ಸೋಮವಾರಪೇಟೆ: ಸಮೀಪದ ಬೇಳೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಕೋರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿಗೆ ಬಜೆಗುಂಡಿಯ ಪಾಂಚಜನ್ಯ ಯುವ ಸೇನೆ ದೂರು ನೀಡಿದೆ.
‘ಪಂಚಾಯಿತಿ ವ್ಯಾಪ್ತಿಯ ಕೊಳವೆ ಬಾವಿ ಪೈಪನ್ನು ಅಕ್ರಮವಾಗಿ ಮನೆಗೆ ಕೊಂಡೊಯ್ಯಲಾಗಿದೆ. ₹ 22 ಸಾವಿರ ಮೌಲ್ಯದ ಬ್ಯಾಟರಿಗಳಿಗೆ ₹ 29 ಸಾವಿರ ಬಿಲ್ ತೋರಿಸಲಾಗಿದೆ. ಫಿನಾಯಿಲ್ ಮತ್ತು ಬ್ಲೀಚಿಂಗ್ ಪೌಡರ್ ಖರೀದಿಯಲ್ಲೂ ಅಕ್ರಮ ನಡೆದಿದೆ’ ಎಂದು ಸೇನೆ ಅಧ್ಯಕ್ಷ ಪ್ರಶಾಂತ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಮನೆ ನಿರ್ಮಿಸುವಾಗಲೇ ಶೌಚಾಲಯಕ್ಕೂ ಹಣ ಬಿಡುಗಡೆಯಾಗುತ್ತಿದೆ. ಆದರೆ ಶೌಚಾಲಯ ಪ್ರತ್ಯೇಕವಾಗಿ ಹಣ ವಿನಿಯೋಗಿಸಲಾಗುತ್ತಿದೆ. ಈ ಅವ್ಯವಹಾರಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ (ಪಿಡಿಒ) ತಲೆಗೆ ಕಟ್ಟುವ ಯತ್ನ ನಡೆಯುತ್ತಿದೆ’ ಎಂದು ದೂರಿದರು. ಸೇನೆಯ ಪದಾಧಿಕಾರಿಗಳಾದ ವಿ.ಆರ್.ಮಹೇಶ್, ಬಿ.ಎಂ.ಪ್ರಶಾಂತ್, ವಿಶು ಪೂವಯ್ಯ, ಮಿಥುನ್ ಶೆಟ್ಟಿ ಇದ್ದರು.