು ಎಲ್ಲ ನಾಗರಿಕರ ಸಹಯೋಗದೊಂದಿಗೆ ಮುನ್ನಡೆಯಬೇಕಿದೆ. ನನ್ನ ಪರವಾಗಿ ಈ ಎರಡೂ ರಾಜ್ಯಗಳಿಗೆ ಅನಂತ ಅನಂತ ಶುಭಾಶಯಗಳು.

ಪಶು ಪಕ್ಷಿಗಳಿಗೆ ನೀರಿಡಿ
‘ಹವಾಮಾನ ಬದಲಾವಣೆ ಎಂಬುದು ಒಂದು ಕಾಲದಲ್ಲಿ ‘ಕಲಿಕಾ ಜಗತ್ತಿನ’ ವಿಷಯವಾಗಿತ್ತು, ವಿಚಾರ ಸಂಕಿರಣಗಳ ವಸ್ತುವಾಗಿತ್ತು. ಆದರೆ, ಇಂದು ನಮ್ಮ ನಿತ್ಯ ಜೀವನದಲ್ಲಿ ನಾವಿದನ್ನು ಅನುಭವಿಸುತ್ತಿದ್ದೇವೆ ಮತ್ತು ಆಶ್ಚರ್ಯಪಡುತ್ತಿದ್ದೇವೆ. ನಿಸರ್ಗವೂ ತನ್ನ ಆಟದ ನಿಯಮಗಳನ್ನು ಬದಲಿಸಿಬಿಟ್ಟಿದೆ. ನಮ್ಮ ದೇಶದಲ್ಲಿ ಮೇ- ಜೂನ್‌ನಲ್ಲಿ ಇರಬೇಕಿದ್ದ ಬಿಸಿಲಿನ ತಾಪ ಮಾರ್ಚ್-ಏಪ್ರಿಲ್ ನಲ್ಲೇ ಅನುಭವಿಸುವ ಪರಿಸ್ಥಿತಿ ಬಂದಿದೆ. ಮನದಾಳದ ಮಾತಿಗಾಗಿ ನಾನು ಜನರಿಂದ ಸಲಹೆಗಳನ್ನು ಪಡೆಯುತ್ತಿದ್ದಾಗ ಬಹಳಷ್ಟು ಜನರು ಈ ಬೇಸಿಗೆ ಸಮಯದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಸಲಹೆ ಕಳುಹಿಸಿದ್ದಾರೆ. ಹಾಗೆ ನೋಡಿದರೆ ಎಲ್ಲ ವಿಷಯಗಳೂ ಪ್ರಚಲಿತವಾಗಿವೆ. ಹೊಸದೇನೂ ಅಲ್ಲ. ಆದರೂ ಆಯಾ ಕಾಲ ಕಾಲಕ್ಕೆ ಅದನ್ನು ನೆನಪಿಸಿಕೊಂಡಾಗ ಬಹಳ ಉಪಯುಕ್ತವಾಗಿರುತ್ತವೆ. ಶ್ರೀ. ಪ್ರಶಾಂತ ಕುಮಾರ್ ಮಿಶ್ರಾ, ಟಿ ಎಸ್ ಕಾರ್ತಿಕ್ ಹಾಗೂ ಅನೇಕ ಅಂಥ ಮಿತ್ರರು ಪಕ್ಷಿಗಳ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಛಾವಣಿಯಲ್ಲಿ, ಮಾಳಿಗೆ ಮೇಲೆ ಪಕ್ಷಿಗಳಿಗೆ ನೀರು ಇಡಬೇಕು ಎಂದು ಅವರು ಹೇಳಿದ್ದಾರೆ. ಮನೆಯ ಪುಟ್ಟ ಮಕ್ಕಳು ಈ ಕೆಲಸವನ್ನು ತುಂಬಾ ಚೆನ್ನಾಗಿ ಮಾಡುತ್ತಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ಒಮ್ಮೆ ಅವರ ಮನಸ್ಸಿಗೆ ಮಹಡಿ ಮೇಲೆ ನೀರು ತುಂಬಿಡಬೇಕು ಎಂಬ ವಿಚಾರ ಬಂದರೆ ಸಾಕು, ತಾವು ಇಟ್ಟ ತಟ್ಟೆಯಲ್ಲಿ ನೀರಿದೆಯೋ ಇಲ್ಲವೋ ಎಂದು ನೋಡಲು ಹತ್ತು ಬಾರಿ ಹತ್ತಿ ಇಳಿಯುತ್ತಾರೆ. ಪಕ್ಷಿಗಳು ಬಂದವೋ ಇಲ್ಲವೋ ಎಂದು ನೋಡುತ್ತಿರುತ್ತಾರೆ. ನಮಗದು ಆಟ ಅನ್ನಿಸಬಹುದು ಆದರೆ ನಿಜ ಅರ್ಥದಲ್ಲಿ ಇದು ಮಕ್ಕಳ ಮನಸ್ಸಿನಲ್ಲಿ ಸಂವೇದನೆಯನ್ನುಂಟುಮಾಡುವ ಒಂದು ಅದ್ಭುತ ಅನುಭವವಾಗಿದೆ. ನೀವೂ ಪ್ರಯತ್ನಿಸಿ ನೋಡಿ, ಪಶು ಪಕ್ಷಿಗಳೊಂದಿಗೆ ಕೊಂಚ ಒಡನಾಟವಿದ್ದರೂ ಒಂದು ಹೊಸ ಆನಂದದ ಅನುಭವ ನೀಡುತ್ತದೆ.

ಗುಬ್ಬಚ್ಚಿಗಳನ್ನು ಉಳಿಸಿ
‘ಕೆಲ ದಿನಗಳ ಹಿಂದೆ ಗುಜರಾತ್‌ನ ಜಗತ್ ಬಾಯ್ ಎಂಬುವವರು ತಮ್ಮ ‘Save The Sparrows’ (ಗುಬ್ಬಚ್ಚಿಗಳನ್ನು ಉಳಿಸಿ)ಎಂಬ ಒಂದು ಪುಸ್ತಕ ನನಗೆ ಕಳುಹಿಸಿದ್ದರು, ಮತ್ತು ಅದರಲ್ಲಿ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಜೊತೆಗೆ ತಾವು ಸ್ವತಃ ಆಂದೋಲನದ ರೂಪದಲ್ಲಿ ಏನೇನು ಪ್ರಯೋಗಗಳನ್ನು ಮಾಡಿದರು, ಏನೇನು ಪ್ರಯತ್ನ ಮಾಡಿದರು ಎಂಬ ಬಗ್ಗೆ ಆ ಪುಸ್ತಕದಲ್ಲಿ ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ. ಒಂದು ರೀತಿಯಲ್ಲಿ ನಮ್ಮ ದೇಶದಲ್ಲಿ ನಾವೆಲ್ಲ ಪಶು ಪಕ್ಷಿ, ಪ್ರಕೃತಿಯೊಂದಿಗೆ ಸಹಜೀವನ ನಡೆಸುತ್ತಾ ಅದರಲ್ಲಿ ಬೆರೆತು ಹೋಗಿದ್ದೇವೆ. ಆದರೂ, ಸಂಘಟಿತವಾಗಿ ಇಂಥಹ ಪ್ರಯತ್ನಗಳಲ್ಲಿ ಕೈ ಜೋಡಿಸುವುದು ಅವಶ್ಯಕವಾಗಿದೆ.
‘ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ದಾವೂದಿ ಬೊಹರಾ ಸಮಾಜದ ಧರ್ಮಗುರು ಸೈಯ್ಯದನಾ ಸಾಹಿಬ್ ಅವರಿಗೆ ನೂರು ವರ್ಷ ತುಂಬಿತ್ತು. ಅವರು 103 ವರ್ಷಗಳವರೆಗೆ ಜೀವಿಸಿದರು. ಅವರು ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಬೊಹರಾ ಸಮಾಜದವರು ಬುರ‍್ಹಾನಿ ಪ್ರತಿಷ್ಠಾನದ ಮುಖಾಂತರ ಗುಬ್ಬಚ್ಚಿಗಳನ್ನು ಉಳಿಸಲು ಒಂದು ದೊಡ್ಡ ಅಭಿಯಾನವನ್ನೇ ಕೈಗೊಂಡಿತ್ತು. ಅದರ ಶುಭಾರಂಭ ಮಾಡುವ ಭಾಗ್ಯ ನನಗೆ ದೊರೆತಿತ್ತು. ವಿಶ್ವದ ಮೂಲೆ ಮೂಲೆಯಲ್ಲಿ ಹಕ್ಕಿಗಳಿಗೆ ಕಾಳು ಹಾಕುವ ಸುಮಾರು 52 ಸಾವಿರ ಮಂದಿಗೆ ಇದನ್ನು ವಿತರಿಸಿದ್ದರು. ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲೂ ಅದಕ್ಕೆ ಸ್ಥಾನ ದೊರಕಿತ್ತು.

‘ಕೆಲವೊಮ್ಮೆ ನಾವು ಎಷ್ಟು ಕೆಲಸಕಾರ್ಯದಲ್ಲಿ ತಲ್ಲೀನರಾಗಿರುತ್ತೇವೆ ಎಂದರೆ, ನಮ್ಮ ಮನೆ ಬಾಗಿಲಿಗೆ ಬರುವ ಪೇಪರ್ ಹಾಕುವವರಿಗೆ, ಹಾಲಿನವರಿಗೆ, ತರಕಾರಿ ಮಾರುವವರಿಗೆ,ಅಂಚೆ ಪೇದೆ ಯಾರೇ ಆಗಿರಲಿ ಅವರಿಗೆ ಬೇಸಿಗೆಯ ಈ ಕಾಲದಲ್ಲಿ ನೀರನ್ನಾದರೂ ಕೇಳಬೇಕೆಂಬುದನ್ನು ಮರೆತೇ ಹೋಗುತ್ತೇವೆ.

‘ಯುವ ಮಿತರ್ರೇ, ನಾನು ನಿಮ್ಮೊಂದಿಗೂ ಕೆಲ ಮಾತುಗಳನ್ನು ಆಡಬಯಸುತ್ತೇನೆ. ಕೆಲವೊಮ್ಮೆ ನಮ್ಮ ಯುವಪೀಳಿಗೆ ತನ್ನ ಆರಾಮದಾಯಕ ಸೂಕ್ತ ನೆಲೆ comfort zoneಯಲ್ಲಿ ಜೀವನ ಕಳೆದುಬಿಡುವುದರಲ್ಲಿ ಆನಂದಿಸುತ್ತದೆಯೇ ಎಂಬ ಬಗ್ಗೆ ನನಗೆ ಚಿಂತೆಯೆನಿಸುತ್ತದೆ. ಪಾಲಕರೂ ಸಹ ಮಕ್ಕಳನ್ನು ಸುರಕ್ಷತೆಯಿಂದ ಅವರನ್ನು ಬೆಳೆಸುತ್ತಾರೆ. ಕೆಲವರು ಇನ್ನೊಂದು ಬಗೆಯ ಅತಿರೇಕದಲ್ಲಿರುತ್ತಾರೆ. ಆದರೆ ಹೆಚ್ಚಿನವರು comfort zoneಸಿಂಡ್ರೋಮ್‌ನಲ್ಲೇ ಕಾಣಸಿಗುತ್ತಾರೆ. ಈಗ ಪರೀಕ್ಷೆಗಳು ಮುಗಿದಿವೆ. ರಜೆಯ ಮಜ ಅನುಭವಿಸಲು ಯೋಜನೆಗಳನ್ನು ರೂಪಿಸಿದ್ದಾಗಿರಬಹುದು.

‘ಬೇಸಿಗೆ ರಜೆ ಬಿಸಿಲಿನ ಬೇಗೆಯ ನಡುವೆಯೂ ಆನಂದವಾಗಿರುತ್ತದೆ. ಆದರೆ, ನಾನೊಬ್ಬ ಸ್ನೇಹಿತನ ರೂಪದಲ್ಲಿ ನಿಮ್ಮ ರಜೆ ಹೇಗೆ ಕಳೆಯಬೇಕು ಎಂಬ ಬಗ್ಗೆ ಕೆಲವೊಂದು ವಿಚಾರ ತಿಳಿಸಬಯಸುತ್ತೇನೆ. ಕೆಲವರು ಖಂಡಿತ ಅದನ್ನು ಮಾಡುತ್ತಾರೆ ಮತ್ತು ನನಗೂ ತಿಳಿಸುತ್ತಾರೆ ಎಂಬ ವಿಶ್ವಾಸವಿದೆ. ನೀವು ರಜೆಯ ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ನಾನು ಮೂರು ಸಲಹೆಗಳನ್ನು ನೀಡಲಿಚ್ಛಿಸುತ್ತೇನೆ. ಮೂರನ್ನೂ ಪಾಲಿಸಿದರೆ ತುಂಬಾ ಒಳ್ಳೇದು. ಆದರೆ ಮೂರರಲ್ಲಿ ಒಂದನ್ನಾದರೂ ಮಾಡುವ ಪ್ರಯತ್ನ ಮಾಡಿ. ಹೊಸ ಅನುಭವಪಡೆಯುವ ಪ್ರಯತ್ನ ಮಾಡಿ, ಹೊಸ ಕೌಶಲ್ಯ ರೂಢಿಸಿಕೊಳ್ಳುವ ಪ್ರಯತ್ನ ಮಾಡಿ, ಯಾವುದರ ಬಗ್ಗೆ ನೀವು ಕೇಳಿಲ್ಲವೋ, ನೋಡಿಲ್ಲ, ಆಲೋಚಿಸಿಲ್ಲವೋ, ತಿಳಿದಿಲ್ಲವೋ ಅಂಥ ಕಡೆಗೆ ಹೋಗುವ ಮನಸ್ಸಾಗುತ್ತದೆ, ಅಲ್ಲಿಗೆ ಹೋಗಿ. ಹೊಸ ಜಾಗ, ಹೊಸ ಅನುಭವ, ಹೊಸ ಕೌಶಲ್ಯ ಪಡೆಯಿರಿ.

‘ಎಷ್ಟೋ ಸಾರಿ ಯಾವುದನ್ನೋ ಟಿ ವಿ ಯಲ್ಲಿ ನೋಡುವುದಕ್ಕೂ, ಪುಸ್ತಕದಲ್ಲಿ ಓದುವುದಕ್ಕೂ,ಪರಿಚಿತರಿಂದ ಕೇಳುವುದಕ್ಕೂ, ಸ್ವತಃ ಅದನ್ನು ನೋಡಿ ಅನುಭವಿಸುವುದಕ್ಕೂ ಆಕಾಶ - ಭೂಮಿಯಷ್ಟು ವ್ಯತ್ಯಾಸವಿರುತ್ತದೆ. ಈ ರಜೆ ದಿನಗಳಲ್ಲಿ ನಿಮಗೆ ಯಾವುದರ ಬಗ್ಗೆ ಆಸಕ್ತಿ ಇದೆಯೋ ಅದನ್ನು ತಿಳಿಯುವ ಪ್ರಯತ್ನ ಮಾಡಿ, ಹೊಸ ಪ್ರಯೋಗಗಳನ್ನು ಮಾಡಿ,ಪ್ರಯೋಗ ಸಕಾರಾತ್ಮಕವಾಗಿರಲಿ, comfort zoneನಿಂದ ಹೊರ ಬರುವಂಥದ್ದಾಗಿರಲಿ ಎಂದು ನಾನು ಆಗ್ರಹಿಸುತ್ತೇನೆ. ನಾವು ಮಧ್ಯಮ ವರ್ಗದ ಕುಟುಂಬದವರಾಗಿದ್ದೇವೆ, ಸುಖೀ ಪರಿವಾರದವರಾಗಿದ್ದೇವೆ. ಎಂದಾದರೂ ರಿಸರ್ವೇಶನ್ ಇಲ್ಲದೇ ಸೆಕೆಂಡ್ ಕ್ಲಾಸ್ ಟಿಕೆಟ್ ಪಡೆದು ರೈಲಿನಲ್ಲಿ ಹತ್ತಿ ಬಿಡಬೇಕು, ಕಡಿಮೆ ಅಂದರೂ 24ಗಂಟೆ ಪ್ರವಾಸ ಮಾಡಬೇಕು ಎಂದೆನಿಸುವುದಿಲ್ಲವೇ? ನೀವು ಏನು ಅನುಭವಿಸುತ್ತೀರಿ. ಸಹ ಪ್ರಯಾಣಿಕರ ಮಾತುಗಳೇನಿರುತ್ತವೆ, ಅವರು ಸ್ಟೇಶನ್‌ನಲ್ಲಿ ಇಳಿದು ಏನು ಮಾಡುತ್ತಾರೆ, ಬಹುಶಃ ವರ್ಷಪೂರ್ತಿ ಕಲಿಯಲು ಆಗದ್ದನ್ನು ಈ 24 ಗಂಟೆಗಳ ರಿಸರ್ವೇಶನ್‌ ರಹಿತ ಸದ್ದುಗದ್ದಲದಿಂದ ತುಂಬಿದ, ಮಲಗಲೂ ಆಗದಿರುವಂತಹ, ನಿಂತೇ ಪ್ರಯಾಣಿಸುವ ಆ ಅದ್ಭುತ ಅನುಭವ ಪಡೆಯಿರಿ. ಮತ್ತೆ ಮತ್ತೆ ಈ ಪ್ರಯೋಗ ಮಾಡಿ ಎಂದು ನಾನು ಹೇಳುವುದಿಲ್ಲ. ಆದರೆ ಒಮ್ಮೆಯಾದರೂ ಪ್ರಯತ್ನಿಸಿ. ಸಂಜೆ ಹೊತ್ತಲ್ಲಿ ನಿಮ್ಮ ಫುಟ್‌ಬಾಲ್ ತೆಗೆದುಕೊಂಡು, ವಾಲಿಬಾಲ್ ತೆಗೆದುಕೊಂಡು ಇಲ್ಲವೇ ಯಾವುದೇ ಆಟದ ವಸ್ತುವನ್ನು ತೆಗೆದುಕೊಂಡು ಹತ್ತಿರದ ಬಡವರ ಮತ್ತು ಸೌಲಭ್ಯ ವಂಚಿತರ ಕಾಲೋನಿಗಳಿಗೆ ಹೋಗಿ. ಆ ಬಡ ಮಕ್ಕಳೊಂದಿಗೆ ಆಟ ಆಡಿ. ಆಗ ನೋಡಿ ಹಿಂದೆಂದೂ ಆಟದಲ್ಲಿ ಇಂಥ ಆನಂದ ನಿಮಗೆ ದೊರೆತಿರಲಿಕ್ಕಿಲ್ಲ, ಹಾಗನ್ನಿಸುತ್ತದೆ!.

‘ಸಮಾಜದಲ್ಲಿ ಹೀಗೆ ಜೀವನ ಸವೆಸುವ ಮಕ್ಕಳಿಗೆ ನಿಮ್ಮೊಂದಿಗೆ ಆಡುವ ಅವಕಾಶ ಸಿಕ್ಕಾಗ ಅವರ ಜೀವನದಲ್ಲಿ ಎಷ್ಟು ದೊಡ್ಡ ಬದಲಾವಣೆ ಬರುತ್ತದೆ ಎಂದು ಯೋಚಿಸಿದ್ದೀರಾ? ನೀವು ಒಮ್ಮೆ ಹೋಗುತ್ತೀರೆಂದು ನಾನು ಆಶಿಸುತ್ತೇನೆ, ನಿಮಗೆ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ. ಈ ಅನುಭವ ನಿಮಗೆ ಬಹಳಷ್ಟು ಪಾಠ ಕಲಿಸಲಿದೆ. ಎಷ್ಟೋ ಸ್ವಯಂ ಸೇವಾ ಸಂಘಗಳು ಸೇವಾ ಕಾರ್ಯಗಳನ್ನು ಮಾಡುತ್ತವೆ. ನೀವಂತೂ ಗೂಗಲ್ ಗುರು ಸಂಪರ್ಕ ಹೊಂದಿದವರಾಗಿದ್ದೀರಿ. ಅದರಲ್ಲಿ ಹುಡುಕಿ. ಇಂಥ ಯಾವುದೇ ಒಂದು ಸಂಘಟನೆ ಜೊತೆ 15-20 ದಿನ ಸಂಪರ್ಕ ಇಟ್ಟುಕೊಳ್ಳಿ, ಹೊರಟು ಬಿಡಿ. ಯಾವುದೋ ಕಾಡಿಗೆ ನಡೆದುಬಿಡಿ... ಕೆಲವೊಮ್ಮೆ ಬಹಳಷ್ಟು ಬೇಸಿಗೆ ಶಿಬಿರಗಳು ನಡೆಯುತ್ತವೆ. ವ್ಯಕ್ತಿತ್ವ ವಿಕಸನ ಶಿಬಿರಗಳು ನಡೆಯುತ್ತವೆ. ಎಷ್ಟೋ ವಿಕಾಸದ ಮಾರ್ಗಗಳಿರುತ್ತವೆ. ಅದರಲ್ಲಿ ಪಾಲ್ಗೊಳ್ಳಿ.

ಯುವ ಪೀಳಿಗೆ ರೊಬೋಟ್‌ನಂತಾಗುತ್ತಿದೆಯೇ?
‘ಆದರೆ ಅದರ ಜೊತೆಗೆ, ಒಮ್ಮೊಮ್ಮೆ ನೀವೇನು ಬೇಸಿಗೆ ಶಿಬಿರ, ವ್ಯಕ್ತಿತ್ವ ವಿಕಸನ ಕೋರ್ಸ್ ಮಾಡಿದ್ದೀರೋ, ಅದನ್ನು ನೀವು ಹಣ ಪಡೆಯದೇ ಇಂಥ ಅವಕಾಶ ದೊರೆಯದ ಸಮಾಜದ ಜನರ ಬಳಿ ತೆರಳಿ ಅವರಿಗೆ ಹೇಳಿಕೊಡಿ. ಇದು ಹೇಗೆ ಮಾಡಲು ಸಾಧ್ಯ? ನೀವು ಅವರಿಗೆ ಕಲಿಸಬಹುದು. ತಂತ್ರಜ್ಞಾನ ಅಂತರವನ್ನು ತಗ್ಗಿಸಲು ಬಂದಿದೆ, ತಂತ್ರಜ್ಞಾನ ಗಡಿಗಳನ್ನು ತೊಡೆದುಹಾಕಲು ಬಂದಿದೆ. ಆದರೆ, ಇದರ ದುಷ್ಪರಿಣಾಮ ಹೇಗೆ ಆಗುತ್ತಿದೆ ಎಂದರೆ ಒಂದೇ ಮನೆಯಲ್ಲಿ, ಆರು ಜನ ಒಂದೇ ಕೋಣೆಯಲ್ಲಿ ಕುಳಿತಿದ್ದಾರೆ. ಆದರೆ, ನಮ್ಮ ಕಲ್ಪನೆಗೂ ಮೀರದಷ್ಟು ಅವರ ಮಧ್ಯೆ ಅಂತರವಿದೆ. ಯಾಕೆ? ಎಂಬುದು ನನ್ನ ಚಿಂತೆಯಾಗಿದೆ. ಪ್ರತಿಯೊಬ್ಬರೂ ತಂತ್ರಜ್ಞಾನದಿಂದಾಗಿ ಒಂದೆಡೆ ತೊಡಗಿರುತ್ತಾರೆ. ಸಾಮೂಹಿಕತೆಯೂ ಒಂದು ಆಚರಣೆಯಾಗಿದೆ. ಸಾಮೂಹಿಕತೆ ಎಂಬುದು ಒಂದು ಶಕ್ತಿಯಾಗಿದೆ. ಇನ್ನೊಂದು ನಾನು ಹೇಳಿದ್ದು ಕೌಶಲ್ಯ. ನಿಮಗೆ ಏನಾದ್ರೂ ಹೊಸದನ್ನು ಕಲಿಯಬೇಕೆಂದಿನ್ನಿಸುವುದಿಲ್ಲವೇ? ಇದು ಸ್ಪರ್ಧಾತ್ಮಕ ಯುಗ. ಪರೀಕ್ಷೆಗಳಲ್ಲಿ ಎಷ್ಟು ಮುಳುಗಿಹೋಗಿರುತ್ತೇವೆ. ಹೆಚ್ಚೆಚ್ಚು ಅಂಕ ಗಳಿಸಲೆಂದು ಸವೆದು ಹೋಗುತ್ತೇವೆ. ಕಳೆದು ಹೋಗುತ್ತೇವೆ, ರಜೆಯಲ್ಲೂ ಒಂದಲ್ಲ ಒಂದು ತರಬೇತಿ ತರಗತಿ ನಡೆದೇ ಇರುತ್ತದೆ. ಮುಂದಿನ ಪರೀಕ್ಷೆ ಚಿಂತೆ ಕಾಡುತ್ತಿರುತ್ತದೆ. ಒಮ್ಮೊಮ್ಮೆ ನಮ್ಮ ಯುವ ಪೀಳಿಗೆ ರೊಬೋಟ್‌ನಂತಾಗುತ್ತಿದೆಯೇ? ಯಂತ್ರಗಳಂತೆ ಜೀವನ ನಡೆಸುತ್ತಿದೆಯೇ? ಎಂದು ಯೋಚನೆಯಾಗುತ್ತದೆ.

ಭಾಷೆ, ಈಜು, ಚಿತ್ರಕಲೆ ಕಲಿಯಿರಿ
‘ಸ್ನೇಹಿತರೇ, ಜೀವನದಲ್ಲಿ ತುಂಬಾ ಸಾಧಿಸಬೇಕೆಂಬ ಆಸೆ ಒಳ್ಳೆಯದು. ಏನಾದರೂ ಮಾಡಬೇಕೆಂಬ ಗುರಿ ಒಳ್ಳೆಯದು. ಅಲ್ಲದೇ ಅದನ್ನು ಮಾಡಲೂ ಬೇಕು. ಆದರೆ ನಿಮ್ಮಲ್ಲಿರುವ ಮಾನವೀಯ ಮೌಲ್ಯಗಳು ಗೌಣವಾಗುತ್ತಿಲ್ಲ, ನಾವು ಮಾನವ ಸಹಜ ಗುಣಗಳಿಂದ ದೂರವಾಗುತ್ತಿಲ್ಲವೇ ಎಂಬುದನ್ನು ಗಮನಿಸಿ.

‘ಕೌಶಲಾಭಿವೃದ್ಧಿಯಲ್ಲಿ ಈ ವಿಚಾರದತ್ತ ಕೂಡ ಬೆಳಕು ಚೆಲ್ಲಬಹುದಲ್ಲವೇ? ತಂತ್ರಜ್ಞಾನದಿಂದ ದೂರವಿದ್ದು, ನಿಮಗಾಗಿ ಸಮಯ ಕಳೆಯುವ ಪ್ರಯತ್ನ ಮಾಡಿ. ಸಂಗೀತ ವಾದ್ಯ ಕಲಿಯುವುದಾಗಲಿ, ತಮಿಳು, ತೆಲುಗು, ಅಸ್ಸಾಂ, ಬಾಂಗ್ಲಾ, ಮಲಯಾಳಂ, ಗುಜರಾತಿ, ಮರಾಠಿ, ಪಂಜಾಬಿ ಯಾವುದೇ ಹೊಸ ಭಾಷೆಯ ಕೆಲವು ವಾಕ್ಯಗಳನ್ನು ಕಲಿಯಿರಿ. ಎಷ್ಟೊಂದು ವಿವಿಧತೆಯಿಂದ ಕೂಡಿದ ದೇಶ ನಮ್ಮದು. ನೀವು ಪ್ರಯತ್ನಿಸಿದರೆ ನಮ್ಮ ನೆರೆ ಹೊರೆಯಲ್ಲೇ ಯಾರಾದರೂ ಕಲಿಸುವವರು ಸಿಕ್ಕೇ ಸಿಗುತ್ತಾರೆ. ಈಜಲು ಬರುವುದಿಲ್ಲ ಎಂದಾದರೆ ಈಜು ಕಲಿಯಿರಿ, ಡ್ರಾಯಿಂಗ್ ಮಾಡಿ, ಉತ್ತಮವಾದ ಚಿತ್ರ ಮೂಡಿ ಬರದಿದ್ದರೂ ಕಾಗದದ ಮೇಲೆ ಕೈಯಿಟ್ಟು ಏನೋ ಬರೆಯುವ ಪ್ರಯತ್ನವಂತೂ ಮಾಡಿ.

‘ನಿಮ್ಮಲ್ಲಿರುವ ಸಂವೇದನೆ ಪ್ರಕಟಗೊಳ್ಳಲಾರಂಭಿಸುತ್ತದೆ. ಒಮ್ಮೊಮ್ಮೆ ಯಾವುದನ್ನು ನಾವು ಚಿಕ್ಕ ಪುಟ್ಟ ಕೆಲಸಗಳು ಎಂದು ಪರಿಗಣಿಸುತ್ತೇವೆಯೋ, ಅವುಗಳನ್ನು ಮಾಡಬೇಕೆಂದೆನಿಸಿದಲ್ಲಿ ಮಾಡಿ. ನಿಮಗೆ ಕಾರ್ ಡ್ರೈವಿಂಗ್ ಕಲಿಯಬೇಕೆನ್ನಿಸುತ್ತದೆ. ಎಂದಾದರೂ ಆಟೋ ರಿಕ್ಷಾ ಓಡಿಸಬೇಕು ಎನ್ನಿಸುತ್ತದೆಯೇ? ನಿಮಗೆ ಸೈಕಲ್ ಓಡಿಸಲು ಬರುತ್ತಿರಬಹುದು. ಆದರೆ ಜನರನ್ನು ಕೂರಿಸಿಕೊಂಡು ಹೋಗುವ ಮೂರು ಚಕ್ರದ ಸೈಕಲ್ ಓಡಿಸುವ ಪ್ರಯತ್ನ ಮಾಡಿದ್ದೀರೇನು? ನೀವು ಪ್ರಯತ್ನಿಸಿ ನೋಡಿ, ಈ ಕೌಶಲ್ಯ ನಿಮಗೆ ಆನಂದವನ್ನೂ ನೀಡುತ್ತದೆ ಮತ್ತು ನಿಮ್ಮ ಎಲ್ಲೆಯನ್ನು ಬದುಕಿನ ಮಿತಿಯನ್ನು ಮೀರಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಸ್ನೇಹಿತರೆ, ನಿಮ್ಮನ್ನು ಹೊರಗೆಳೆದುಏನಾದರೂ ಮಾಡಿ. ಜೀವನ ರೂಪಿಸಿಕೊಳ್ಳಲು ಇದು ಒಂದು ಅವಕಾಶ. ಎಲ್ಲ ಪರೀಕ್ಷೆಗಳು ಮುಗಿದು ಬಿಡಲಿ, ಜೀವನ ಭವಿಷ್ಯ ಹೊಸ ಘಟ್ಟ ತಲುಪಿದಾಗ ಕಲಿಯುವೆ ಎಂದರೆ ಆ ಅವಕಾಶ ಎಂದಿಗೂ ಬಾರದು. ನೀವು ಮತ್ತಾವುದೋ ಗೊಂದಲದಲ್ಲಿರುತ್ತೀರಾ, ಅದಕ್ಕಾಗಿಯೇ ನಾನು ಹೇಳುತ್ತಿದ್ದೇನೆ, ನಿಮಗೆ ಮ್ಯಾಜಿಕ್ ಕಲಿಯುವ ಆಸೆಯಿದ್ದರೆ ಇಸ್ಪೀಟ್ ಎಲೆಗಳ ಮ್ಯಾಜಿಕ್ ಕಲಿಯಿರಿ. ನಿಮ್ಮ ಸ್ನೇಹಿತರಿಗೆ ಆ ಮ್ಯಾಜಿಕ್ ತೋರಿಸಿ. ನಿಮಗೆ ಗೊತ್ತಿಲ್ಲದ ಒಂದಲ್ಲಾ ಒಂದು ವಿಷಯ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಇದರಿಂದ ನಿಮಗೆ ಖಂಡಿತಾ ಲಾಭವಾಗುತ್ತದೆ. ನಿಮ್ಮಲ್ಲಿರುವ ಮಾನವೀಯ ಶಕ್ತಿಗೆ ಚೈತನ್ಯ ದೊರೆಯುತ್ತದೆ. ವಿಕಾಸಕ್ಕೆ ಇದೊಂದು ಉತ್ತಮ ಅವಕಾಶ. ನನ್ನ ಅನುಭವದಿಂದ ಹೇಳುತ್ತಿದ್ದೇನೆ ಜಗತ್ತನ್ನು ನೋಡುವುದರಿಂದ, ನಮ್ಮ ಕಲ್ಪನೆಗೂ ಮೀರಿದ್ದನ್ನು ಕಲಿಯುವ ಮತ್ತು ಅರಿಯುವ ಅವಕಾಶ ಸಿಗುತ್ತದೆ. ಹೊಸ ಹೊಸ ಜಾಗಗಳು,ಹೊಸ ಹೊಸ ಪಟ್ಟಣಗಳು, ಹೊಸ ಹೊಸ ನಗರಗಳು, ಹೊಸ ಹೊಸ ಪ್ರದೇಶಗಳು. ಆದರೆ ಹೋಗುವ ಮೊದಲು ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ಬಗ್ಗೆ ಅಭ್ಯಸಿಸಿ, ಮತ್ತು ಅಲ್ಲಿಗೆ ತೆರಳಿ ಒಬ್ಬ ಉತ್ಸುಕನಂತೆ ಅದನ್ನು ನೋಡುವುದು, ತಿಳಿದುಕೊಳ್ಳುವುದು, ಜನರೊಂದಿಗೆ ಚರ್ಚಿಸುವುದು, ಅವರನ್ನು ಕೇಳುವುದು ಹಾಗೂ ಪ್ರಯತ್ನಿಸುವುದರಿಂದ ಸಿಗುವ ಆನಂದವೇ ಬೇರೆ.

ಅನುಭವ ಹಂಚಿಕೊಳ್ಳಿ
ಖಂಡಿತ ಇವೆಲ್ಲ ಪ್ರಯತ್ನಿಸಿ ಮತ್ತು ನಿರ್ಧರಿಸಿ. ಆದರೆ, ಹೆಚ್ಚಿನ ಪ್ರಯಾಣ ಬೇಡ. ಒಂದು ಸ್ಥಳಕ್ಕೆ ಭೇಟಿ ನೀಡಿದಾಗ 3-4 ದಿನ ಇರಿ. ನಂತರ ಮುಂದಿನ ಸ್ಥಳಕ್ಕೆ ತೆರಳಿ ಅಲ್ಲೂ ಮೂರು ದಿನ ಇರಿ. ಇದರಿಂದ ನಿಮಗೆ ಬಹಳಷ್ಟು ಕಲಿಯಲು ಸಿಗುತ್ತದೆ. ನೀವು ಎಲ್ಲೆ ಹೋದರೂ ನನಗೆ ಅದರ ಫೋಟೊ ಕಳುಹಿಸಿ ಎಂದು ಬಯಸುವೆ. ಹೊಸದಾಗಿ ಏನಾದರೂ ನೋಡಿದಿರಾ? ಎಲ್ಲಿಗೆ ಹೋಗಿದ್ದಿರಿ? ನೀವು Hash tag Incredible India ಬಳಸಿ ನಿಮ್ಮ ಈ ಅನುಭವಗಳನ್ನು ಹಂಚಿಕೊಳ್ಳಿ.

ರಜೆಗೆ ರಜೆ ಮತ್ತು ದುಡಿಮೆಗೆ ದುಡಿಮೆ
‘ಸ್ನೇಹಿತರೇ, ಈ ಬಾರಿ ಭಾರತ ಸರ್ಕಾರವೂ ನಿಮಗೆಂದೇ ಒಂದು ಉತ್ತಮ ಅವಕಾಶ ನೀಡಿದೆ. ನವ ಪೀಳಿಗೆಯಂತೂ ನಗದು ವ್ಯವಹಾರದಿಂದ ಹೆಚ್ಚು-ಕಡಿಮೆ ಮುಕ್ತರಾಗುತ್ತಿದ್ದಾರೆ. ಅವರಿಗೆ ನಗದು ಅವಶ್ಯಕತೆ ಇಲ್ಲ. ಅವರು ಡಿಜಿಟಲ್ ಕರೆನ್ಸಿಯಲ್ಲಿ ವಿಶ್ವಾಸ ಬೆಳೆಸಿಕೊಂಡಿದ್ದಾರೆ. ನೀವೂ ಮಾಡಬಲ್ಲಿರಿ. ಆದರೆ, ಇದೇ ಯೋಜನೆಯಿಂದ ನೀವು ಗಳಿಸಲೂಬಹುದು ಎಂದು ಎಂದಾದರೂ ಯೋಚಿಸಿದ್ದೀರಾ..? ಭಾರತ ಸರ್ಕಾರದ ಒಂದು ಯೋಜನೆಯಿದೆ. ನೀವು ಭೀಮ್ ಆಪ್ ಡೌನ್ ಲೋಡ್ ಮಾಡಿಕೊಳ್ಳುತ್ತಿರಬಹುದು. ಉಪಯೋಗಿಸುತ್ತಲೂ ಇರಬಹುದು. ಆದರೆ, ಇತರರಿಗೆ ರೆಫರ್ ಮಾಡಿದರೆ. ಅವರು ಇದಕ್ಕೆ ಸೇರ್ಪಡೆಯಾದರೆ ಮತ್ತು ಆ ಹೊಸ ವ್ಯಕ್ತಿ ಮೂರು ಬಾರಿ ಆರ್ಥಿಕ ವ್ಯವಹಾರ ಮಾಡಿದರೆ, ಈ ಕೆಲಸ ಮಾಡಿದ್ದಕ್ಕಾಗಿ ನಿಮಗೆ 1೦ ರೂಪಾಯಿ ದೊರೆಯುತ್ತದೆ. ನಿಮ್ಮ ಖಾತೆಯಲ್ಲಿ ಸರ್ಕಾರದ ವತಿಯಿಂದ 1೦ ರೂಪಾಯಿ ಜಮಾ ಆಗುವುದು. ಒಂದು ವೇಳೆ ನೀವು ದಿನಕ್ಕೆ 2೦ ಜನರಿಂದ ಈ ಕಾರ್ಯ ಮಾಡಿಸಿದರೆ, ಸಂಜೆಯ ವೇಳೆಗೆ 2೦೦ ರೂಪಾಯಿಗಳನ್ನು ಸಂಪಾದಿಸುವಿರಿ. ವ್ಯಾಪಾರಿಗಳಿಗೂ ಆದಾಯವಾಗಬಹುದು, ವಿದ್ಯಾರ್ಥಿಗಳಿಗೂ ಆದಾಯವಾಗಬಹುದು. ಹಾಗೂ ಈ ಯೋಜನೆ ಅಕ್ಟೋಬರ್ 14ರ ವರೆಗೂ ಇದೆ. ಡಿಜಿಟಲ್ ಇಂಡಿಯಾ ನಿರ್ಮಾಣಕ್ಕೆ ನಿಮ್ಮ ಪಾಲುದಾರಿಕೆ ಇರುತ್ತದೆ. ನೀವು ನವ ಭಾರತದ ಒಬ್ಬ ಆರಕ್ಷಕರಾಗುವಿರಿ, ಹಾಗಾದರೆ, ರಜೆಗೆ ರಜೆ ಮತ್ತು ದುಡಿಮೆಗೆ ದುಡಿಮೆ. ರೆಫರ್ ಮಾಡಿ ಗಳಿಸಿ.

ಪ್ರತಿಯೊಬ್ಬ ಭಾರತೀಯರೂ ಗಣ್ಯನೇ
‘ಸಾಮಾನ್ಯವಾಗಿ ನಮ್ಮ ದೇಶದಲ್ಲಿ ವಿ.ಐ.ಪಿ ಸಂಸ್ಕೃತಿಯ ಬಗ್ಗೆ ದ್ವೇಷದ ಮನೋಭಾವವಿದೆ. ಆದರೆ, ಇದು ಇಷ್ಟು ಆಳವಾಗಿ ಬೇರೂರಿದೆ ಎಂಬುದು ಇತ್ತೀಚೆಗೆ ನನ್ನ ಅನುಭವಕ್ಕೆ ಬಂತು. ಎಷ್ಟೇ ದೊಡ್ಡ ವ್ಯಕ್ತಿ ಇದ್ದರೂ, ಭಾರತದಲ್ಲಿ, ತಮ್ಮ ವಾಹನದ ಮೇಲೆ ಕೆಂಪು ದೀಪ ಅಳವಡಿಸಿಕೊಂಡು ಓಡಾಡುವಂತಿಲ್ಲ ಎಂದು ಭಾರತ ಸರ್ಕಾರ ನಿರ್ಧರಿಸಿದೆ. ಅದು ಒಂದು ರೀತಿ ವಿ.ಐ.ಪಿ ಸಂಸ್ಕೃತಿಯ ಸಂಕೇತವಾಗಿಬಿಟ್ಟಿತ್ತು. ಆದರೆ, ನನ್ನ ಅನುಭವ ಏನು ಹೇಳುತ್ತೆ ಅಂದರೆ, ಕೆಂಪು ದೀಪ ವಾಹನದ ಮೇಲೆ ಇಡಲಾಗುತ್ತೆ, ಗಾಡಿಗಳ ಮೇಲೆ ಇಡಲಾಗುತ್ತೆ,ಆದರೆ ನಿಧಾನವಾಗಿ ಅದು ನೆತ್ತಿಗೇರಿ ಅವರು ಮಾನಸಿಕವಾಗಿ ಈ ವಿ.ಐ.ಪಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುತ್ತಾರೆ. ಈಗ ಕೆಂಪು ದೀಪ ಹೋಗಿಯಾಗಿದೆ, ಆದರೆ,ಇದರಿಂದ ತಲೆಗೇರಿದ ಕೆಂಪು ದೀಪದ ಭ್ರಮೆಯೂ ಹೋಗಿದೆಯೆಂದು ಯಾರೂ ಹೇಳಲಾಗುವುದಿಲ್ಲ. ನನಗೆ ಒಂದು ಆಸಕ್ತಿದಾಯಕವಾದ ದೂರವಾಣಿ ಕರೆ ಬಂದಿತ್ತು. ಆ ಕರೆ ಮಾಡಿದವರು ತಮ್ಮ ಆಕಾಂಕ್ಷೆಗಳನ್ನು ಹೀಗೆ ವ್ಯಕ್ತಪಡಿಸಿದರು, ಆದರೆ, ಆ ಕರೆಯಿಂದ,ಸಾಮಾನ್ಯ ಮನುಷ್ಯರು ಇಂಥದ್ದನ್ನೆಲ್ಲಾ ಇಷ್ಟಪಡೋದಿಲ್ಲ ಎಂಬುದು ನನಗೆ ವೇದ್ಯವಾಯಿತು.

‘ನಮಸ್ಕಾರ ಪ್ರಧಾನ ಮಂತ್ರಿಗಳೇ, ನಾನು ಶಿವಾ ಚೌಬೆ ಮಧ್ಯ ಪ್ರದೇಶದ ಜಬಲ್ಪುರ್ದಿಂದ, ಮಾತಾಡುತ್ತಿದ್ದೇನೆ. ನಾನು ಸರ್ಕಾರ ಕೆಂಪು ದೀಪ ರದ್ದು ಮಾಡಿದ ಬಗ್ಗೆ ಸ್ವಲ್ಪ ಹೇಳಲು ಇಷ್ಟ ಪಡುತ್ತೇನೆ. ನಾನು ದಿನ ಪತ್ರಿಕೆಯಲ್ಲಿ ಓದಿದ್ದೆ. ಅದರಲ್ಲಿ ಒಂದು ಸಾಲು ಹೀಗೆ ಬರೆದಿತ್ತು ‘every Indian is a VIP on a road’ (ರಸ್ತೆಗಳಲ್ಲಿ ಪ್ರತಿಯೊಬ್ಬ ಭಾರತೀಯರೂ ಗಣ್ಯನೇ) ಅದನ್ನು ಓದಿ ಇಂದು ನನ್ನ ಸಮಯವೂ ಅಷ್ಟೇ ಮಹತ್ವವಾದದ್ದು ಎಂದು ತಿಳಿದು ನನಗೆ ಬಹಳ ಹೆಮ್ಮೆ ಎನಿಸಿತು ಮತ್ತು ಸಂತೋಷವೂ ಆಯಿತು. ನನಗೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವುದು ಬೇಡವಾಗಿದೆ, ನನಗೆ ಬೇರೆಯವರಿಗೋಸ್ಕರ ನಿಲ್ಲುವುದೂ ಬೇಡವಾಗಿದೆ. ನಿಮ್ಮ ಈ ನಿರ್ಧಾರಕ್ಕೆ ನಾನು ಹೃತ್ಪೂರ್ವಕ ಅಭಿನಂದನೆ ಹೇಳುತ್ತೇನೆ. ಹಾಗೇ ನೀವು ಆರಂಭಿಸಿರುವ ಸ್ವಚ್ಛ ಭಾರತ ಅಭಿಯಾನದಿಂದ ಕೇವಲ ನಮ್ಮ ದೇಶ ಸ್ವಚ್ಛವಾಗುವುದಷ್ಟೇ ಅಲ್ಲ ಜೊತೆಗೆ ನಮ್ಮ ವಿ ಐ ಪಿ ಗೂಂಡಾಗಿರಿನೂ ಸ್ವಚ್ಛವಾಗುತ್ತಿರುವುದಕ್ಕೆ ನನ್ನ ಧನ್ಯವಾದಗಳು.

‘ಸರ್ಕಾರದ ನಿರ್ಣಯದಿಂದ ಕೆಂಪು ದೀಪ ತೆಗೆದು ಹಾಕುವುದು ವ್ಯವಸ್ಥೆಯ ಒಂದು ಭಾಗವಾಗಿದೆ. ಆದರೆ ಮನಸ್ಸಿನಿಂದಲೂ ನಾವು ಪ್ರಯತ್ನ ಮಾಡಿ ಇದನ್ನು ಹೊರ ತೆಗೆಯಬೇಕಿದೆ. ನಾವೆಲ್ಲರೂ ಒಗ್ಗೂಡಿ ಜಾಗೃತ ಪ್ರಯತ್ನವನ್ನು ಮಾಡಿದರೆ ಇದನ್ನು ತೆಗೆಯಬಹುದಾಗಿದೆ. ನವ ಭಾರತದ ನಮ್ಮ ವಿಚಾರ ಧಾರೆ, ವಿಐಪಿ ಸ್ಥಾನದಲ್ಲಿ ಇಪಿಐಗೆ ಮಹತ್ವ ಬೆಳೆಯಲಿ ಎಂಬುದು ನನ್ನ ಆಶಯ. ನಾನು ವಿಐಪಿ ಸ್ಥಾನದಲ್ಲಿ ಇಪಿಐ ಎಂದಾಗ ನನ್ನ ಭಾವನೆಗಳು ಸ್ಪಷ್ಟವಾಗಿವೆ - Every Person is Important. ಪ್ರತಿ ವ್ಯಕ್ತಿಗೂ ಒಂದು ಮಹತ್ವವಿದೆ, ಪ್ರತಿ ವ್ಯಕ್ತಿಗೂ ಒಂದು ತೇಜಸ್ಸಿದೆ. 125 ಕೋಟಿ ದೇಶದ ಜನರ ಮಹತ್ವವನ್ನು ನಾವು ಸ್ವೀಕರಿಸಬೇಕು, 125 ಕೋಟಿ ನಾಗರಿಕರ ತೇಜಸ್ಸನ್ನು ಸ್ವೀಕರಿಸಿದರೆ ಮಹತ್ವದ ಕನಸುಗಳನ್ನು ನನಸಾಗಿಸಲು ಅದ್ಭುತವಾದ ಶಕ್ತಿ ಒಗ್ಗೂಡುತ್ತದೆ. ನಾವೆಲ್ಲರೂ ಸೇರಿ ಒಗ್ಗೂಡಿಸಬೇಕಿದೆ.

‘ನನ್ನ ಪ್ರಿಯ ದೇಶ ವಾಸಿಗಳೇ, ನಾವು ನಮ್ಮ ಇತಿಹಾಸವನ್ನು, ನಮ್ಮ ಸಂಸ್ಕೃತಿಯನ್ನು,ನಮ್ಮ ಪರಂಪರೆಗಳನ್ನು ಆಗಾಗ ನೆನಪಿಸಿಕೊಳ್ಳಬೇಕೆಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಅದರಿಂದ ನಮಗೆ ಶಕ್ತಿ ದೊರೆಯುತ್ತದೆ, ಪ್ರೇರಣೆ ದೊರೆಯುತ್ತದೆ. ಈ ವರ್ಷ ನಾವು 125 ಕೋಟಿ ದೇಶದ ಜನತೆ, ಸಂತ ರಾಮಾನುಜಾಚಾರ್ಯರ 1೦೦೦ ವರ್ಷದ ಜಯಂತಿಯನ್ನು ಆಚರಿಸುತ್ತಿದ್ದೇವೆ. ಯಾವುದೋ ಒಂದು ಕಾರಣದಿಂದ ನಾವು ಎಷ್ಟು ಸಂಕುಚಿತರಾಗಿದ್ದೇವೆ, ಎಷ್ಟು ಸಣ್ಣವರಾಗಿದ್ದೇವೆಂದರೆ, ಹೆಚ್ಚೆಂದರೆ ಶತಮಾನಗಳವರೆ ಮಾತ್ರವೇ ಯೋಚನೆ ಮಾಡುತ್ತೇವೆ. ಪ್ರಪಂಚದ ಇತರ ದೇಶಗಳಲ್ಲಿ ಶತಮಾನಕ್ಕೆ ಹೆಚ್ಚಿನ ಮಹತ್ವವಿರಬಹುದು. ಆದರೆ, ಭಾರತ ಎಷ್ಟು ಪುರಾತನ ರಾಷ್ಟ್ರವೆಂದರೆ, ಸಾವಿರಾರು ವರ್ಷಗಳಿಗಿಂತಲೂ ಹಳೆಯ ನೆನಪುಗಳನ್ನು ಆಚರಿಸುವ ಅವಕಾಶ ನಮಗೆ ದೊರೆತಿದೆ. ಸಾವಿರ ವರ್ಷಗಳ ಹಿಂದಿನ ಸಮಾಜ ಹೇಗಿರಬಹುದು? ಆಗಿನ ಆಲೋಚನೆಗಳು ಹೇಗಿರಬಹುದು? ಸ್ವಲ್ಪ ಕಲ್ಪನೆ ಮಾಡಿಕೊಂಡು ನೋಡಿ. ಇವತ್ತಿಗೂ ಸಾಮಾಜಿಕ ಕಟ್ಟುಪಾಡುಗಳಿಂದ ಹೊರಬರುವುದು ಬಹಳ ಕಷ್ಟ. 1೦೦೦ ವರ್ಷದ ಹಿಂದೆ ಹೇಗಾಗುತ್ತಿರಬಹುದು? ರಾಮಾನುಜಾಚಾರ್ಯರು ನಮ್ಮ ಸಮಾಜದಲ್ಲಿದ್ದ ಕೆಟ್ಟದ್ದನ್ನ, ಮೇಲು -ಕೀಳು ಎಂಬ ಭಾವನೆ, ಅಸ್ಪೃಶ್ಯತೆಯ ಭಾವನೆ ಮತ್ತು ಜಾತಿವಾದದ ಭಾವನೆಯ ವಿರುದ್ಧ ಬಹಳ ದೊಡ್ಡ ಸಮರ ಸಾರಿದ್ದರು ಎಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಸ್ವತಃ ಅವರು ತಮ್ಮ ಆಚರಣೆಗಳಿಂದ, ಸಮಾಜ ಯಾರನ್ನು ಅಸ್ಪೃಶ್ಯರು ಎಂದು ಪರಿಗಣಿಸುತ್ತಿತ್ತೋ ಅಂಥವರನ್ನ ಅಪ್ಪಿಕೊಂಡಿದ್ದರು. ಸಾವಿರಾರು ವರ್ಷಗಳ ಹಿಂದೇ ಅವರ ದೇವಸ್ಥಾನದ ಪ್ರವೇಶಕ್ಕೆ ಇವರು ಆಂದೋಲನ ನಡೆಸಿದ್ದರು ಹಾಗೂ ಯಶಸ್ವಿಯಾಗಿ ಅವರಿಗೆ ದೇವಸ್ಥಾನದ ಪ್ರವೇಶಕ್ಕೂ ಅವಕಾಶ ಮಾಡಿಕೊಟ್ಟಿದ್ದರು. ಪ್ರತಿ ಯುಗದಲ್ಲೂ,ನಮ್ಮ ಸಮಾಜದಲ್ಲಿರುವಂಥ ಕೆಟ್ಟದ್ದನ್ನು ನಿವಾರಿಸಲು, ನಮ್ಮ ಸಮಾಜದಿಂದಲೇ ಮಹಾ ಪುರುಷರು ಹುಟ್ಟಿ ಬರುತ್ತಿರುವುದು ನಮ್ಮ ಸೌಭಾಗ್ಯ. ಸಂತ ಶ್ರೀ ರಾಮಾನುಜಾಚಾರ್ಯರ 1೦೦೦ ವರ್ಷದ ಜಯಂತಿಯನ್ನು ಆಚರಿಸುವಾಗ, ಸಮಾಜದ ಒಗ್ಗಟ್ಟಿಗಾಗಿ, ಸಂಘಟನೆಯಲ್ಲಿ ಶಕ್ತಿ ಅಡಗಿದೆ ಎಂಬ ಭಾವನೆಯನ್ನು ಜಾಗೃತಗೊಳಿಸಲು ನಾವು ಅವರಿಂದ ಪ್ರೇರಣೆ ಪಡೆಯಬೇಕು.

ಅಂಚೆ ಚೀಟಿ
‘ಭಾರತ ಸರ್ಕಾರವೂ ನಾಳೆ ಮೇ 1ರಂದು ‘ಆಚಾರ್ಯ ರಾಮಾನುಜಾಚಾರ್ಯರ’ ಸ್ಮರಣಾರ್ಥ ಒಂದು ಅಂಚೆ ಚೀಟಿನ್ನು ಬಿಡುಗಡೆ ಮಾಡಲಿದೆ. ನಾನು ಆಚಾರ್ಯ ರಾಮಾನುಜಾಚಾರ್ಯರಿಗೆ ಗೌರವ ಪೂರ್ವಕವಾದ ನಮನಗಳನ್ನು ಸಲ್ಲಿಸುತ್ತೇನೆ,ಶ್ರದ್ಧೆಯನ್ನು ಅರ್ಪಿಸುತ್ತೇನೆ.

‘ಕಾರ್ಮಿಕ ದಿನಾಚರಣೆ’
‘ನನ್ನ ಪ್ರೀತಿಯ ದೇಶವಾಸಿಗಳೇ, ನಾಳೆ ಮೇ 1ಕ್ಕೆ ಮತ್ತೊಂದು ಮಹತ್ವವೂ ಇದೆ. ವಿಶ್ವದ ಹಲವಾರು ಭಾಗಗಳಲ್ಲಿ ’ಕಾರ್ಮಿಕ ದಿನಾಚರಣೆ’ ಎಂದು ಆಚರಿಸುತ್ತಾರೆ. ಹಾಗೇ ‘ಕಾರ್ಮಿಕ ದಿನಾಚರಣೆ’ ಎಂದಾಗ, ದುಡಿಮೆ ಬಗ್ಗೆ ಚರ್ಚೆಯಾಗುತ್ತೆ, ಕಾರ್ಮಿಕರ ಬಗ್ಗೆ ಚರ್ಚೆಯಾಗುತ್ತೆ,ಇಂಥ ಸಮಯದಲ್ಲಿ ನನಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೆನಪಾಗುವುದು ಸಹಜ. ಕಾರ್ಮಿಕರಿಗೆ ಇಂದು ಲಭಿಸುತ್ತಿರುವ ಸೌಕರ್ಯಗಳು, ಗೌರವ, ಬಾಬಾ ಸಾಹೇಬರಿಂದ ಎಂಬುದು ಬಹುಶಃ ಕೆಲವು ಜನರಿಗೆ ಮಾತ್ರ ಗೊತ್ತು, ಅವರಿಗೆ ನಾವು ಕೃತಜ್ಞರಾಗಿದ್ದೇವೆ. ಕಾರ್ಮಿಕರ ಒಳಿತಿಗಾಗಿ ಬಾಬಾ ಸಾಹೇಬರ ಕೊಡುಗೆ ಮರೆಯಲಾಗದು. ಇಂದು ನಾನು ಬಾಬಾ ಸಾಹೇಬರ ಬಗ್ಗೆ ಮಾತನಾಡಿದಾಗ, ಸಂತ ರಾಮಾನುಜಾಚಾರ್ಯರ ಬಗ್ಗೆ ಮಾತನಾಡಿದಾಗ, 12ನೇ ಶತಮಾನದ, ಕರ್ನಾಟಕದ ಮಹಾನ್ ಮಾನವತಾವಾದಿ ಮತ್ತು ಸಮಾಜ ಸುಧಾರಕರಾದ ಜಗದ್ಗುರು ಬಸವೇಶ್ವರರ ನೆನಪಾಗುತ್ತದೆ. ನಿನ್ನೆ ನನಗೆ ಒಂದು ಸಮಾರಂಭಕ್ಕೆ ಹೋಗುವ ಅವಕಾಶ ಲಭಿಸಿತ್ತು. ಅವರ ವಚನಾಮೃತಗಳನ್ನು ಲೋಕಾರ್ಪಣೆ ಮಾಡುವ ಸಂದರ್ಭವಾಗಿತ್ತು. 12ನೇ ಶತಮಾನದಲ್ಲಿಯೇ, ಕನ್ನಡ ಭಾಷೆಯಲ್ಲಿ ಅವರು, ಶ್ರಮ ಹಾಗೂ ಶ್ರಮಿಕರ ಬಗ್ಗೆ ದೀರ್ಘ ವಿಚಾರಗಳನ್ನು ಮಂಡಿಸಿದ್ದರು. ಕನ್ನಡದಲ್ಲಿ ಅವರು ಕಾಯಕವೇ ಕೈಲಾಸ ಎಂದು ಹೇಳಿದ್ದರು. ಅದರ ಅರ್ಥ - ನೀವು ಕೇವಲ ನಿಮ್ಮ ಪರಿಶ್ರಮದಿಂದ ಮಾತ್ರ, ಆ ಭಗವಂತ ಶಿವನ ಮನೆಯಾದ, ಕೈಲಾಸ ಹೊಂದಬಹುದು ಎಂದು, ಅಂದರೆ ಕರ್ಮವನ್ನು ಸವಿಸುವ ಮೂಲಕವೇ ಸ್ವರ್ಗ ಪ್ರಾಪ್ತಿಯಾಗುತ್ತದೆ. ಮತ್ತೊಂದು ರೀತಿ ಹೇಳಬೇಕೆಂದರೆ ಶ್ರಮವೇ ಶಿವ. ನಾನು ಪದೇ ಪದೇ ’ಶ್ರಮೇವ ಜಯತೆ’ ಎಂದು ಹೇಳುತ್ತಿರುತ್ತೇನೆ.‘ಮಾಡುವ ಕೆಲಸದ ಬಗ್ಗೆ ಗೌರವ’ದ ಬಗ್ಗೆ ಹೇಳುತ್ತಿರುತ್ತೇನೆ. ನನಗೆ ಭಾರತೀಯ ಕಾರ್ಮಿಕ ಸಂಘದ ಪೋಷಕರು ಮತ್ತು ಚಿಂತಕರು ನೆನಪಿದ್ದಾರೆ, ಅವರು ಕಾರ್ಮಿಕರಿಗಾಗಿ ಬಹಳ ಚಿಂತನೆ ಮಾಡಿದ್ದರು. ಅವರಲ್ಲಿ ಶ್ರೀಮಾನ್ ದತ್ತೋಪಂತ್ ಠೇಂಗಡಿ ಹೇಳುತ್ತಿದ್ದರು - ಒಂದೆಡೆ ಮಾವೋವಾದಿಗಳಿಂದ ಪ್ರೇರಿತವಾದ ವಿಚಾರ ಜಗತ್ತಿನ ಕಾರ್ಮಿಕರೇ ಒಂದಾಗಿ ಮತ್ತೊಂದೆಡೆ ದತ್ತೋಪಂತ್ ಠೇಂಗಡಿ ಹೇಳುತ್ತಿದ್ದರು. ಕಾರ್ಮಿಕರೇ ಬನ್ನಿ ಜಗತ್ತನ್ನು ಒಗ್ಗೂಡಿಸೋಣ. ಒಂದೆಡೆ ‘Workers of the world unite’ ಎಂದು ಹೇಳುತ್ತಿದ್ದರೆ, ಭಾರತೀಯ ಅವಲೋಕನದಿಂದ ಹೊರಬಂದಂತಹ ವಿಚಾರಧಾರೆಯೊಂದಿಗೆ ದತ್ತೋಪಂತ್ ಠೇಂಗಡಿ ಹೇಳುತ್ತಿದ್ದರು ‘Workers unite the world’ ಎಂದು. ಇವತ್ತು ನಾನು ಕಾರ್ಮಿಕರನ್ನು ನೆನಸಿಕೊಂಡಾಗ ದತ್ತೋಪಂತ್ ಠೇಂಗಡಿರವರ ನೆನಪು ಬರುವುದೂ ಸಹಜ.

ಬುದ್ಧ ಪೌರ್ಣಮೆ
‘ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ನಂತರ ನಾವು ಬುದ್ಧ ಪೌರ್ಣಮೆಯನ್ನು ಆಚರಿಸಲಿದ್ದೇವೆ. ವಿಶ್ವದಾದ್ಯಂತ ಭಗವಾನ್ ಬುದ್ಧನ ಅನುಯಾಯಿಗಳು ಈ ಹಬ್ಬ ಆಚರಿಸುತ್ತಾರೆ. ಇವತ್ತು ವಿಶ್ವ ಎದುರಿಸುತ್ತಿರುವ ಸಮಸ್ಯೆಗಳಾದ ಹಿಂಸೆ, ಯುದ್ಧ, ನೈಸರ್ಗಿಕ ವಿಕೋಪಗಳು, ಮತ ಕಲಹಗಳು ಇತ್ಯಾದಿಗಳ ವಾತಾವರಣ ನೋಡಿದಾಗ, ಬುದ್ಧನ ವಿಚಾರಧಾರೆಗಳು ಬಹಳ ಸೂಕ್ತ ಎನಿಸುತ್ತವೆ. ಅದರಲ್ಲೂ ನಮ್ಮ ಭಾರತದಲ್ಲಿ ಅಶೋಕನ ಜೀವನ, ಯುದ್ಧದಿಂದ ಬುದ್ಧನ ಯಾತ್ರೆಯವರೆಗೂ ಆದಂತಹ ಉತ್ತಮ ಸಂಕೇತಗಳಿವೆ. ಬುದ್ಧ ಪೌರ್ಣಮಿಯ ಈ ಮಹತ್ವದ ಉತ್ಸವದ ಸಂದರ್ಭದಲ್ಲಿ, ವಿಶ್ವ ಸಂಸ್ಥೆ ವೇಸಕ್ ದಿನ ಆಚರಿಸುತ್ತಿದ್ದಾರೆ ಅದರಲ್ಲಿ ನಾನಿರುತ್ತೇನೆ ಎಂಬುದು ನನ್ನ ಸೌಭಾಗ್ಯವಾಗಿದೆ. ಈ ವರ್ಷ ಇದು ಶ್ರೀಲಂಕಾದಲ್ಲಿ ನಡೆಯಲಿದೆ. ಇಂಥ ಪವಿತ್ರ ಹಬ್ಬದಂದು ನಾನು ಶ್ರೀಲಂಕಾದಲ್ಲಿ ಭಗವಾನ್ ಬುದ್ಧರಿಗೆ ನನ್ನ ಶ್ರದ್ಧೆಯನ್ನು ಅರ್ಪಿಸಲು ಒಂದು ಅವಕಾಶ ದೊರೆಯಲಿದೆ. ಅವರ ನೆನಪುಗಳನ್ನು ಮೆಲುಕು ಹಾಕಲು ಅವಕಾಶ ಸಿಗಲಿದೆ.

ಮೇ 5ರಂದು ಭಾರತ, ದಕ್ಷಿಣ ಏಷಿಯಾ ಉಪಗ್ರಹ ಉಡಾವಣೆ
‘ನನ್ನ ಪ್ರೀತಿಯ ದೇಶವಾಸಿಗಳೇ, ಭಾರತದಲ್ಲಿ ಎಂದಿಗೂ ‘ಸಬ್ ಕಾ ಸಾಥ್ - ಸಬ್ ಕಾ ವಿಕಾಸ್’ ಎಲ್ಲರೊಂದಿಗೆ ಎಲ್ಲರ ಪ್ರಗತಿ ಎಂಬ ಮಂತ್ರದೊಂದಿಗೆ ಮುಂದುವರೆಯಲು ಪ್ರಯತ್ನ ಮಾಡಿದ್ದೇನೆ. ಹಾಗೇ ನಾವು ‘ಸಬ್ ಕಾ ಸಾಥ್ - ಸಬ್ ಕಾ ವಿಕಾಸ್’ ಎಂದಾಗ ಅದು ಕೆವಲ ಭಾರತಕ್ಕೆ ಮಾತ್ರ ಸೀಮಿತವಾಗುವುದಿಲ್ಲ, ಅದನ್ನು ವಿಶ್ವ ಮಟ್ಟದಲ್ಲಿ ಅಳವಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ನಮ್ಮ ನೆರೆ ಹೊರೆಯ ದೇಶಗಳಿಗೂ ಪ್ರಯತ್ನಿಸುತ್ತಿದ್ದೇವೆ. ನಮ್ಮ ನೆರೆ ಹೊರೆಯ ದೇಶಗಳ ಸಹಕಾರವೂ ಇರಲಿ,ನಮ್ಮ ಅಕ್ಕ ಪಕ್ಕದ ದೇಶಗಳ ಬೆಳವಣಿಗೆಯೂ ಆಗಲಿ. ಹಲವಾರು ಯೋಜನೆಗಳು ನಡೆಯುತ್ತಿವೆ. ಮೇ 5ರಂದು ಭಾರತ, ದಕ್ಷಿಣ ಏಷಿಯಾ ಉಪಗ್ರಹ ಉಡಾವಣೆ ಮಾಡುತ್ತಿದೆ. ಈ ಉಪಗ್ರಹಕ್ಕಿರುವ ಸಾಮರ್ಥ್ಯ ಮತ್ತು ಸೌಲಭ್ಯಗಳು ದಕ್ಷಿಣ ಏಷಿಯಾದ ಆರ್ಥಿಕ ಮತ್ತು ಅಭಿವೃದ್ಧಿಯ ಆದ್ಯತೆಗಳನ್ನು ಪೂರೈಸಲು ನೆರವಾಗುತ್ತದೆ. ಅದು ನೈಸರ್ಗಿಕ ಸಂಪನ್ಮೂಲಗಳ ಮ್ಯಾಪಿಂಗ್ ಆಗಿರಬಹುದು, ಟೆಲಿ-ಮೆಡಿಸಿನ್ ಇರಬಹುದು, ಶೈಕ್ಷಣಿಕ ಕ್ಷೇತ್ರವಿರಬಹುದು, ಆಳವಾದ ಮಾಹಿತಿ ತಂತ್ರಜ್ಞಾನ ಸಂಪರ್ಕವೇ ಇರಬಹುದು ಅಥವಾ ಜನರಿಂದ ಜನರಿಗೆ ಸಂಪರ್ಕದ ಪ್ರಯತ್ನವಿರಬಹುದು. ದಕ್ಷಿಣ ಏಷಿಯಾದ ಈ ಉಪಗ್ರಹ ನಾವು ಎಲ್ಲ ಕ್ಷೇತ್ರಗಳಲ್ಲೂ ಪೂರ್ಣಪ್ರಮಾಣದಲ್ಲಿ ಮುಂದುವರೆಯಲು ಸಹಾಯಕವಾಗಲಿದೆ. ಸಂಪೂರ್ಣ ದಕ್ಷಿಣ ಏಷಿಯಾದೊಂದಿಗೆ ಸಹಕಾರ ಬೆಳೆಸಲು ಇದು ಭಾರತದ ಒಂದು ಮಹತ್ವಪೂರ್ಣ ಹೆಜ್ಜೆಯಾಗಲಿದೆ ಮತ್ತು ಅತ್ಯಮೂಲ್ಯವಾದ ಕೊಡುಗೆಯಾಗಲಿದೆ. ದಕ್ಷಿಣ ಏಷಿಯಾದ ಬಗ್ಗೆ ನಮಗಿರುವ ಬದ್ಧತೆಯನ್ನು ಸಾರಲು ಇದೊಂದು ಉತ್ತಮ ಉದಾಹರಣೆಯಾಗಿದೆ. ದಕ್ಷಿಣ ಏಷಿಯಾ ಉಪಗ್ರಹದೊಂದಿಗೆ ಸಂಪರ್ಕ ಬೆಳೆಸಿರುವಂಥ ದಕ್ಷಿಣ ಏಷಿಯಾದ ಎಲ್ಲಾ ದೇಶಗಳಿಗೂ ನಾನು ಈ ಮಹತ್ವಪೂರ್ಣ ಪ್ರಯತ್ನಕ್ಕೆ ಸ್ವಾಗತ ಕೋರುತ್ತೇನೆ ಮತ್ತು ಶುಭ ಹಾರೈಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಹವಾಮಾನದಲ್ಲಿ ಬಿಸಿಲು ಬಹಳ ಇದೆ, ತಾಳಿಕೊಳ್ಳದ ಸ್ಥಿತಿ ಇದೆ. ನಿಮ್ಮ ಪ್ರೀತಿಪಾತ್ರರ ಬಗ್ಗೆ ಕಾಳಜಿ ವಹಿಸಿ, ನಿಮ್ಮ ಬಗ್ಗೆಯೂ ಕಾಳಜಿ ತೆಗೆದುಕೊಳ್ಳಿ. ಅನಂತ ಅನಂತ ಶುಭಾಶಯಗಳು. ಧನ್ಯವಾದ ಎಂದು ಮೋದಿ ಅವರು ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT