ಬೆಂಗಳೂರು: ‘ನಾನು ಚಿತ್ರದುರ್ಗದ– ದಾವಣಗೆರೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದೇನೆ. ಮತದಾರರ ಕಷ್ಟಸುಖಗಳಿಗೆ ಸ್ಪಂದಿಸಲು ಅಲ್ಲಿಯೇ ವಾಸವಿದ್ದೇನೆ.
ಆದರೆ, ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನನಗೆ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಇದೆ’ ಎಂದು ವಿಧಾನ ಪರಿಷತ್ ಸದಸ್ಯ ಜಿ.ರಘು ಆಚಾರ್ ಸ್ಪಷ್ಟಪಡಿಸಿದ್ದಾರೆ.
‘ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾಡಿರುವ ಆರೋಪದಿಂದ ನನ್ನ ಗೌರವಕ್ಕೆ ಚ್ಯುತಿ ಆಗಿದೆ. ಮಾನಸಿಕವಾಗಿ ಹಿಂಸೆಯಾಗಿದೆ. ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಅವಕಾಶ ಇದೆ’ ಎಂದು ತಿಳಿಸಿದ್ದಾರೆ.